Monday 22 June 2020

ಅಪ್ಪನಿಗೊಂದು ಪತ್ರ

Published in Omanase 22/06/2020 http://www.omanase.com/?p=3848


ಇನ್ನೇನು ಭಾನುವಾರ ಅಪ್ಪಂದಿರ ದಿನ ಬಂದೆ ಬಿಟ್ಟಿತು. ಅಪ್ಪಂದಿರ ದಿನ ಮಾತ್ರವಲ್ಲ ಅಪ್ಪ ಪ್ರತಿದಿನ ಸಾಕಷ್ಟು ಕಾರಣಗಳಿಗೆ ನೆನಪಾಗುತ್ತಾನೆ. ಅಪ್ಪ ಎಂದರೆ ಸಮುದ್ರದಷ್ಟು ವಿಸ್ತಾರ .ಕೇವಲ ಪದಗಳಲ್ಲಿ ಬರೆದು  ಮುಗಿಸಬಹುದಾದ ಬಾಂಧವ್ಯವಲ್ಲ .ಅಪ್ಪನ ಬಗ್ಗೆ ಬರೆದಷ್ಟೂ ಮುಗಿಯದಷ್ಟು, ನೆನಪಿಸಿದಷ್ಟೂ ವಿಸ್ತಾರವಾಗುವ ಸಾಕಷ್ಟು ವಿಷಯಗಳಿವೆ. ಹೀಗೆ ಅಪ್ಪನ ಬಗ್ಗೆ ಬರೆಯಬೇಕು ಎಂದಾಗಲೆಲ್ಲಾ ಸೋತಿದ್ದೇನೆ ,ಪದಗಳು ಸಿಗದೇ ಅಥವಾ ಸಿಕ್ಕ ಪದಗಳು ಸರಿಯಾಗಿ ಹೊಂದದೇ ಹೀಗೆ ಅದೆಷ್ಟೋ ಭಾರಿ ಬರೆಯ ಹೊರಟದ್ದೊಂದು ಆಗಿದ್ದು ಇನ್ನೊಂದು .  
ಆದರೂ ಈ ಅಪ್ಪಂದಿರ ದಿನಕ್ಕೆ ಅಪ್ಪನಿಗೊಂದು ಶುಭಾಶಯವನ್ನು ದೂರದಲ್ಲಿ ಕೂತು ಹೀಗೆ ತಲುಪಿಸುವ ಆಕಾಂಕ್ಷೆ ನನ್ನದು.
ಚಿಕ್ಕ ಮಕ್ಕಳಿಗೆ ತನ್ನ  ಜೊತೆಗೆ ಕಳೆದ ದಿನಗಳು ನೆನಪಿನಲ್ಲಿ ಬಹಳಷ್ಟು ಉಳಿಯುತ್ತವೆ ಮತ್ತು ಹಾಗೆ ಜೊತೆಗೆ ಕಳೆದವರ ಅನುಕರಣೆ ಬೆಳೆಯುತ್ತಾ ಮನಸ್ಸಿನಲ್ಲಿ ಉಳಿದು ಅವರಂತೆಯೇ ಆಗುವ ಪ್ರಯತ್ನ ಮಕ್ಕಳಲ್ಲಿ ಬೆಳೆಯುತ್ತದೆ. ಹಾಗೆ ಅಪ್ಪ ತಾನೇ ಉದಾಹರಣೆಯಾಗಿ ನಿಂತು ತಿದ್ದಿ ತೀಡಿದ್ದು ನನಗೊಂದು ಮಗುವಾಗುವವರೆಗೆ  ಅರಿವಿಗೇ ಬಂದಿರಲಿಲ್ಲ. ಇಂದು ಕುಳಿತು ಹಿಂತಿರುಗಿ ನೋಡಿದರೆ ಅಪ್ಪನಂತೆ ಬದುಕಬೇಕು ಎಂಬಷ್ಟು ಅಪ್ಪ ನನ್ನನ್ನು ಆವರಿಸಿಕೊಂಡಿದ್ದಾನೆ .ಹಾಗೆ ಮಗಳನ್ನು ಮಾತ್ರವಲ್ಲ ಅಳಿಯ ,ಮೊಮ್ಮಗನು ಕೂಡ ದಿನಕ್ಕೆರಡು ಬಾರಿ ನೆನಪಿಸಿಕೊಳ್ಳುವಂತೆ ಬದುಕುತ್ತಿರುವ ಅಪ್ಪ ಒಂದು ಮಾದರಿ ಎಂದೇ ಹೇಳಬಹುದು.
ಚಿಕ್ಕಂದಿನಿಂದ ನನ್ನ ಓದು ಮುಗಿಸಿ ಮದುವೆಯಾಗುವವರೆಗೆ ಅಪ್ಪನೊಂದಿಗೇ ದಿನದ ಬಹುಪಾಲು ಕಳೆದ ನನಗೆ ಇಂದಿಗೂ ಕಾಡುವುದು ಅಪ್ಪನ ತಾಳ್ಮೆ . ಅದೆಷ್ಟು ತಾಳ್ಮೆ ಎಂದರೆ ಬಹುಶಃ ಅಪ್ಪ ತನ್ನ ಸಹನೆಯನ್ನು ಕಳೆದುಕೊಂಡ ದಿನವನ್ನು ನಾನೆಂದೂ ನೋಡಿಯೇ ಇಲ್ಲ ,ಅಪ್ಪ ಎಂದ ತಕ್ಷಣ ನೆನಪಿಗೆ ಬರುವುದು ಆತನ ಸಹನೆ ಮತ್ತು ಭರಪೂರ ಕಾಳಜಿ ತುಂಬಿದ ಮಾದರಿ ಬದುಕು.
ತನಗಿಲ್ಲದಿದ್ದರೂ ಮಕ್ಕಳಿಗೋಸ್ಕರ ಏನನ್ನಾದರೂ ತಂದು ಕೊಟ್ಟು ಸಾಕಿ ಸಲಹಿದ ಅಪ್ಪನಲ್ಲಿರುವ ತಾಳ್ಮೆ ಈಗಲೂ ನನ್ನನ್ನು ಚಕಿತಗೊಳಿಸುತ್ತದೆ . ತನ್ನ ಜೀವಮಾನದಲ್ಲೆಂದೂ ತಾಳ್ಮೆ ಕಳೆದುಕೊಂಡು ಯಾರಿಗಾದರೂ ರೇಗಿದ್ದನ್ನು ಇಂದಿನವರೆಗೂ ನಾನು ಕಂಡದ್ದಿಲ್ಲ. ಚಿಕ್ಕಂದಿನಿಂದಲೂ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಅಪ್ಪನಿಂದ ಬಹುದೂರದ ದೇಶಕ್ಕೆ ಬಂದು ಆಗಲೇ ಹತ್ತು ವರ್ಷಗಳಾಗುತ್ತಾ ಬಂತು .ಇಂದಿಗೂ ವರ್ಷಕ್ಕೊಮ್ಮೆ ಊರಿಗೆ ಹೋಗಿ ಹಿಂದಿರುಗುವಾಗ ಅಪ್ಪ ಕೈ ಹಿಡಿದು ಹಾಕುವ ಕಣ್ಣೀರು ಮನಸ್ಸಿಗೆ ಸಂಕಟ ತರುತ್ತದೆ .ರಾಜಕೀಯ ,ಬ್ಯಾಂಕ್ ,ಬರವಣಿಗೆ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ನನ್ನೊಂದಿಗೆ ಪ್ರತಿಭಾರಿ ಚರ್ಚಿಸುವ ಅಪ್ಪ ಸಂಬಂಧಗಳ ಬಗ್ಗೆ ಮತ್ತು ಅದನ್ನು ಅಷ್ಟೇ ನಾಜೂಕಾಗಿ ನಿಭಾಯಿಸುವ ಬಗ್ಗೆ ಸಣ್ಣದೊಂದು ಸುಳಿವು ,ಭರವಸೆ ನೀಡಿ ಸಂತೈಸುವ ಬಗೆ ಕೂಡ ಸಾಕಷ್ಟು ಭಾರಿ ಸಂತಸ ನೀಡಿದೆ. ಎಷ್ಟೋ ಬಾರಿ ಯೋಚಿಸಿದಾಗ ಅನ್ನಿಸುವುದು  ಅಪ್ಪನೇ ಒಂದು ತವರು . ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು ದೂರದೂರಿಂದ !!

