Saturday 6 August 2016

ಕಾಟ್ಸ್ ವೊಲ್ಡ್

Published in Vijayakarnataka June 25th 2016


ಬ್ರಿಟನ್ ನಲ್ಲೀಗ ಬೇಸಿಗೆ. ಇಲ್ಲಿಯ ಬೇಸಿಗೆ ಎಂದರೆ ಆಗಾಗ ತುಂತುರು ಮಳೆ ಕೂಡ ಬರುತ್ತಿರುತ್ತದೆ. ಅದಿಲ್ಲದಿದ್ದರೆ ಬಿಸಿಲಿಗೆ ಕಣ್ಣು ಬಿಡಲೂ ಸಾಧ್ಯವಿಲ್ಲ ಎಂಬಷ್ಟು ಸೂರ್ಯನ ಕಿರಣ.  ಸ್ವಲ್ಪ ಹೊತ್ತು ಹೊರ ಹೋದರೂ ಸಾಕು ಸುಸ್ತು ಎನ್ನಿಸಿಬಿಡುತ್ತದೆ. ಇಂತಹ ಸಮಯದಲ್ಲೇ ಇಂಗ್ಲೆಂಡ್ ನ ಹಳ್ಳಿಗಳಿಗೆ ಹೋಗಬೇಕು. ಸುಂದರವಾದ ಸ್ವಚ್ಚವಾದ , ತಂಪಾಗಿಯೂ ಇರುವ ಈ ಹಳ್ಳಿಗಳು ನೋಡಲು ಬಹಳ ಸುಂದರವಾಗಿರುತ್ತದೆ. ಹಾಗೆಂದೇ ನಾವು ಈ ಭಾರಿ ಲಂಡನ್ ನಿಂದ ಹೋದದ್ದು ಕಾಟ್ಸ್ ವೊಲ್ಡ್ ಎಂಬ ಇಂಗ್ಲಿಷ್ ವಿಲೇಜ್ ಗೆ. 

ಬ್ರಿಟನ್ ನ ಬೀದಿಬೀದಿಗಳಲ್ಲಿ ಜಗಜಗಿಸುವ ದೀಪಗಳ ಸಾಲು ಹೇಗೆ ಜನರನ್ನು ಆಕರ್ಷಿಸುತ್ತದೆಯೋ ಹಾಗೆಯೇ ಇಲ್ಲಿನ ಹಳ್ಳಿಗಳೂ ಕೂಡ ಅಷ್ಟೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ ಎಂದರೆ ತಪ್ಪಾಗಲಾರದು. ವರ್ಷದಲ್ಲಿ ಕೇವಲ ೪ ತಿಂಗಳು ಬಂದು ಹೋಗುವ ಬೇಸಿಗೆ ಪ್ರಾರಂಭವಾಯಿತೆಂದರೆ ಜನರು ವೀಕೆಂಡ್ ಗಳನ್ನು  ಪ್ರವಾಸಕ್ಕೋಸ್ಕರ ಮೀಸಲಿಟ್ಟುಬಿಡುತ್ತಾರೆ.  ಇಲ್ಲಿನ ಹಳ್ಳಿಗಳಲ್ಲಿ ಕೆಲವು ಹಳ್ಳಿಗಳು ಟುರಿಸ್ಟ್ ಹಳ್ಳಿಗಳಾಗಿಬಿಟ್ಟಿವೆ. ಅಂತಹ ಒಂದು ಸುಂದರ ಟುರಿಸ್ಟ್ ಸ್ಥಳವೆಂದರೆ ಕಾಟ್ಸ್ ವೊಲ್ಡ್ . 

ಕಾಟ್ಸ್ ವೊಲ್ಡ್ ಇರುವುದು ಇಂಗ್ಲೆಂಡ್ ನ ದಕ್ಷಿಣ ಮಧ್ಯ ಭಾಗಗದಲ್ಲಿ ,ಈ ಭಾಗವು ಸುಮಾರು ಆರು ಕೌಂಟಿ ಗಳನ್ನೂ ತನ್ನ ಭಾಗವಾಗಿ ಸೇರಿಸಿಕೊಂಡಿದೆ. ಇದು ಒಂದು ಸುಂದರ ಮತ್ತು ಸ್ವಚ್ಚವಾದ ಹಳ್ಳಿ. ಈ ಹಳ್ಳಿ ಹೇಗಿದೆಯೆಂದರೆ ಸುಮಾರು ೧೦೦ ವರ್ಷಗಳಿಂದಲೂ ಕೂಡ ಹೀಗೆಯೇ ಇದೆ ಎಂದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಈ ಹಳ್ಳಿಯಲ್ಲಿ ಮನೆಗಳನ್ನು ಕಲ್ಲುಗಳಿಂದ ಕಟ್ಟಲಾಗಿದ್ದು ಯಾವುದೇ ರೀತಿಯ ಬಣ್ಣಗಳನ್ನು ಬಳಿಯದೆ ಅದೇ ಕಲ್ಲಿನ ಸೊಬಗನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಇದರ ವಿಶೇಷ.  ಈ ಕಲ್ಲುಗಳನ್ನು ಕಾಟ್ಸ್ ವೊಲ್ಡ್ ಸ್ಟೋನ್ ಎಂದೇ ಕರೆಯಲಾಗುತ್ತದೆ. ಇದೇನು ಬಹಳ ದೊಡ್ಡ ಹಳ್ಳಿಯಲ್ಲದಿದ್ದರೂ ಸುಮಾರು 145 ಕಿ ಮೀ ನಷ್ಟು ವಿಸ್ತಾರ ಹೊಂದಿದೆ. 

ಇಡೀ  ಹಳ್ಳಿಯನ್ನು ಸುಮಾರು ನೂರಾರು ವರ್ಷಗಳ ಹಿಂದೆ ಕಾಟ್ಸ್ ವೊಲ್ಡ್ ಕಲ್ಲಿನಿಂದಲೇ ನಿರ್ಮಿಸಿದ್ದು ಅಲ್ಲಲ್ಲಿ ಕೊಳಗಳು , ಸುಂದರ ಹಸಿರು ತುಂಬಿದ ಗದ್ದೆಗಳು, ನೀರು ಹರಿದು ಕೊಗಳು ಟನಾಲ್ ಗಳು , ಹಾಗೆಯೇ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಣ್ಣ ಪುಟ್ಟ ಟೀ ಸ್ಟಾಲ್  ಇಂತಹವನ್ನು ಇಲ್ಲಿ ಮಾಡಲಾಗಿದೆ. ಹಾಗೆಯೇ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸಲು ಮಾಡೆಲ್ ವಿಲೇಜ್ , ಮ್ಯೂಸಿಯಂ, ಪಕ್ಷಿ ವೀಕ್ಷಣಾಲಯಗಳನ್ನೂ ಇಲ್ಲಿ ತೆರೆದಿದ್ದಾರೆ. 

ಕಾಟ್ಸ್ ವೊಲ್ಡ್  ಸಾಕಷ್ಟು ಸಣ್ಣ ಪ್ರಾಂತ್ಯಗಳಿಂದ ಕೂಡಿದ್ದರೂ ಕೂಡ ಮುಖ್ಯವಾಗಿ ೩ ಹಳ್ಳಿಗಳ ಒಂದು ಸಂಗಮ ಎನ್ನಬಹುದು. ನೋಡಲು ಒಂದಕ್ಕಿಂತ ಒಂದು ಭಿನ್ನವಾಗಿದೆ. ಇವೆಲ್ಲಾ ಹಳ್ಳಿಗಳ ನಿರ್ಮಾಣದಲ್ಲೂ  ಕಾಟ್ಸ್ ವೊಲ್ಡ್  ಸ್ಟೋನ್ ಬಹಳ ಪ್ರಮುಖ ಪಾತ್ರವಹಿಸುತ್ತದೆ. 

ಬೀಬರಿ :- ಬೀಬರಿ ಎಂಬುದು ಕಾಟ್ಸ್ ವೊಲ್ಡ್ ನ ಒಂದು ಪುಟ್ಟ ಹಳ್ಳಿ ಈ ಹಳ್ಳಿಯಲ್ಲಿ ಕೇವಲ ೪೦ ಮನೆಗಳಿವೆ ಎಂಬುದೇ ಇಲ್ಲಿನ ವಿಶೇಷ. ಇದೊಂದು ಅಪ್ಪಟ ಹಳ್ಳಿ , ಹಾಗಂತ ಇಲ್ಲಿ ಇಂಟರ್ನೆಟ್ ,ವಿದ್ಯುತ್,ನೀರು  ಇವುಗಳಿಗೆ ಖಡಿತವಿಲ್ಲ. ಇವೆಲ್ಲವುಗಳೂ ಯಾವುದೇ ಪಟ್ಟಣಕ್ಕೆ ಕಡಿಮೆ ಇಲ್ಲದಂತೆ ದೊರೆಯುವುದು ಯುನೈಟೆಡ್ ಕಿಂಗ್ಡಾಮ್ ಅಥವಾ ಯಾವುದೇ ಒಂದು ಅಭಿವೃದ್ಧಿ ಹೊಂದಿದ ಖಂಡಗಳ ವಿಶೇಷ. ಈ ಹಳ್ಳಿಯ ವಿಶೇಷವೆಂದರೆ ಇಡೀ ಹಳ್ಳಿ ಕಲ್ಲಿನಿಂದ ಕಟ್ಟಲಾಗಿದ್ದು ಹಳ್ಳಿಯ ಅಂದವನ್ನು ಹೆಚ್ಚಿಸಲು ಟನಾಲ್ ಗಳನ್ನು ಅಲ್ಲಲ್ಲಿ ಕಟ್ಟಲಾಗಿದೆ. ಜೊತೆಗೆ ಸುಂದರವಾದ ಗಾರ್ಡನ್ ಮತ್ತು ಹರಿಯುವ ಸಣ್ಣ ಜಲಪಾತವನ್ನೂ ಇಲ್ಲಿ ನೋಡಬಹುದಾಗಿದೆ. ಅಲ್ಲಲ್ಲಿ ಹೂವಿನಿಂದ ಕೂಡಿದ ಸುಂದರ ಪಾರ್ಕ್ ಗಳು ಹಳ್ಳಿಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿವೆ. ಅದಲ್ಲದೆ ಇಲ್ಲಿ ಒಂದು ೧೫ ನೇ ಶತಮಾನದ ಚರ್ಚ್ ಮತ್ತು ಒಂದು ಸ್ಕೂಲ್ ಕೂಡ ಇದ್ದು ಈ ಶಾಲೆಯಲ್ಲಿ ಕೇವಲ ನಲವತ್ತು ಮಕ್ಕಳು ಇರುವುದು ಇಲ್ಲಿ ವಿಶೇಷ ಎಂದೇ ಪರಿಗಣಿಸಲಾಗುತ್ತದೆ. 

ಬರ್ಟನ್ ಆನ್ ದಿ ವಾಟರ್ :-  ಹೇಳುವಂತೆ  ಹಳ್ಳಗಳ ತಪ್ಪಲುಗಳಲ್ಲಿ ಮನೆಗಳನ್ನು ಹೊಂದಿದ್ದು , ಪ್ರವಾಸೋದ್ಯಮವೇ ಇಲ್ಲಿನ ಪ್ರಮುಖ ಆದಾಯವಾಗಿದೆ. ಇದು ಸಂಪೂರ್ಣ ಹಳ್ಳಿಯಲ್ಲ.  ಪ್ರವಾಸಿಗರಿಗಾಗಿ ಸಾಕಷ್ಟು ಟೀ ಸ್ಟಾಲ್ , ಐಸ್ ಕ್ರೀಂ ಸ್ಟಾಲ್ , ಮಾಡೆಲ್ ವಿಲೇಜ್ , ಮೋಟಾರ್ ಮ್ಯೂಸಿಯಂ , ಪಕ್ಷಿಧಾಮ ಇವೆಲ್ಲವುಗಳನ್ನು ಹೊಂದಿರುವ ಇದನ್ನು ಕಾಟ್ಸ್ ವೋಲ್ದ್ ನ ಸಣ್ಣ ಪಟ್ಟಣ ಎನ್ನಬಹುದು. ಹಳ್ಳಗಳು ಮತ್ತು ಅವುಗಳ ಅಕ್ಕಪಕ್ಕ ವಿರಮಿಸಲು ಹಸಿರು ಹಾಸು , ಸಣ್ಣ ಬ್ರಿಡ್ಜ್ ಇವುಗಳಿಂದ ಈ ಪಟ್ಟಣದ ಅಂದ ಇನ್ನಷ್ಟು ಹೆಚ್ಚಿದೆ. 
ಇಲ್ಲಿನ ವಿಶೇಷತೆ ಎಂದರೆ ಕಾಟ್ಸ್ ವೊಲ್ಡ್ ನ ಸಾಂಪ್ರದಾಯಿಕ ಟೀ  ಮತ್ತು ಕೇಕ್ ಅನ್ನು ಇಲ್ಲಿ ಸವಿಯಬಹುದು. ತಣ್ಣನೆಯ ಗಾಳಿಯನ್ನು ಹೊಂದಿದ ಇಂಗ್ಲೆಂಡ್ ನ ವಾತಾವರಣಕ್ಕೆ ಇಲ್ಲಿಯ ಹಬೆಯಾಡುವ ಟೀ  ಮತ್ತು ಅದರ ಜೊತೆಗೆ ಕಾಟ್ಸ್ ವೊಲ್ಡ್ ಕೇಕ್ ಮುದ ಕೊಡುತ್ತದೆ. 

ಬರ್ಫಾಡ್ : ಇದು ಕಾಟ್ಸ್ ವೊಲ್ಡ್ ಹಳ್ಳಿಯನ್ನು ಸಂಪೂರ್ಣಗೊಳಿಸುವ ಇನ್ನೊಂದು ಭಾಗ. ಇಲ್ಲಿನ ಬಿಶಪ್ ಚರ್ಚ್ ಕೇವಲ ಕ್ರಿಶ್ಚಿಯನ್ ಜನರನ್ನು ಮಾತ್ರವಲ್ಲ ಜಗತ್ತಿನ ಇತರ ಎಲ್ಲಾ ಭಾಗಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಹೆಚ್ಚಿನ ಭಾಗಗಳು ಹಸಿರು ತುಂಬಿದ ಗದ್ದೆ ಮತ್ತು ಅಲ್ಲಲ್ಲಿ ಹೂವಿನ ಗದ್ದೆಗಳಿದ್ದು ಇದೊಂದು ಪಟ್ಟಣವಾಗಿದೆ. ಉಳಿದೆರಡು ಭಾಗಗಳಿಗೆ ಹೋಲಿಸಿದರೆ ಕಾಟ್ಸ್ ವೊಲ್ಡ್ ನ ಈ ಭಾಗದಲ್ಲಿ ಜನದಟ್ಟಣೆ  ಹೆಚ್ಚಿದ್ದು , ಕಾರಿನ ಸಂಚಾರವೂ ಕೂಡ ಅಧಿಕವಾಗಿದೆ. 

ಒಟ್ಟಾರೆಯಾಗಿ ಇಂಗ್ಲೆಂಡ್ ಈ ಹಳ್ಳಿಯು ಪ್ರತಿವರ್ಷ ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಮನ ತಣಿಸುತ್ತಿದೆ. ಇಲ್ಲಿಗೆ ಹತ್ತಿರವಾಗಿ ಆಕ್ಸ್ಫಾರ್ಡ್ , ಶೇಕ್ಸ್ ಪಿಯರ್ ನ ಜನ್ಮಸ್ಥಳವಾದ ಸ್ಟ್ರಾಟ್ ಫೋರ್ಡ್ ಅಪಾನ್ ಅವನ್ ಇರುವುದರಿಂದ ಅಲ್ಲಿ ಕೂಡ ಪ್ರವಾಸ ಕೈಗೊಳ್ಳಬಹುದು. 

ಇಲ್ಲಿನ ಹಸಿರನ್ನು ನೋಡಲು ಬೇಸಿಗೆ ಇಲ್ಲಿ ಪ್ರವಾಸಕ್ಕೆ ಯೋಗ್ಯ ಸಮಯವಾದರೂ ಕೂಡ ಡಿಸೆಂಬರ್  ತಿಂಗಳ ಘೋರ ಚಳಿಗಾಲದಲ್ಲಿ ಹಿಮ ಬಿದ್ದಾಗ ಇಲ್ಲಿ ಟ್ರಿಪ್ ಹೋದಲ್ಲಿ ಸಂಪೂರ್ಣ ಹಿಮದ ಹಾಸಿನಿಂದ ಕೂಡ ಈ ಹಳ್ಳಿ ಮತ್ತು ಟನಲ್ ಗಳು ಸುಂದರವಾಗಿ ಕಾಣಿಸುತ್ತದೆ.

ನಗರ ಕೋಟೆ

Published in Vijayakarnataka July 2016



ಮಾರ್ಚ್ ತಿಂಗಳು ಬಂತೆಂದರೆ ವಿಪರೀತ ಬೇಸಿಗೆ. ಬಿಸಿಲಿನ ಬೇಗೆಯನ್ನು ತಡೆಯುವುದು ಅಸಾಧ್ಯ ಎನಿಸುವುದು ನಿಜ. ಇಂತಹ ಸಮಯದಲ್ಲಿ ಹಸಿರಿನಿಂದ ಕೂಡಿರುವ ತಂಪಾದ ಪ್ರದೇಶಗಳಿಗೆ ಒಂದು ಟ್ರಿಪ್ ಹೋಗಿ ಬಂದರೆ ಅದರ ಮಜವೇ ಬೇರೆ. ಬಿರುಬೇಸಿಗೆಯಲ್ಲಿಯೂ ತಂಗಾಳಿಯನ್ನು ನೀಡುವ ಮನಸ್ಸಿಗೆ ಮುದ ನೀಡುವ ಬೀಚ್ , ಜಲಪಾತ ಇಂತಹ ಪ್ರದೇಶಗಳು ಈ ಸಮಯದಲ್ಲಿ ಆಕರ್ಷಿಸುವುದು ಸಾಮಾನ್ಯ. ಹಾಗೆಯೇ ಮಲೆನಾಡು ಪ್ರದೇಶಗಳಿಗೆ ಹೋದರೆ ಸಾಕಷ್ಟು ಪ್ರವಾಸಿ ಸ್ಥಳಗಳು ಕೈಬೀಸಿ ಕರೆಯುತ್ತವೆ. ಇನ್ನು ಕೋಟೆ , ಕೊಳಗಳನ್ನು ಹೊಂದಿರುವ ಕೆಲವು ಪ್ರವಾಸಿ ಸ್ಥಳಗಳು ನೋಡಲು ಆಕರ್ಷಕವಾಗಿರುವುದಲ್ಲದೇ , ತಣ್ಣನೆಯ ಗಾಳಿ ಬೀಸುವುದರಿಂದ ಎಂಜಾಯ್ ಮಾಡಲು ಬಿಸಿಲು ಅಡ್ಡಬರಲಾರದು. ಅದರಲ್ಲೂ ಅಲ್ಲೇ ಹತ್ತಿರದಲ್ಲಿ ಸಿಗುವ ಸಾಕಷ್ಟು ಹೋಂ ಸ್ಟೇಗಳಲ್ಲಿ ಉಯ್ಯಾಲೆಯಲ್ಲಿ ಕೂತು ಸುತ್ತಲಿನ ಹಸಿರನ್ನು ಸವಿಯುವುದೆಂದರೆ ಪೇಟೆಯ ಜೀವನಕ್ಕೆ ಬೇಸತ್ತ ಜೀವಕ್ಕೊಂದು ಹೊಸ ಹುಮ್ಮಸ್ಸು ಸಿಕ್ಕಂತೆಯೇ ಸರಿ. 
 ಮಲೆನಾಡಿನ ಕಡೆ ಹೋದರೆ ಸ್ವಲ್ಪ ತಂಪು ಎನಿಸುವುದರ ಜೊತೆಗೆ ಅಲ್ಲಿನ ಎಳನೀರು,ಬೆರೆಸಿದ ಮಜ್ಜಿಗೆ ದೇಹಕ್ಕೂ ಮತ್ತು ಸುತ್ತಲಿನ ಹಸಿರು ಕಣ್ಣಿಗೂ ತಂಪು ನೀಡಬಹುದು.

ಪ್ರವಾಸಿ ಸ್ಥಳಗಳಲ್ಲಿ ಕೋಟೆಗಳ ಸೊಬಗು ಕೂಡ ಒಂದು ರೀತಿಯಲ್ಲಿ ಆಕರ್ಷಣೀಯವಾಗಿರುತ್ತದೆ. ಕರ್ನಾಟಕದಲ್ಲಿ ಸಾಕಷ್ಟು ಹೆಸರು ವಾಸಿಯಾಗಿರುವ ಕೋಟೆಗಳಿವೆ. ಕೆಲವು ಕೋಟೆಗಳನ್ನು ಬೆಟ್ಟದ ಮೇಲೆ ಕಟ್ಟಲಾಗಿದ್ದರೆ ಇನ್ನು ಕೆಲವನ್ನು ನದಿ, ಬೀಚ್ ಗಳು ಆವರಿಸಿಕೊಂಡಿವೆ. ಆದರೆ ಇದೆಲ್ಲಕ್ಕಿಂತ ಭಿನ್ನವಾಗಿಯೂ ರಸ್ತೆಯ ಪಕ್ಕದಲ್ಲೇ ಹೆಚ್ಚು ಎತ್ತರವಲ್ಲದ ಪ್ರದೇಶದಲ್ಲಿ ಕೋಟೆ ನೋಡಬೇಕೆಂದರೆ ಅದು ಕಾಣಸಿಗುವುದು ನಗರ ಕೋಟೆ ಎಂದೇ ಹೆಸರುವಾಗಿಯಾಗಿರುವ ಶಿವಪ್ಪನಾಯಕನ ಕೋಟೆ.  ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಅಲ್ಲೇ ಒಂದು ಸ್ವಲ್ಪ ದೂರ ಮಣ್ಣಿನ ರಸ್ತೆಯಲ್ಲಿ ನಡೆದು ಹೋದರೆ  ಈ ಕೋಟೆ ಆರಂಭ.  ಹಸಿರು ಮೈತುಂಬಿಕೊಂಡಿರುವ ಈ ಕೋಟೆಯನ್ನು ಅಲ್ಲಿ ಹೋಗಿಯೇ ಸವಿಯಬೇಕು. 
 ಅಂತಹ ಕೆಲವು ಸುಂದರ ಪ್ರವಾಸಿ ತಾಣಗಳಲ್ಲಿ ನಗರದ ಕೋಟೆಯೂ ಕೂಡ ಒಂದು. ಕೆಳದಿಯ ಶಿವಪ್ಪ ನಾಯಕನ ಹೆಸರು ಕೇಳದವರಿಲ್ಲ. ಶಿಸ್ತಿನ ಶಿವಪ್ಪ ನಾಯಕ ಎಂದೇ ಹೆಸರು ಪಡೆದಿದ್ದ ಈತ ಸಾಕಷ್ಟು ಪ್ರಸಿದ್ಧ ಕೋಟೆಗಳನ್ನು ಕಟ್ಟಿದ್ದಾನೆ. ಅವುಗಳಲ್ಲಿ ಬೇಕಲ್ ಕೋಟೆ ,ಚಂದ್ರಗಿರಿ ಕೋಟೆ ,ಜೊತೆಗೆ ಬಿದನೂರು ಕೋಟೆ ಎಂದು ಕರೆಯಲ್ಪಡುತ್ತಿದ್ದ ಈಗಿನ ನಗರ ಕೋಟೆಯೂ ಒಂದು. 

ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಈ ಕೋಟೆ ಹೊಸನಗರ ತಾಲೂಕಿನಿಂದ ಸುಮಾರು ೧೭ ಕಿ ಮೀ ಅಂತರದಲ್ಲಿದೆ. ೧೬ ನೇ ಶತಮಾನದಲ್ಲಿ ಮಲೆನಾಡು ಮತ್ತು ಬಯಲುಸೀಮೆ ಜೊತೆಗೆ ಕರಾವಳಿ ಭಾಗಗಳನ್ನು ಆಳಿದ ಶಿವಪ್ಪ ನಾಯಕನ ಕೊನೆಯ ಕೋಟೆ ಈ ನಗರ ಕೋಟೆ ಎನ್ನಲಾಗುತ್ತದೆ.ಕೆಳದಿಯ ಶಿವಪ್ಪನಾಯಕನ ಕಾಲದ ಈ ಕೋಟೆ ನೋಡಲೂ ಕೂಡ ಅಷ್ಟೇ ಸೊಗಸಾಗಿದೆ. ಶಿಸ್ತಿನ ಶಿವಪ್ಪನಾಯಕ ಎಂದೇ ಪ್ರಸಿದ್ಧಿಪಡೆದಿದ್ದ ಶಿವಪ್ಪನಾಯಕ ಈ ಕೋಟೆಯ ಸೊಬಗನ್ನು  ಒಳ ಹೊಕ್ಕು ನೋಡಿದಲ್ಲಿ ತಿಳಿಯುತ್ತದೆ. 

 ಶಿವಮೊಗ್ಗದಿಂದ ೮೪ ಕಿ ಮೀ ಅಂತರದಲ್ಲಿರುವ ಈ ನಗರ ಕೋಟೆ ಉಳಿದ ಕೋಟೆಗಳಂತೆ ಬೆಟ್ಟದ ಮೇಲಿಲ್ಲ , ರಸ್ತೆಯ ಪಕ್ಕದಲ್ಲೇ ಇರುವ ಈ ಕೋಟೆ ದೂರದಿಂದಲೇ ನೋಡುಗರನ್ನು ಆಕರ್ಷಿಸುತ್ತದೆ. ಕೋಟೆಯನ್ನು ಸ್ವಲ್ಪ ಎತ್ತರದಲ್ಲಿ ಕಟ್ಟಲಾಗಿದೆಯಾದ್ದರಿಂದ ಇದನ್ನು ಏರಿ ನೋಡಿದರೆ  ಸುತ್ತಲೂ ಉಸಿರು ಬಿಗಿ ಹಿಡಿದು ನೋಡಬಹುದಾದಂತಹ ಸುಂದರ ಹಸಿರು ವನಸಿರಿ ಕಣ್ಣಿಗೆ ರಾಚುತ್ತದೆ. ಉರಿಬಿಸಿಲಿನಲ್ಲೂ ಕೂಡ ತಂಪು ಗಾಳಿಯನ್ನು ಸೂಸುವ ಈ ನಗರ ಕೋಟೆ ನೋಡುವುದೇ ಒಂದು ಸಂತೋಷ ಎನ್ನಬಹುದು. 

ಈ ಕೋಟೆಯನ್ನು ಶಿವಪ್ಪ ನಾಯಕನು ೧೬ನೇ ಶತಮಾನದಲ್ಲಿ ಕಟ್ಟಿದ್ದು ಇದನ್ನು ಬಿದನೂರು ಕೋಟೆ , ಶಿವಪ್ಪನಾಯಕನ ಕೋಟೆ ಎಂದು ಕರೆಯುತ್ತಿದ್ದರಲ್ಲದೇ ಈ ನಗರ ಪ್ರದೇಶವು ಕೆಳದಿಯ ಶಿವಪ್ಪನಾಯಕನ ಆಡಳಿತದ ಕೊನೆಯ ರಾಜಧಾನಿಯಾಗಿತ್ತು ಎನ್ನಲಾಗಿದೆ. ಕೋಟೆಯ ಕೆಲವು ಭಾಗಗಳು ಅಲ್ಲಲ್ಲಿ ನಾಶವಾಗಿದ್ದರೂ ಕೂಡ  ಹಸಿರಿನಿಂದ ಕಂಗೊಳಿಸುತ್ತದೆ. ಕೋಟೆಯ ಒಳಗೆ ಶಿವಪ್ಪನಾಯಕನ ದರ್ಬಾರ್ ಹಾಲ್  ಮತ್ತು ಎರಡು ಕೊಳಗಳನ್ನು ಕೂಡ ಕಾಣಬಹುದು. ಶಿವಪ್ಪನಾಯಕನ ಕಾಲದಲ್ಲಿ ಹೈದರಾಲಿಯು ಈ
ನಗರ ಭಾಗವನ್ನು ವಶಪಡಿಸಿಕೊಂಡುಈ ಪ್ರದೇಶ  ಹೈದರನಗರ ಎಂದು ಕೂಡ ಕರೆಯಲ್ಪಟ್ಟಿತ್ತು. ಈಗ ಈ  ಕೋಟೆ ನಗರ ಕೋಟೆ ಎಂದೇ ಪ್ರಸಿದ್ಧಿಯಾಗಿದ್ದು ಈ ಭಾಗವನ್ನು ನಗರ ಎಂದು ಕರೆಯುತ್ತಾರೆ. 

ಅಲ್ಲಿಂದ ಸುಮಾರು ೬ ಕಿ ಮೀ ಅಂತರದಲ್ಲಿ ದೇವಗಂಗಾ ಎಂಬ ಕೊಳವಿದ್ದು ಇದರ ಸುತ್ತಲೂ ಹಸಿರು ಜೊತೆಗೆ ಇಲ್ಲೊಂದು ದೇವಸ್ಥಾನವೂ ಕೂಡ ಇದೆ. ಈ ಕೊಳವು ದೇವಗಂಗಾ ಕೊಳ ಎಂದೇ ಪ್ರಸಿದ್ಧಿ ಪಡೆದಿದ್ದು, ಕಮಲದ ಹೂವಿನ ಆಕಾರದಲ್ಲಿ ಈ ಕೊಳವನ್ನು ಕಟ್ಟಲಾಗಿದೆ. ಶಿವಪ್ಪನಾಯಕನ ರಾಣಿಯರು ಈ ಕೊಳದಲ್ಲಿ ಸ್ನಾನ ಮಾಡುತ್ತಿದ್ದರು ಅದಕ್ಕಾಗಿ ಈ ದೇವಗಂಗೆ ಕೊಳವು ಇಷ್ಟು ಸುಂದರವಾಗಿ ಕಟ್ಟಲ್ಪಟ್ಟಿದೆ ಎನ್ನಲಾಗುತ್ತದೆ. ಸದಾ ನೀರಿನಿಂದ ಮತ್ತು ಸಣ್ಣ ಮೀನುಗಳಿಂದ  ತುಂಬಿರುವ ಈ ಕೊಳವನ್ನು ನಗರ ಕೋಟೆ ನೋಡಿದ ಪ್ರವಾಸಿಗರು ನೋಡಲೇಬೇಕು. 

ಪ್ರವಾಸಕ್ಕೆ ಸರಿಯಾದ ಸಮಯ : ವರ್ಷದ ಯಾವ ಸಮಯದಲ್ಲಾದರೂ ಮಲೆನಾಡಿನ ಪ್ರದೇಶಗಳಲ್ಲಿ ಪ್ರವಾಸ ಹೋಗಬಹುದಾದರೂ ಡಿಸೆಂಬರ್ ನಿಂದ ಮೇ ಸಮಯದಲ್ಲಿ ಈ ಪ್ರದೇಶ ಹೆಚ್ಚು ತಂಪಾಗಿ ಸೊಗಸಾಗಿರುತ್ತದೆ.  ಜೂನ್ ತಿಂಗಳಿನಿಂದ ಧಾರಾಕಾರವಾಗಿ ಬೋರ್ಗರೆಯುವ ಮಳೆ ಪ್ರವಾಸಕ್ಕೆ ಅಡ್ಡಿ ಉಂಟುಮಾಡಬಹುದು.ಮಳೆಗಾಲದಲ್ಲಿ ಉಂಬಳಗಳು ಈ ಮಲೆನಾಡು ಪ್ರದೇಶಗಳಲ್ಲಿ ಅತಿಯಾಗಿ ಇರುವುದರಿಂದ ಶೂ ಬಳಸುವುದರ ಜೊತೆಗೆ ರೈನ್ ಕೋಟ್  ಕೂಡ ಅತ್ಯಗತ್ಯ.  

ಹತ್ತಿರದ ಪ್ರವಾಸಿ ಸ್ಥಳಗಳು :- ಕೊಡಚಾದ್ರಿ ಮತ್ತು ಕೊಲ್ಲೂರು, ಕೆಳದಿ , ಇಕ್ಕೇರಿ  ಇವುಗಳು ಇಲ್ಲಿಗೆ ಹತ್ತಿರದ ಪ್ರವಾಸಿ ಸ್ಥಳಗಳು. 

ಮಾರ್ಗ : ಬೆಂಗಳೂರಿನಿಂದ ಸುಮಾರು ೩೦೦ ಕಿ ಮೀ ಅಂತರವಿರುವ ನಗರಕ್ಕೆ ಬಸ್ಸು , ಕಾರು , ಮತ್ತು ಟ್ರೈನ್ ಮೂಲಕವೂ ತಲುಪಬಹುದು. ಸುಮಾರು ೮ ಗಂಟೆ ಪ್ರಯಾಣವಿರುವ ಈ ಪ್ರದೇಶಕ್ಕೆ ಬೆಂಗಳೂರಿನಿಂದ ಶಿವಮೊಗ್ಗ ಅಥವಾ ಸಾಗರಕ್ಕೆ ನೇರ ಬಸ್ಸಿನ ಸೌಲಭ್ಯವಿದೆ. ಬೆಂಗಳೂರು - ಸಾಗರ ಟ್ರೈನ್ ಮೂಲಕವೂ ಪ್ರಯಾಣಿಸಬಹುದು.

Friday 29 April 2016

ಲಹರಿ

ಅಪ್ಪನಿಗೆ ಫೋನ್ ಮಾಡಿದ್ದೆ. ಅದೇಕೋ  ಮಗ ಹುಟ್ಟಿದ ಮೇಲೆ ಅಪ್ಪನನ್ನು ಸ್ವಲ್ಪ ಹೆಚ್ಚೇ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ದಿನಕ್ಕೆ ಒಮ್ಮೆಯಾದರೂ ಫೋನ್ ಮಾಡಿ  ಮಾತನಾಡದಿದ್ದರೆ  ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ನನ್ನ ಎಂಟು ತಿಂಗಳ ಮಗ ಅಂಬೆ ಹರಿದು , ತಾನಾಗೆ ನಿಂತುಕೊಳ್ಳಲು ಪ್ರಾರಂಭಿಸಿದಂತೆ ಎಷ್ಟು ಬೇಗ ಸಮಯ ಕಳೆದು ಹೋಗುತ್ತಿದೆ ಎನಿಸುತ್ತಿದೆ. ನೋಡ ನೋಡುತ್ತಿದ್ದಂತೆ ಮಗನೂ ಬೆಳೆದು ದೊಡ್ಡವನಾಗಿ ಬಿಡುತ್ತಾನೆ ಎಂಬ ಸತ್ಯ ಅರಿವಾಗುತ್ತಿದೆ. ಆಗೆಲ್ಲ ನನಗೆ ನೆನಪಾಗುವುದು ಅಪ್ಪ. ಬಾಲ್ಯದ ಸುಂದರ ದಿನಗಳ ಮೆಲುಕು ಹಾಕ ಹೊರಟರೆ ದುತ್ತನೆ ಕಣ್ಣೆದುರು ಬರುವುದು ಅಪ್ಪನ ಆರೈಕೆ. ಎಷ್ಟು ಸುಂದರ ದಿನಗಳವು. ಅಪ್ಪ ಅದೆಷ್ಟು ಪ್ರೀತಿಯಿಂದ ನನ್ನ ಸಾಕಿದ್ದ ಮತ್ತು ಆ ಪ್ರೀತಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಲಂಡನ್ ನಿಂದ  ವರ್ಷಕ್ಕೆ ಒಮ್ಮೆ ಅಪ್ಪನ ಮನೆಗೆ ಹೋಗಿ ಹಿಂತಿರುಗಿ ಬರುವಾಗ ಅಪ್ಪನ ಕಣ್ಣೀರು ಮರೆಯಬೇಕೆಂದರೂ ಮರೆಯಲಾರದು. ಅಪ್ಪ ಅದೇಕೆ ಅಷ್ಟು ಭಾವನಾತ್ಮಕ ಎಂದು ಕೆಲವೊಮ್ಮೆ ಗೊಂದಲವಾಗುತ್ತದೆ. ಮತ್ತು ಎಲ್ಲರೂ ಏಕೆ ಅಪ್ಪನಂತೆ ಇರಬಾರದು. ನಿಷ್ಕಲ್ಮಶ ಪ್ರೀತಿ,ನಿಸ್ವಾರ್ಥ ಕಾಳಜಿ , ಆತ ನನ್ನ ಅಮ್ಮನನ್ನು ಮತ್ತು ಮಕ್ಕಳನ್ನು ನೋಡಿಕೊಳ್ಳುವ ರೀತಿ ,ಇವೆಲ್ಲ ಅಪ್ಪನಿಗೊಬ್ಬನಿಗೆ ಸಾಧ್ಯ ಎಂದು ಯಾವಾಗಲೂ ನನಗನಿಸುತ್ತದೆ. 

ಹ್ನಾ  ಈ ಭಾರಿ ಊರಿಗೆ ಹೋದಾಗ ಅಪ್ಪ ಒಂದು ದಿನ ಬಾಳೆಕಾಯಿ ಅತಿರಸ ಮಾಡಿದ್ದ ನನಗೋಸ್ಕರ. ಚನ್ನಾಗಾಗಿತ್ತು ಆದರೆ ನನಗೆ ಅಕ್ಕಿಬೆಲ್ಲದ ಅತಿರಸ ಬಹಳ ಇಷ್ಟ . ಆದ್ದರಿಂದ  ಬಾಳೆಕಾಯಿ ಅತಿರಸ ಅದೇನೋ ನನಗೆ ಅಷ್ಟು ಇಷ್ಟವಾಗಲಿಲ್ಲವಾದರೂ ಅಪ್ಪ ಮಾಡುವ ಕುಟ್ಟವಲಕ್ಕಿ ಬೇರಾರು ಮಾಡಿದರು ಅಷ್ಟು ರುಚಿಯಾಗಿ ಇರುವುದಿಲ್ಲ ಎಂಬುದು ಮಾತ್ರ ಕಟು ಸತ್ಯ. ಹಾಗೇ ಅಡುಗೆ ಮಾಡುವಾಗಲೆಲ್ಲ ಅಪ್ಪ ಮಾಡುವ ಕುಟ್ಟವಲಕ್ಕಿ ಅಪ್ಪನಷ್ಟೇ ಕಾಡುತ್ತದೆ. ಹಾಗೆ ಫೋನ್ ಮಾಡಿದಾಗ ಅಪ್ಪನಲ್ಲಿ ಕೇಳಿಯೇ ಬಿಟ್ಟೆ. ಅಪ್ಪ ನೀ ಮಾಡುವ ಕುಟ್ಟವಲಕ್ಕಿ ರೆಸಿಪಿ ಕೊಡು ನಾನೂ ಹಾಗೇ  ಮಾಡಿ ನೋಡುತ್ತೇನೆ. ಯಾಕೋ ಕುಟ್ಟವಲಕ್ಕಿ ತಿನ್ನುವ ಮನಸ್ಸಾಗುತ್ತಿದೆ ಎಂದು ಅಪ್ಪನಿಗಾದ ಸಂತೋಷ ನೋಡದಿದ್ದರೂ ನಾ ಅರಿತಿದ್ದೆ. ಅವನಿಗೆ ಅದೇನೋ ಸಂತೋಷ ಮಗಳು ನನ್ನ ಕುಟ್ಟವಲಕ್ಕಿ ಅಷ್ಟು ಇಷ್ಟ ಪಡುತ್ತಾಳೆ  ಎಂದು.  ಅದು ಸುಲಭದ ರೆಸಿಪಿ ಹಾಗೆ ತಿನ್ನಲು ಬಹಳ ರುಚಿ.  

ಇಲ್ಲಿದೆ ನೋಡಿ ರೆಸಿಪಿ  - ದಪ್ಪ ಅವಲಕ್ಕಿ , ಬೇಕಾದಷ್ಟು ಹಸಿಮೆಣಸು , ಕೊತ್ತುಂಬರಿ ಸೊಪ್ಪು ಅಥವಾ ಕೊತ್ತುಂಬರಿ ಕಾಳು (ಸ್ವಲ್ಪ ಜಾಸ್ತಿಯೇ ಹಾಕಿದರೆ ಸುವಾಸನೆ ಭರಿತವಾಗಿರುತ್ತದೆ),ಒಂದು ನಾಲ್ಕು ಎಸಳು ಬೆಳ್ಳುಳ್ಳಿ ,ಸ್ವಲ್ಪ ಬೆಲ್ಲ ,ಹುಳಿಗೆ ವಾಟೆ ಪುಡಿ (ಅಥವಾ ನಿಂಬೆ ರಸ ) ಇವನ್ನು ಹಾಕಿ ತರಿತರಿಯಾಗುವಂತೆ ರುಬ್ಬಿ . ಇದಕ್ಕೆ ಬೇಕಾದಷ್ಟು ಉಪ್ಪು ಬೆರೆಸಿ, ಸಾಸಿವೆಕಾಳು ,ಜೀರಿಗೆ ,ಉದ್ದು ಮತ್ತು ಅರಿಶಿನ ಪುಡಿ ,ಶೇಂಗಾ ಹಾಕಿ  , ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದರೆ ರುಚಿ ರುಚಿಯಾದ ಕುಟ್ಟವಲಕ್ಕಿ ಸವಿಯಲು ಸಿದ್ಧ. 

ಅಪ್ಪ ಹೇಳಿದ ರೀತಿಯಲ್ಲೇ ಕುಟ್ಟವಲಕ್ಕಿ ಮಾಡಿ ರುಚಿಯಾದ ಕುಟ್ಟವಲಕ್ಕಿ ಸವಿಯುವಾಗ ಬಾಲ್ಯದಲ್ಲಿ ಇದರ ಜೊತೆಗೆ ಕಬ್ಬಿನ ಹಾಲು ಸವಿಯುತ್ತಿದ್ದುದು ಬಹಳ ನೆನಪಾಗಿ ಅದೊಂದಿದ್ದಿದ್ದರೆ ಎನಿಸಿದ್ದು ಸುಳ್ಳಲ್ಲ. 

ಜೆರ್ಮನಿ ಪ್ರವಾಸ

My this article published in Sudha magazine


ನಾವಿರುವುದು ಲಂಡನ್ ನಲ್ಲಿ. ಈಗ ೩ ವರ್ಷಗಳ ಹಿಂದೆ ಜೆರ್ಮನಿಗೆ ಹೋಗಿದ್ದೆವು . ಅಲ್ಲಿ ಏನೇನು ನೋಡಬೇಕು ಎಂದೆಲ್ಲ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಸುಲಭದ ಸಂಗತಿಯಲ್ಲ ಆದ್ದರಿಂದ ಇಲ್ಲಿರುವ ಟೂರ್ ಪ್ಯಾಕೇಜ್ ನಲ್ಲಿ ಹೋಗಿಬಿಟ್ಟರೆ ಅವರೇ ಮುಖ್ಯ ಸ್ಥಳಗಳನ್ನು ತೋರಿಸುತ್ತಾರೆ  ಎಂದು ಸ್ಟಾರ್ ಟೂರ್ ನ ಮೂಲಕ ಪ್ಯಾರಿಸ್ ,ಜೆರ್ಮನಿ ಹೋಗಲು ಬುಕ್ ಮಾಡಿದೆವು. 

ಅಂತೂ ಪ್ರವಾಸ ಹೊರಟೆವು. ಅದು ಮೂರು ದಿನದ ಪ್ರವಾಸವಾದದ್ದರಿಂದ ಪ್ಯಾರಿಸ್ ಮೊದಲು ನೋಡಿಕೊಂಡು ನಂತರ ನಮ್ಮ ಪ್ರಯಾಣ ಜೆರ್ಮನಿಗೆ ಹೊರಟಿತು. ಪ್ಯಾರಿಸ್ ನಲ್ಲಿ  ಊಟದ ಸಮಸ್ಯೆ ಇರಲಿಲ್ಲ. 

ಜೆರ್ಮನಿ ನೋಡಿಕೊಂಡು ಹಿಂತಿರುಗಿ ಲಂಡನ್ ಗೆ ಹೋಗುವ ಸಮಯ. ದಾರಿಯಲ್ಲಿ ಮಧ್ಯ ಒಂದು ಸಣ್ಣ  ರೆಸ್ಟೋರೆಂಟ್  ಬಳಿ ನಿಲ್ಲಿಸಿ ಇವತ್ತು ಮಧ್ಯಾನ್ಹದ ಊಟ ನೀವೇ ಮಾಡಬೇಕು ಎಂದು ತಿಳಿಸಿದರು.ಅದು ಸಣ್ಣ ರೆಸ್ಟೋರೆಂಟ್. ನಮ್ಮೂರ ಬದಿಯಲ್ಲಿ ಡಾಬ  ಇದ್ದಂತೆ .ನಾನು ಅಲ್ಲಿ ನಿಂತಿದ್ದವಳ ಹತ್ತಿರ ಹೋಗಿ 'ವೆಜಿಟೇರಿಯನ್ ಏನಿದೆ' ಕೇಳಿದೆ. ಅವಳು ಮುಖ ಮುಖ ನೋಡಿ, ಒಂದು ರೀತಿ ಸಂಸ್ಕೃತವನ್ನು ಹೋಲುವ ಜೆರ್ಮನ್ ಭಾಷೆಯಲ್ಲಿ ಏನೋ ತೊದಲಿದಳು. ನಮಗದು ಸ್ವಲ್ಪವೂ ಅರ್ಥವಾಗಲಿಲ್ಲ. ನಾವು ಕೇಳಿದ್ದು ಆಕೆಗೆ ತಿಳಿಯಲಿಲ್ಲ. ವೆಜಿಟೇರಿಯನ್ ಎಂದರೆ ಎಗ್ ತೋರಿಸಿದಳು. ನಾನು ಅಲ್ಲೇ ಕುಸಿದು ಬೀಳುವುದೊಂದು ಬಾಕಿ. ನಾವು ಪಕ್ಕಾ ಸಸ್ಯಾಹಾರಿಗಳು. ಇದೊಳ್ಳೆ ಕಥೆಯಾಯಿತಲ್ಲ ಎಂದು ಅಲ್ಲಿದ್ದ ಇನ್ನೊಬ್ಬನನ್ನು ಸಲಾಡ್ ತೋರಿಸಿ ನೋ ಮೀಟ್, ನೋ ಎಗ್ ಎಂದರೆ ಆತ ಅದೇನೋ ಜೆರ್ಮನ್ ಭಾಷೆಯಲ್ಲಿ ಉತ್ತರಿಸಿ ಹಲ್ಲು ಕಿರಿದ. 

ಬೆಳಿಗ್ಗೆ ಒಂದು ಬ್ರೆಡ್ ಟೋಸ್ಟ್ ತಿಂದು ಒಂದು ಲೋಟ ಡಿಕಾಕ್ಷನ್ ನಂತಿದ್ದ ಕಾಫಿ ಕುಡಿದು ಹೊರಟ ನಮಗೆ ಹೊಟ್ಟೆಯಲ್ಲಿ ಚುರ್ ಎನ್ನುತ್ತಿತ್ತು. ಆದರೆ ಏನು ತಿನ್ನಲೂ ಭಯ. ಫ್ರೆಂಚ್ ಫ್ರೈಸ್ ಅನ್ನಾದರೂ ತೆಗೆದುಕೊಳ್ಳೋಣ ಎಂದರೆ ಇಲ್ಲಿ ಚಿಪ್ಸ್ ಗಳಲ್ಲೂ ಪ್ರ್ವಾನ್ ಚಿಪ್ಸ್ ಇನ್ನಿತರ ಫ್ಲೇವರ್ ಇರುತ್ತದೆ. ಇದರ ಸಹವಾಸವೇ ಬೇಡ ಎಂದು ಅಲ್ಲಿಂದ ಹೊರಗೆ ಬಂದು ಅಲ್ಲೇ ಪಕ್ಕದಲ್ಲಿದ್ದ ಸಣ್ಣ ಸೂಪರ್ ಮಾರ್ಕೆಟ್ ನಲ್ಲಿ ಬಾಳೆಹಣ್ಣು ,ತೆಗೆದುಕೊಂಡು ಅದರಲ್ಲೇ ಹೊಟ್ಟೆ ತುಂಬಿಸಿಕೊಂಡು ಮನೆ ತಲುಪಿದೆವು. 


ಅರ್ಪಿತಾ ರಾವ್ 
ಲಂಡನ್ 

Monday 25 April 2016

ನೆನಪುಗಳು ಮಧುರ

My this article published on 22 April 2016 vijayanext newspaper .
ಅದೊಂದು ಗುರುವಾರ , ಮಧ್ಯಾನ್ಹ ೨ ಗಂಟೆಯ ಸಮಯ . ಊಟ ಮಾಡಿ ಆಗಷ್ಟೇ ಮುಗಿಸಿದ್ದೆ . ಏಪ್ರಿಲ್ ತಿಂಗಳಾದ್ದರಿಂದ ಲಂಡನ್ ನಲ್ಲಿ ಅತ್ತ ಕೊರೆಯುವ ಚಳಿಯೂ ಅಲ್ಲ ಇತ್ತ ತಡೆಯಲಾರದ ಬಿಸಿಲೂ ಇಲ್ಲ ಎಂಬಂತ ಸ್ಥಿತಿ. ಮನೆಯೊಳಗೆ ಒಳ್ಳೆಯ ಹವಾಮಾನ ,ಹಾಗಂತ ಹೊರಗೆ ಹೋಗುವಂತೆಯೂ ಇಲ್ಲ , ಮೋಡ ಕವಿದಿದೆ. ಇಲ್ಲಿ ಹಾಗೆಯೇ ಅದೇನೋ ಇದ್ದಕ್ಕಿದ್ದಂತೆ ಜಿನುಗು ಮಳೆ ಬಂದು ಬಿಡುತ್ತದೆ. ನಮ್ಮ ಮಲೆನಾಡಿನಂತೆ ಮೋಡ ಕಪ್ಪುಗಟ್ಟುವುದಿಲ್ಲ , ಗುಡುಗು ಮಿಂಚಿನ ಆರ್ಭಟವಿಲ್ಲ. ಬೋರ್ಗರೆಯುವ ಧಾರಾಕಾರ ಮಳೆಯಂತೂ ಇಲ್ಲಿ ಬರುವುದೇ ಇಲ್ಲ. ಬಂದರೆ ಆಗೊಂದು ಈಗೊಂದು ಅನ್ನುವಂತೆ ಸಣ್ಣ ಗಿಟಿಗಿಟಿ ಹನಿ. ಸಪ್ಪೆ ವಾತಾವರಣ. 

ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ ,ಬಿಕೋ ಎನ್ನುವ ರಸ್ತೆ ,ಒಂದು ನರಪಿಳ್ಳೆಯೂ ಕಾಣುತ್ತಿಲ್ಲ. ಅದೇನೋ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಚುಳ್ ಎಂಬ ಸೆಳೆತ. ಸ್ವಲ್ಪ ನೀರು ಕುಡಿದೆ. ಇನ್ನೂ ಜಾಸ್ತಿ ಜುಂ ,ಜುಂ  ನೋವು ,ತಡೆಯಲಾರೆ ಅನ್ನಿಸಿಬಿಟ್ಟಿತ್ತು ಹೇಗೋ ಸುಧಾರಿಸಿಕೊಂಡೆ. ಹಾಸಿಗೆಯ ಮೇಲೆ ಹಾಗೆಯೇ ಮಲಗಿದೆ ,ನಿದ್ದೆ ಸುಳಿಯಲಿಲ್ಲ ಈಗ  ಪ್ರತೀ ೫ ನಿಮಿಷಕ್ಕೊಮ್ಮೆ ಜುಂ ಜುಂ ವೈಬ್ರೇಟ್ ಆಗುವಂತಹ ಅನುಭವ. ಒಂದು ವಾರದ ಹಿಂದೆಯಷ್ಟೇ ಭಾರತದಿಂದ ಬಂದಿದ್ದ ಅಮ್ಮನಿಗೆ ಲಂಡನ್ ನ ಸಮಯದ ವ್ಯತ್ಯಾಸದಿಂದಾಗಿ ಮಂಪರು . ರಾತ್ರಿ ನಿದ್ದೆ ಬಾರದು ,ಮದ್ಯಾನ್ಹ ಮಲಗದಿದ್ದರೆ ಪಾಪ ಆಯಾಸ . ಸಂಜೆ ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದೆ ಅವಳಿಗೆ ಇಲ್ಲಿನ ಸ್ಪ್ರಿಂಗ್ ನಲ್ಲೆ ಕೆಟ್ಟ ಚಳಿ 'ಇನ್ನು ಚಳಿಗಾಲದಲ್ಲಿ ಬಂದಿದ್ದರೆ ಬಹಳ ಕಷ್ಟವಾಗಿಬಿಡುತ್ತಿತ್ತು' ಹಾಗಂತ ಆಕೆಯೇ ನನಗೆ ಆಗಾಗ ಹೇಳುತ್ತಿದ್ದಳು.  

ಸ್ವಲ್ಪ ಹೊತ್ತಿನಲ್ಲಿ ೫ ನಿಮಿಷಕ್ಕೆ ಬರುತ್ತಿದ್ದ ನೋವು ೨ ನಿಮಿಷಕ್ಕೊಮ್ಮೆ ಈ ಬಾರಿ ಇನ್ನೂ ಸ್ವಲ್ಪ ಜಾಸ್ತಿ ಜೂಮ್ ಜೂಮ್  , ತಡೆಯಲಾಗಲಿಲ್ಲ . ಭಯ ಒಂದು ಕಡೆ ಎದ್ದು ಹೋಗಿ ಅಮ್ಮಾ ಹೊಟ್ಟೆ ನೋವು ಅಂದದ್ದಷ್ಟೇ , ದಡಾರ್ ಎಂದು ಎದ್ದು ಹೌದಾ ನೋವು ಶುರುವಾಗೇ ಬಿಡ್ತಾ ? ನಾ ಅಂದುಕೊಂಡಿದ್ದೆ ಬೆಳಿಗ್ಗೆಯಿಂದ ನಿನ್ನ ನೋಡಿದಾಗಲೇ ನನಗೆ ಗೊತ್ತಿತ್ತು !! ಫೋನ್ ಮಾಡು ಬೇಗ ಬೇಗ . 

ಸರಿ ಆಫೀಸಿನಿಂದ ಪತಿ ಬಂದಿದ್ದೂ ಆಯಿತು , ಆಸ್ಪತ್ರೆಗೆ ಫೋನ್ ಮಾಡಿದೆ ,ಆ ಕಡೆಯಿಂದ ನರ್ಸ್ ಇದು ಮೊದಲನೆಯದಾ ? ನೋವಿನಲ್ಲೇ ಉತ್ಸಾಹದಿಂದ ಹೇಳಿದೆ 'ಹೌದು' . ಅದಕ್ಕೆ ಇಷ್ಟು ಭಯ ನಿಮಗೆ . ನೋವು ಕೊನೇ  ಸ್ಟೇಜ್ ಗೆ ಹೋದಮೇಲೆ ಬನ್ನಿ . ಈಗಿನ್ನೂ ಪ್ರಾರಂಭವಷ್ಟೇ !!

ಈಗಿನ್ನೂ ಪ್ರಾರಂಭ ? ಅವಾಕ್ಕಾದೆ . ಇನ್ನು ಹೇಗೆ ನೋವು ಸಹಿಸಿಕೊಳ್ಳುವುದು ? ಗಂಟೆ ಸರಿಯುತ್ತಿತ್ತು,ಆದರೆ ಅವತ್ತೇಕೋ ಬಹಳ ನಿಧಾನಗತಿಯಲ್ಲಿ. ಆಗಾಗ ಸಮಯ ನೋಡಿದೆ ೭, ೯ ಹೀಗೆ ಸಮಯ ನಿಧಾನವಾಗಿ ಹೋಗುತ್ತಿತ್ತು. ಅಮ್ಮ ಒತ್ತಾಯ ಮಾಡಿ ಊಟ ಕೊಟ್ಟಳು . ಗಂಟಲಲ್ಲಿ ಇಳಿಯಲಿಲ್ಲ . ಈ ನೋವೊಂದು ಮುಗಿದರೆ ಸಾಕು. ರಾತ್ರಿ ಮಲಗುವ ಮೊದಲು ಮತ್ತೆ ಆಸ್ಪತ್ರೆಗೆ ಫೋನ್ ಮಾಡು ಅಮ್ಮನ ಒತ್ತಾಯ. 

'ಎಷ್ಟು ನಿಮಿಷಕ್ಕೊಮ್ಮೆ ನೋವಿದೆ ?'  ೧ ನಿಮಿಷ ಎಂದೆ , 'ಇನ್ನೂ ಸಮಯವಿದೆ ,ಈಗ ಬರುವುದು ಬೇಡ'.  ಮರು ಮಾತನಾಡುವ ಅವಕಾಶವನ್ನೂ ಕೊಡದೆ ಅತ್ತಕಡೆ ಫೋನ್ ಕುಕ್ಕಿಯಾಗಿತ್ತು. ಮಲಗಿದೆ . ನಿದ್ದೆ ಬರುವುದಾದರೂ ಹೇಗೆ ? ಅದೇನೋ ಒಂದು ಮಂಪರು ಅಷ್ಟರಲ್ಲಿ ಯಮಯಾತನೆ ನೋವು ತಡೆಯಲಾಗುತ್ತಿಲ್ಲ. ಎದ್ದು ಕುಳಿತೆ,ಅಳಬೇಕೆನಿಸಿತು ಆಗಲಿಲ್ಲ !! ರೂಂ ನಿಂದ ಹೊರಬಂದೆ . ಅಮ್ಮ ದಡಾರ್ ಎಂದು ಎದ್ದು ಕುಳಿತಳು ,ಏನಾಯ್ತು ? ಆಕೆಗೆ ಗಲಿಬಿಲಿ ಏನಿಲ್ಲ ನೋವು ,ನನ್ನದು ಅದೇ ಸಪ್ಪೆ ಮುಖ. ಸ್ವಲ್ಪ ಹೊತ್ತು ಕುಳಿತೆ ,ಓಡಾಡಿದೆ , ಇಲ್ಲ ಕಡಿಮೆ ಇಲ್ಲ ಹೆಚ್ಚಾಗುತ್ತಲೇ ಇದೆ. ಸಮಯ ಬೆಳಗಿನ ಜಾವ ೫ . ಈ ಭಾರಿ ಆಸ್ಪತ್ರೆಗೆ ಪತಿ ಫೋನ್ ಮಾಡಿದರು . ಆ ಕಡೆಯಿಂದ ಬಹಳ ಸೌಮ್ಯವಾಗಿ ಎಲ್ಲಾ ಮಾಹಿತಿಯನ್ನೂ ಪಡೆದಾಕೆ 'ಕರೆದುಕೊಂಡು ಬನ್ನಿ' ಎಂದಳು. ಅಬ್ಬಾ ಕೊನೆಗೂ ನೋವು ಇನ್ನೇನು ಮಾಯವಾಗಿಬಿಡುತ್ತದೆ ! ಒಂದು ನಿಟ್ಟುಸಿರು . 

ಗುರುವಾರ ಪ್ರಾರಂಭವಾದ ನೋವು ಶನಿವಾರವಾದರೂ ಅದೇ ಪ್ರಮಾಣದಲ್ಲಿತ್ತು , ಇಡೀ  ಅಸ್ಪತ್ರೆಯಲ್ಲೆಲ್ಲಾ ನನ್ನದೇ ಓಡಾಟ.  ಎಷ್ಟು ನಡೆದಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಅಮ್ಮ ಒಂದು ಕಡೆ ದೇವರ ಧ್ಯಾನ ಮಾಡುತ್ತಿದ್ದಳು. ಪತಿ ನಿದ್ದೆಯಿರದೆ ಕಣ್ಣು ತೇಲುತ್ತಿತ್ತು. ಈ ಕಾಯುವುದರ ಕಷ್ಟ ಅಷ್ಟಿಷ್ಟಲ್ಲ ಎಂಬುದು ಅವರ ನೋವು. ಈ ನೋವು ಇನ್ನೂ ಎಷ್ಟು ಸಹಿಸಿಕೊಂಡಿರಬೇಕು ಎಂಬುದು ನನ್ನ ವ್ಯಥೆ. 

ಅಂತೂ ಭಾನುವಾರ ಮಧ್ಯಾನ್ಹ ೩ ಗಂಟೆಯ ಸಮಯ , ಡಾಕ್ಟರ್ ಬಂದರು . ಭಾರತದ ಬಹುಶಃ ಗುಜರಾತಿನ ಕಡೆಯವರಿರಬಹುದಾದ ಲೇಡಿ ಡಾಕ್ಟರ್ . ಇನ್ನು ಕಾಯಲಾಗುವುದಿಲ್ಲ ಆಪರೇಷನ್ ಮಾಡುತ್ತೇವೆ ಇಲ್ಲಿ ಸಹಿ ಹಾಕಿ . ಪಾಪರ್ ಸಮೇತ ಬಂದಿದ್ದರು. ನನಗೆ ಒಳಗೊಳಗೇ ಕುಶಿ ಆದರೂ ಇದನ್ನು ೩ ದಿನದ ಮೊದಲೇ ಮಾಡಬಹುದಿತ್ತಲ್ಲ ಎಂಬ ಸಿಟ್ಟು ಬೇರೆ. ಅಮ್ಮ ಅಲ್ಲೇ ಗೊಣಗಿದಳು ' ನೋವು ತಿಂದಿದ್ದೂ ತಪ್ಪಿಲ್ಲ ಆಪರೇಶನ್ ಮಾಡಿಸಿಕೊಳ್ಳುವುದೂ ತಪ್ಪಿಲ್ಲ,ನಮ್ಮ ಭಾರತದಲ್ಲಗಿದ್ದರೆ ಇಷ್ಟು ಕಷ್ಟ ಪಡಬೆಕಾಗಿರಲಿಲ್ಲ'. ನನಗೆ ಮಾತು ಹೊರಡಲಿಲ್ಲ. ಹೌದು ಎನಿಸಿತ್ತು ಅಮ್ಮನ ಮಾತು. 

ಅದಾಗಿ ಸ್ವಲ್ಪ ಹೊತ್ತಿಗೆ ಅಂದರೆ ೩-೪ ಗಂಟೆಯ ನಂತರ ಆಪರೇಶನ್ ತಿಯೇಟರ್ ಒಳಗೆ ಕರೆದುಕೊಂಡು ಹೋದರು. ಅನಸ್ತೇಶಿಯ ಕೊತ್ತಿದ್ದಷ್ಟೇ ಗೊತ್ತು. ಮತ್ತೆ ಮಗುವಿನ ಅಳು. ನನ್ನ ಕಂದ ಹುಟ್ಟಿದ್ದ . ಅದಾಗಿ ಈಗ ಒಂದು ವರ್ಷವಾಗಿಬಿಟ್ಟಿದೆ. ಆಗ ಬರೀ ಅಳುತ್ತಿದ್ದ ಮಗ ಈಗ ಮನೆಯೆಲ್ಲಾ ಓಡಾಡುತ್ತಾ ನಗುತ್ತಾ ತುಂಟಾಟ ಮಾಡುತ್ತಾನೆ. ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗನಿಗೆ  :)

Arpitha Harsha

Saturday 27 February 2016

ಕುಂದಾದ್ರಿ

Published in 26th feb 2016 vijayanext

ಅದೊಂದು ವೀಕೆಂಡ್ . ಊರಿಗೆ ಹೋದ ನಾವು ಎಲ್ಲಾದರೂ ಹತ್ತಿರದಲ್ಲಿ ಸುತ್ತಲು ಹೋಗಬೇಕು ಎಂದು ನಿರ್ಧರಿಸಿದ್ದೆವು. ನಗರಗಳ ಓಡಾಟ ಬೇಸರ ತರಿಸಿದ್ದರಿಂದ ಯಾವುದಾದರೂ ಒಂದು ಒಳ್ಳೆಯ ತಾಣಕ್ಕೆ ಹೋಗಬೇಕು ಎಂಬುದು ನಮ್ಮ ಮನೆಯವರೆಲ್ಲರ ಅಪೇಕ್ಷೆಯಾಗಿತ್ತು. ಹಾಗೆಂದೇ ನಿರ್ಧರಿಸಿ ಪರಿಚಯದವರನ್ನು ವಿಚಾರಿಸಿದಾಗ ಸಿಕ್ಕಿದ್ದು ಈ ಬೆಟ್ಟ. ಸುಮಾರು ನಾಲ್ಕರಿಂದ ಐದು ಕಿ ಮೀ  ನಷ್ಟು ದೂರ ಎತ್ತರದ ಬೆಟ್ಟದೆಡೆಗೆ ನಾವು ಹೊರಟ ಕಾರು ನಮ್ಮನ್ನು ಎಳೆಯಲಾರದೆ ಎಳೆದುಕೊಂಡು ಹೋಗುತ್ತಿದ್ದರೆ ಸುತ್ತಲೂ ದಟ್ಟ  ಕಾಡು. ಅದು ಸಂಜೆಯ ಸಮಯವಾಗಿದ್ದರಿಂದಲೋ ಏನೋ ತಣ್ಣನೆಯ ಗಾಳಿ , ಒಂದು ಕಾರು ಹೋಗುತ್ತಿದ್ದರೆ ಇನ್ನೊಂದು ಎದುರಿನಿಂದ ಬರಲಾರದಂತ ಇಕ್ಕಟ್ಟು ರಸ್ತೆಯಾದದ್ದರಿಂದಲೋ ಏನೋ ರಸ್ತೆ ಬಿಕೋ ಎನ್ನುತ್ತಿತ್ತು. ಕಾರು ಮೇಲೇರುತ್ತಿದ್ದಂತೆ ಕಿಟಕಿಯಿಂದ ಸುಮ್ಮನೆ ಗಾಳಿಗೆ ಹೊರಗೆ ಮುಖ ಒಡ್ಡಿದರೆ ಅದ್ಬುತ ಲೋಕ. ಸುಂದರವಾದ ಹಸಿರು ತುಂಬಿದ ಅರಣ್ಯಗಳ ಬೀಡು. ಅದೊಂದು ಅದ್ಬುತ ಲೋಕವೇ ಸರಿ. ಕಾರಿನಲ್ಲಿ ಹಳೇ ಹಿಂದಿ ಚಿತ್ರಗೀತೆಗಳ ಸರಮಾಲೆ ಇಳಿಸಂಜೆಯ ಸೂರ್ಯ ಮುಳುಗುವ ಹೊತ್ತಿನ ಆ ಸುಂದರ ಕ್ಷಣ ಅಕ್ಷರಗಳಲ್ಲಿ ವರ್ಣಿಸುವುದು ಕಷ್ಟ ಅದನ್ನು ನೋಡಿಯೇ ಅನುಭವಿಸಬೇಕು. 

ಕಾರು ಇಳಿದು ಮೆಟ್ಟಿಲುಗಳನ್ನು ಏರಿದರೆ ಬೆಟ್ಟದ ತುದಿ ತಲುಪಿದರೆ ಅಲ್ಲಿ ಕಾಣುವುದು ಪ್ರಕೃತಿಯ ಸುಂದರ ತಪ್ಪಲು. ಸುತ್ತಲೂ ಕಲ್ಲು ಬಂಡೆಗಳನ್ನು ಹೊಂದಿ ಮಧ್ಯದಲ್ಲಿ ದೇವಸ್ಥಾನವನ್ನು ಹೊಂದಿರುವ ಈ ಸ್ಥಳದಲ್ಲಿ ನಿಂತು ಒಮ್ಮೆ ಕೆಳ ನೋಡಿದರೆ ಅಲ್ಲಿ ಕಾಣುವುದು ಹಸಿರು , ಬರೀ ಹಸಿರು. ಬೀಸುವ ತಂಗಾಳಿಗೆ ಮೈಯೊಡ್ಡಿ ಈ ಹಸಿರನ್ನು ಕಣ್ಣು ತುಂಬಿಸಿಕೊಳ್ಳುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ?

ಹೌದು ನಾನು ಈಗ ಹೇಳ ಹೊರಟಿರುವ  ,ಇಷ್ಟೊಂದು ಸುಂದರವಾದ ಪ್ರಕೃತಿಯ ಸೊಬಗನ್ನು ನೋಡಲು ನೀವೂ ಕೂಡ  ನೋಡ ಬಯಸುತ್ತೀರಾದರೆ  ಕುಂದಾದ್ರಿ ಸರಿಯಾದ ಸ್ಥಳ. ತೀರ್ಥಹಳ್ಳಿಯಿಂದ ಸುಮಾರು ೨೩ ಕಿ ಮೀ ಅಂತರದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಬರುವ ಈ ಕುಂದಾದ್ರಿ ಜೈನರ ಪವಿತ್ರ ಸ್ಥಳವೂ ಹೌದು. ಹದಿನೇಳನೆ ಶತಮಾನದ ಜೈನ ಮುನಿಗಳ ಕಾಲದಿಂದಲೂ ಇರುವ ಈ ಕುಂದಾದ್ರಿಯು ಸುಮಾರು ೮೦೦ ಮೀಟರ್ ಎತ್ತರದಲ್ಲಿರುವ ಬೆಟ್ಟದ ಮೇಲಿದೆ. ಜೈನ ಮೂರ್ತಿಗಳನ್ನು ಒಳಗೊಂಡಿರುವ ಈ ಜೈನ ಬಸದಿಯಲ್ಲಿ ನಿತ್ಯವೂ ಪೂಜೆಯೂ ನಡೆಯುತ್ತದೆ ಮತ್ತು ಸಾವಿರಾರು ಜೈನ ಭಕ್ತರು ಕೂಡ ಇಲ್ಲಿ ಪ್ರತಿ ವರ್ಷ ಭೇಟಿ ನೀಡುತ್ತಾರೆ.  ತೀರ್ಥಹಳ್ಳಿ ಮತ್ತು ಉಡುಪಿ ಮಾರ್ಗವಾಗಿ ಸಂಚರಿಸುವಾಗ ಸಿರುವ ಈ ಕುಂದಾದ್ರಿ ಪ್ರವಾಸಿಗರು ಭೇಟಿ ನೀಡಬಹುದಾದ ಸುಂದರ ಸ್ಥಳ . ಹಸುರಿನಿಂದ ಕೂಡಿರುವ ಈ ಸ್ಥಳ ಗಾಳಿ ಬೆಳಕಿನ ಜೊತೆಗೆ ಮನಸ್ಸನ್ನು ತಂಪು ಮಾಡುತ್ತದೆ. ಈ ಬೆಟ್ಟವು ಬಹಳ ಎತ್ತರದಲ್ಲಿ ಇರುವುದರಿಂದ ಇಲ್ಲಿ ನಿಂತು ಸುತ್ತಲಿನ ಹಸಿರ ಸಿರಿಯನ್ನು ಕಣ್ಣು ತುಂಬಿಕೊಳ್ಳಬಹುದು.ಮೇಲಿನವರೆಗೂ ಟೆಂಪೋ ಅಥವಾ ಜೀಪು ಹೋಗುವ ರಸ್ತೆಯನ್ನು ಇತ್ತೀಚಿಗೆ ಮಾಡಿರುವುದರಿಂದ ಸಾಕಷ್ಟು ಪ್ರವಾಸಿಗರ ಗಮನವನ್ನು ಸಹ ಇದು ಸೆಳೆಯುತ್ತಿದೆ. ರಸ್ತೆ ಕೂಡ ಯಾವುದೇ ತೊಡಕುಗಳಿಲ್ಲದೆ , ಗುದ್ದು ಗುಂಡಿಗಳಿಲ್ಲದೆ ಸುಲಭವಾಗಿ ಸಾಗಬಹುದಾದ ರಸ್ತೆಯಾಗಿದೆ .ಈ ಬೆಟ್ಟ  ಇತ್ತೀಚಿಗೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಕರ್ನಾಟಕದಿಂದಷ್ಟೇ ಅಲ್ಲ ,ಗುಜರಾತ್ , ಮಹಾರಾಷ್ಟ್ರ ಹೀಗೆ ಉತ್ತರ ಭಾರತದ ಇನ್ನಿತರ ಸ್ಥಳಗಳಿಂದ ಜೈನ ಭಕ್ತರು ಇಲ್ಲಿ ಬಂದು ಒಂದು ದಿನ ನೆಲೆಸಿ ಪೂಜೆಯ ಜೊತೆಗೆ ಇಲ್ಲಿನ ಅದ್ಬುತ ಪ್ರಕೃತಿಯ ಮಡಿಲಲ್ಲಿ ಮಿಂದು ಹೋಗುತ್ತಾರೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ. ಅಷ್ಟೇ ಅಲ್ಲ ಸಾವಿರಾರು ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಲಾದ ಜೈನ ಬಸದಿಯು ಇಂದಿಗೂ ಕೂಡ ವಾಸ್ತು ಶಿಲ್ಪಗಳನ್ನು ಉಳಿಸಿ ಕೊಂಡು ಬಂದಿರುವುದು ಇದರ ವಿಶೇಷತೆಯೇ ಸರಿ. ಇತ್ತೀಚಿಗೆ  ಜೀರ್ಣೋದ್ಧಾರ ಮಾಡಿ ಕೆಲವೊಂದು ಬದಲಾವಣೆಯನ್ನು ಕೂಡ ಮಾಡಲಾಗಿದೆ ಎನ್ನುತಾರೆ ಇಲ್ಲಿನ ಅರ್ಚಕರು. 

ಈ ಕುಂದಾದ್ರಿಯ ಜೈನ ದೇಗುಲದ  ಪಕ್ಕದಲ್ಲಿರುವ ಕೊಳವು ಅಂತರ ಗಂಗೆಯಾಗಿದ್ದು ಸುಮಾರು 118 ಅಡಿ ಆಳವಿದೆ . ಎಂದೂ ಬತ್ತದೇ ಸದಾ ನೀರನ್ನು ಹೊಂದಿರುವ ಈ ಕೊಳವನ್ನು ಒಮ್ಮೆ ಸ್ವಚ್ಛಗೊಳಿಸಲು ಒಂದು ವಾರ ಬೇಕಾಗುವುದು ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ.ಆಗಾಗ ಇದನ್ನು ಸ್ವಚ್ಚಗೊಳಿಸುವುದು ಕೂಡ ನಡೆದು ಕೊಂಡು ಬರುತ್ತಿದೆ ಎನ್ನಲಾಗುತ್ತದೆ. ಸ್ವಚ್ಚವಾದ ನೀರನ್ನು ಹೊಂದಿರುವ ಈ ರೀತಿಯ ಸಾಕಷ್ಟು ಅಂತರಗಂಗೆಗಳನ್ನು ಇಲ್ಲಿ ಕಾಣಬಹುದು. ಈ ಸ್ಥಳ ಕಲ್ಲಿನ ಬಂಡೆಗಳಿಂದ ಸುತ್ತುವರೆದಿದ್ದು ಕೆಳಗೆ ಇಳಿದು ಕೂಡ ಸಾಕಷ್ಟು ಪ್ರಕೃತಿ ವೀಕ್ಷಣೆ ಮಾಡಬಹುದು. ಕಲ್ಲು ಬಂಡೆಗಳ  ಮಧ್ಯದಲ್ಲಿ ಅಲ್ಲಲ್ಲಿ ಅಂತರಗಂಗೆ ಎದ್ದಿರುವುದು ಕೂಡ ವಿಶೇಷವೆನ್ನಬಹುದು.  ಅತಿ ಎತ್ತರದ ಬೆಟ್ಟವಿರುವುದರಿಂದ  ಸೂರ್ಯಾಸ್ತಮಾನವೂ  ಇಲ್ಲಿ ಸುಂದರವಾಗಿ ಕಾಣಿಸುತ್ತದೆ . ಆಗುಂಬೆಗಿಂತ ಎತ್ತರದಲ್ಲಿ ಈ ಕುಂದಾದ್ರಿ ಬೆಟ್ಟ ಇರುವುದರಿಂದ ಮೋಡ ಕವಿದು ಮುಸುಕು ಇರದಿದ್ದಲ್ಲಿ ಇಲ್ಲಿಂದ ಸೂರ್ಯಾಸ್ತ ಸುಂದರವಾಗಿ ಕಾಣಿಸುತ್ತದೆ ಎನ್ನಲಾಗುತ್ತದೆ. 

ಪ್ರಕೃತಿಯ ಹಚ್ಚ ಹಸುರನ್ನು ಹೊಂದಿರುವ ಈ ಸುಂದರ ಸ್ಥಳದಲ್ಲಿ ಚಲನಚಿತ್ರದ ಶೂಟಿಂಗ್ ಕೂಡ ನಡೆದಿದೆ. ಕುಂದಾದ್ರಿ ತಲುಪಲು ಸುಮಾರು ನಾಲ್ಕು ಕಿ ಮೀ ನಷ್ಟು ಎತ್ತರಕ್ಕೆ ಏರಬೇಕಾಗಿದ್ದು ಈಗ ಇಲ್ಲಿ ರಸ್ತೆ ಮಾಡಿರುವುದರಿಂದ ಜೀಪ್ , ಕಾರು ಗಳು ತುದಿಯವರೆಗೆ ಹೋಗುತ್ತವೆ. ಮೇಲೆ ಜೈನ ಬಸದಿಯನ್ನು ನೋಡಿಕೊಂಡು ಸುತ್ತಲೂ ಇರುವ ಕೊಳ ಮತ್ತು ಪ್ರಕೃತಿಯ ಸೊಬಗನ್ನು ಸವಿದು ಅಲ್ಲೇ ಕುಳಿತು ಮನಸ್ಸನ್ನು ಮುದಗೊಳಿಸಿಕೊಂಡು ಒಂದು ದಿನವನ್ನು ಸುಂದರವಾಗಿ ಕಳೆಯಲು  ಇದು ಸರಿಯಾದ ಸ್ಥಳ. ಜೊತೆಗೆ ನಮಗೆ ಬೇಕಾದ ಚುರುಮುರಿ ಇನ್ನಷ್ಟು ಕುರುಕಲು ತಿಂಡಿಗಳಿದ್ದರೆ ಅದನ್ನು ತಿನ್ನುತ್ತಾ ಕುಳಿತುಬಿಟ್ಟರೆ ಎದ್ದು ಬರಲು ಕೂಡ ಮನಸ್ಸಾಗದು.ಅದಲ್ಲದೆ  ಇತ್ತೀಚಿಗೆ ಸಾಕಷ್ಟು ಧಾರವಾಹಿಗಳಲ್ಲೂ ಕೂಡ ಈ ಸ್ಥಳವನ್ನು ಚಿತ್ರೀಕರಣಕ್ಕೆ ಬಳಸಿರುವುದನ್ನು ಕಾಣಬಹುದು. 

ಇಲ್ಲಿಂದ ೨೩ ಕಿ ಮೀ ಅಂತರದಲ್ಲಿ ತೀರ್ಥಹಳ್ಳಿ ಇದ್ದು ಇಲ್ಲಿ ರಾಮೇಶ್ವರ ದೇವಸ್ಥಾನ ಮತ್ತು ಅಲ್ಲಿಯ ಪಕ್ಕದ ತುಂಗಾ ನದಿಯ ತಟ ಕೂಡ ಸಂಜೆಯ ಸಮಯದಲ್ಲಿ ಸುಂದರವಾಗಿರುತ್ತದೆ.  ಪ್ರಕೃತಿಯ ಸೊಬಗನ್ನು ಸವಿಯಬಯಸುವವರು ಕುಂದಾದ್ರಿ ಯನ್ನು ವರ್ಷದ ಯಾವುದೇ ಸಮಯದಲ್ಲಿ ಕೂಡ ಭೇಟಿ ನೀಡಬಹುದಾದರೂ ಇದು ಆಗುಂಬೆಗೆ ಸಮೀಪವಿರುವುದರಿಂದ ಅಲ್ಲಿನ ಸೂರ್ಯಾಸ್ತ ನೋಡಲು ಸರಿಯಾದ ಸಮಯ ಡಿಸೆಂಬರ್ ತಿಂಗಳು.

Sunday 7 February 2016

ಗುಡವಿ ಪಕ್ಷಿಧಾಮ



My this article got published in vijayanext 06/02/16

ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪಕ್ಷಿಗಳ ಪಾಲು ಕೂಡ ಮಹತ್ವದ್ದು. ವಿವಿದ ರೀತಿಯ ಪಕ್ಷಿಗಳು ಒಂದೆಡೆ ಸೇರಿದರೆ ಅದನ್ನು ನೋಡಿ ಕಣ್ಣು ತಂಪು ಮಾಡಿಕೊಳ್ಳುವುದೆಂದರೆ ಸುಂದರ.ಕರ್ನಾಟಕದಲ್ಲಿ ರಂಗನತಿಟ್ಟು, ಮಂಡಗದ್ದೆ  ಇಂತಹ ಹೆಸರಾಂತ ಪಕ್ಷಿಧಾಮಗಳ ಪಟ್ಟಿಯಲ್ಲಿ ಗುಡವಿ ಕೂಡ ಸೇರುತ್ತದೆ.ಗುಡವಿ ಪಕ್ಷಿಧಾಮ ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮಗಳಲ್ಲಿ ಒಂದು. ಇದು ಸೊರಬ ತಾಲೂಕಿನಲ್ಲಿದೆ . ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಿಂದ 15 ಕಿ ಮೀ ಅಂತರದಲ್ಲಿ ಸೊರಬ ಬನವಾಸಿ ಮಾರ್ಗವಾಗಿ ಇರುವ ಈ ಗುಡವಿ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯ ಒಂದು ಭಾಗದಲ್ಲಿ ಸುಮಾರು  74 ಚದರ ಕಿ ಮೀ ನಷ್ಟು ಜಾಗದಲ್ಲಿ ಈ ಪಕ್ಷಿಧಾಮವನ್ನು ನಿರ್ಮಿಸಿದ್ದಾರೆ. ವಿವಿಧ ರೀತಿಯ ಪಕ್ಷಿಗಳು ವರ್ಷದ ಕೆಲವು ಸಮಯದಲ್ಲಿ ಬಂದು ಇಲ್ಲಿ ಒಟ್ಟುಗೂಡುವುದರಿಂದ ಇದೊಂದು ಸುಂದರ ಪಕ್ಷಿಧಾಮವಾಗಿ ನಿರ್ಮಿತವಾಗಿದೆ. ಇದನ್ನು ಪ್ರವಾಸೋದ್ಯಮ ಇಲಾಖೆಯವರು ಕಾಳಜಿಯಿಂದ ಸ್ವಚ್ಚವಾಗಿ ಕಾಪಾಡಿಕೊಂಡು ಬಂದಿರುವುದು ಕೂಡ ಮೆಚ್ಚಬೇಕಾದ ಸಂಗತಿ.  

ಗುಡವಿ ಪಕ್ಷಿಧಾಮದ ಒಳಗೆ ಹೊಕ್ಕುತ್ತಿದ್ದಂತೆ ನಮಗೆ ಕಂಡು ಬರುವುದು ಮಕ್ಕಳು ಆಡಲಿಕ್ಕೆ ನಿರ್ಮಿಸಿರುವ ಪಾರ್ಕ್ , ಅಲ್ಲಿ ಬಂದ  ಮಕ್ಕಳು ಜೋಕಾಲಿ ಜಾರುಬಂಡಿ ಹೀಗೆ ಇನ್ನಿತರ ಆಟಗಳನ್ನು ಆಡಿ ಸಮಯ ಕಳೆಯುತ್ತಿದ್ದರೆ ದೊಡ್ಡವರು ಪಕ್ಷಿ ವೀಕ್ಷಣೆಗೆ ತಮ್ಮ ಪ್ರಯಾಣ ಬೆಳೆಸುತ್ತಿದ್ದುದು ಕಾಣಿಸುತ್ತಿತ್ತು.  ಹಕ್ಕಿಗಳು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಮರಗಳ ಸಂದಿಗಳಲ್ಲಿ ಅಡಗಿ ಕುಳಿತಿದ್ದರೆ ಅದನ್ನು ನೋಡಲು ಎತ್ತರದ ವೀಕ್ಷಣಾ ಸ್ಥಳವನ್ನು ಕೂಡ ಇಲ್ಲಿ ಮಾಡಲಾಗಿದೆ. ನಡೆದುಕೊಂಡು ಹೋಗುವ ದಾರಿಯಲ್ಲಿ ಸುತ್ತಲೂ ಹಸಿರಾದ ಗದ್ದೆ ಇರುವುದರಿಂದ ತಂಪು ಗಾಳಿ ಮತ್ತು ಸುಂದರ ಪ್ರಕೃತಿಯ ನೋಟ ನಮ್ಮನ್ನು ಸೆಳೆಯುತ್ತಿತ್ತು.ಪ್ರವಾಸೋಧ್ಯಮ ಇಲಾಖೆ ಮಾಡಿರುವ ಎತ್ತರದ ನಿಂತು ನೋಡಬಹುದಾದ ಕಟ್ಟಡವನ್ನು ಮೆಟ್ಟಿಲ ಮೂಲಕ ಹತ್ತಿ ಮೇಲೆ ಹೋಗಿ ನಿಂತು ನೋಡಿದರೆ ಅಲ್ಲಲ್ಲಿ ಕಪ್ಪು ಮತ್ತು ಬಿಳಿ ಹಕ್ಕಿಗಳ ಗುಂಪು ಕಾಣಿಸುತ್ತಿತ್ತು. ಜೊತೆಗೆ ಕ್ಯಾಮೆರಾ ಇದ್ದುದ್ದರಿಂದ ಅದರಲ್ಲಿ ಜೂಮ್ ಮಾಡಿ ನೋಡಿದ್ದರಿಂದ ಅದು ಹಕ್ಕಿಗಳ ದೊಡ್ಡ ಗುಂಪು ಎಂಬುದು ಸ್ಪಷ್ಟವಾಗುವಂತಿತ್ತು. ಇನ್ನೂ ಮುಂದೆ ಹೋಗುತ್ತಿದ್ದಂತೆ ಹಕ್ಕಿಗಳ ಗೂಡಿಗೆ ಹತ್ತಿರವಾದ ಕಟ್ಟಡ ಕಟ್ಟಿರುವುದರಿಂದ ಹತ್ತಿರದಿಂದಲೇ ನೋಡಬಹುದು.  ಇಲ್ಲಿ ಪ್ರಕೃತಿ  ಸವಿಯನ್ನು ಸವಿಯುವುದರ ಜೊತೆಗೆ ಸಾವಿರಾರು ಪಕ್ಷಿಗಳನ್ನು ನೋಡಿ ಮನ ತಣಿಸಿಕೊಳ್ಳಬಹುದು. ನೀವು ಪಕ್ಷಿ ಪ್ರಿಯರಾಗಿದ್ದು ವಿವಿಧ ರೀತಿಯ ಹಕ್ಕಿಗಳ ಪರಿಚಯ ನಿಮಗಿದ್ದಲ್ಲಿ ಇದು ಇನ್ನೂ ವಿಶೇಷವಾಗಿ ಕಾಣಿಸುವುದರಲ್ಲಿ ಅನುಮಾನವಿಲ್ಲ.ಸುಮಾರು 200 ಕ್ಕೂ ಹೆಚ್ಚು ರೀತಿಯ ಬೇರೆಬೇರೆ ಪ್ರಭೇದದ ಹಕ್ಕಿಗಳು ಇಲ್ಲಿ ಬಂದು ಸೇರುತ್ತವೆ ಎನ್ನಲಾಗುತ್ತದೆ. 

ಇಲ್ಲಿನ ಗದ್ದೆ ಮತ್ತು ಮರಗಳ ಕೆಳಗೆ ನೀರು ತುಂಬುವುದರಿಂದ ಅಕ್ಟೋಬರ್ ನಲ್ಲಿ ಬೇರೆಬೇರೆ ದೇಶದಿಂದ ಹಲವಾರು ಹಕ್ಕಿಗಳು ಇಲ್ಲಿ ಬರಲು ಪ್ರಾರಂಭವಾಗುತ್ತದೆ. ಮಳೆಗಾಲ ಮುಗಿದಾದ ಮೇಲೆ ಇಲ್ಲಿ ನೀರು ಸರಿಯಾಗಿ ತುಂಬುವುದರಿಂದ ಹಕ್ಕಿಗಳ ವಾಸಕ್ಕೆ ಇದು ಸರಿಯಾದ ಸ್ಥಳವಾಗುತ್ತದೆ ,ವಿವಿಧ ಹಕ್ಕಿಗಳು ಇಲ್ಲಿ ಒಟ್ಟಿಗೆ ಬಂದು ಸೇರುವುದನ್ನು ಆ ಹಕ್ಕಿಗಳ ಹಾರಾಟವನ್ನು ನೋಡುವುದೇ ಒಂದು ಸಂಭ್ರಮ. ಆದರೆ ಇತ್ತೀಚಿಗೆ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಮಳೆ ಕೂಡ ಕಡಿಮೆಯಾದ  ಕಾರಣ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಲ್ಲಿನ ಉಸ್ತುವಾರಕರು ಹೇಳುತ್ತಾರೆ. ಈ ಬಾರಿ ಮಳೆ ಕಡಿಮೆಯಾದ್ದರಿಂದ ಹಕ್ಕಿಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ಬಂದು ಸೇರಿದ್ದವು. 

ವೈಟ್ ಐಬಿಸ್ ,ಸ್ನೇಕ್ ಬರ್ಡ್ , ಲಿಟಲ್ ಎಗ್ರೆಟ್ , ಸ್ಪೂನ್ ಬಿಲ್ , ನೈಟ್ ಹೆರೋನ್ ,ಪಿನ್ ಟೈಲ್ ,ಕೂಟ್ ,ಪರ್ಪಲ್ ಮೆರಾನ್ , ಇಂಡಿಯನ್ ಮೆರಾನ್ ಇನ್ನೂ ಮುಂತಾದ ೨೫ ಕ್ಕೂ ಹೆಚ್ಚು ವಿವಿಧ ತಳಿಯ ಪಕ್ಷಿಗಳು ದೇಶ ವಿದೇಶದಿಂದ  ಬಂದು ಇಲ್ಲಿ ಸೇರುತ್ತವೆ. ನವೆಂಬರ್ ನಿಂದ ಫೆಬ್ರವರಿಯವರೆಗೆ ಇಲ್ಲಿ ಬಂದು ಸೇರುವ ಹಕ್ಕಿಗಳು ಫೆಬ್ರವರಿಯ ನಂತರ ಮತ್ತೆ ಹಾರಿ ವಲಸೆ ಹೋಗುತ್ತವೆ.  ಈ ಸಮಯದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಕ್ಕಿಗಳು ಇಲ್ಲಿ ಬಂದು ಸೇರುತ್ತವೆ. 

ಚಳಿಗಾಲದಲ್ಲಿ ಹಕ್ಕಿಗಳು ಎಲ್ಲೆಲ್ಲಿಂದಲೋ  ವಲಸೆ ಬಂದು ಗೂಡು ಕಟ್ಟಿಕೊಂಡು ಮರಿ ಮಾಡುವ ಹಕ್ಕಿಗಳನ್ನು ನೋಡಿದರೆ ಅದ್ಬುತ ಎನಿಸುತ್ತದೆ. ಇಷ್ಟೇ ಅಲ್ಲದೆ ಸುಂದರವಾಗಿ ಸ್ವಚ್ಚತೆಯನ್ನು ಕಾಪಾಡಿಕೊಂಡು ಪಕ್ಷಿಗಳನ್ನು ಎತ್ತರದಿಂದ ನಿಂತು ನೋಡಿದರೆ ಸುಂದರವೆನಿಸುತ್ತವೆ.  ಪಕ್ಷಿ ವೀಕ್ಷಣೆಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆ ಉತ್ತಮ ವ್ಯಯಸ್ಥೆ ಮಾಡಿ ಕೊಟ್ಟಿರುವುದನ್ನು ಕೂಡ ಇಲ್ಲಿ ಕಾಣಬಹುದು .ಸಾಕಷ್ಟು ಎತ್ತರದ ಮರಗಳು ಇಲ್ಲಿರುವುದರಿಂದ ಮಂಗಗಳು ಕೂಡ ಇಲ್ಲಿ ಬೀಡು ಬಿಟ್ಟಿದ್ದು ಹೋದವರನ್ನು ತನ್ನ ಚೇಷ್ಟೆಯ  ಮೂಲಕ ಆಕರ್ಷಿಸುತ್ತದೆ. 

ಹಕ್ಕಿಗಳ ಮೇಲೆ ವಿಶೇಷ ಆಸಕ್ತಿ ಇರುವವರು ಅದನ್ನು ನೋಡಲೆಂದೇ ದೊಡ್ದ ಲೆನ್ಸ್ ಇರುವ ಕ್ಯಾಮೆರಾ ಹಿಡಿದುಕೊಂಡು ದೂರದಿಂದಲೇ ಒಂದೊಂದೇ ಹಕ್ಕಿಗಳ ಸೆರೆ ಹಿಡಿಯುತ್ತಿರುವುದನ್ನು ಇಲ್ಲಿ ಕಾಣಬಹುದು. ದೇಶ ವಿದೇಶಗಳಿಂದ ಸಾಕಷ್ಟು ಪಕ್ಷಿ ಪ್ರೇಮಿಗಳು ಇಲ್ಲಿ ಪ್ರತಿ ವರ್ಷ ಬರುತ್ತಾರೆ ಎನ್ನಲಾಗುತ್ತದೆ. 
ಭೇಟಿ ನೀಡಲು ಸರಿಯಾದ ಸಮಯ :-
ವಿವಿಧ ತಳಿಯ ಪಕ್ಷಿಗಳು ಚಳಿಗಾಲದಲ್ಲಿ ಇಲ್ಲಿ ವಲಸೆ ಬಂದು ಸೇರುವುದರಿಂದ ಅಕ್ಟೋಬರ್ ನಿಂದ ಡಿಸೆಂಬರ್ ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯ.  

ಮಾರ್ಗ :- ಬೆಂಗಳೂರಿನಿಂದ ಸಾಗರಕ್ಕೆ ನೇರ ರೈಲಿನಲ್ಲಿ ಬಂದು ಅಲ್ಲಿಂದ ಬಸ್ಸಿನ ಮೂಲಕ ಅಥವಾ ಕಾರಿನಲ್ಲಿ (ಸಾಗರದಿಂದ 60 ಕಿ ಮೀ )ತೆರಳಬಹುದು. ಸೊರಬದಿಂದ ಸುಮಾರು 15 ಕಿ ಮೀ ಅಂತರದಲ್ಲಿದ್ದು ಸೊರಬದಿಂದ ಕೂಡ ಕಾರು ಅಥವಾ ಬಸ್ಸಿನಲ್ಲಿ ತೆರಳಬಹುದು. ಇಲ್ಲಿಂದ ಹತ್ತಿರದಲ್ಲಿ ಬನವಾಸಿ ಕೂಡ ಇರುವುದರಿಂದ ಎರಡನ್ನೂ ಒಂದೇ ದಿನದಲ್ಲಿ ನೋಡಬಹುದು. 

ಹತ್ತಿರದ ಪ್ರವಾಸಿ ಸ್ಥಳಗಳು :-
ಸೊರಬ ಬನವಾಸಿ ಮಾರ್ಗವಾಗಿರುವ ಈ ಸ್ಥಳ ಬನವಾಸಿ ಮಧುಕೇಶವ ದೇವಾಲಯಕ್ಕೆ ಹತ್ತಿರವಾಗುತ್ತದೆ.  ಇಕ್ಕೇರಿ , ಕೆಳದಿ , ಜೋಗ್ ಫಾಲ್ಸ್ ಕೂಡ ಇಲ್ಲಿಗೆ ಹತ್ತಿರದ ಪ್ರಸಿದ್ಧ ಪ್ರವಾಸಿ ಸ್ಥಳಗಳು. 

Arpitha Harsha