ಅರ್ಪಿತಾ ರಾವ್
ಬ್ಯಾನ್ಬರಿ
ಯುನೈಟೆಡ್ ಕಿಂಗ್ಡಮ್ 

Saturday 6 June 2020

ಶಾಲೆ ಶುರು ಮಾಡಿದ್ರೆ ಸುರಕ್ಷಿತ ಕ್ರಮಗಳೇನಿರಬೇಕು?

Published in OMANASE 6/6/2020    http://www.omanase.com/?p=3710


ವಿಶ್ವದಾದ್ಯಂತ ಕರೋನ ವೈರಸ್ ಹರಡಿ ಕೆಲವೊಂದಿಷ್ಟು ಜನರನ್ನು ನರಳಿಸಿ ಇನ್ನು ಕೆಲವರನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ ಯುನೈಟೆಡ್ ಕಿಂಗ್ಡಮ್ ನಲ್ಲಿ ಕರೋನ ವೈರಸ್ ನಿಂದಾಗಿ ಕೆಲವೊಂದಿಷ್ಟು ಜನ ಸಣ್ಣ ಪ್ರಮಾಣದಲ್ಲಾದ್ದರಿಂದ  ಮನೆಯಲ್ಲಿಯೇ ಅನುಭವಿಸಿ, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿ, ಇನ್ನು  ಸಾವಿನ ಸಂಖ್ಯೆ ಐವತ್ತು ಸಾವಿರವನ್ನೂ ದಾಟಿರುವುದು ಖೇದವೇ ಸರಿ.  ಹೀಗಿರುವಾಗ ಇಲ್ಲಿನ ಸರ್ಕಾರ ಶಾಲೆಗಳನ್ನು ತೆರೆಯುವ ಯೋಚನೆ ಮಾಡಿದಾಗ ಜನಸಾಮಾನ್ಯರು ಆತಂಕಕ್ಕೆ ಒಳಗಾಗದಿರಲು ಸಾಧ್ಯವೇ ? ವೇಲ್ಸ್ ಮತ್ತು ಸ್ಕಾಟ್ಲೆಂಡ್ ನಲ್ಲಿ ಹಲವೆಡೆ ಸೆಪ್ಟೆಂಬರ್ ನಲ್ಲಿ ಎಂದಿನಂತೆ ಪ್ರಾರಂಭವಾಗುತ್ತದೆ ಎನ್ನಲಾಗಿದೆ . ಇನ್ನು ಕೆಲವು ಭಾಗಗಳಲ್ಲಿ ಕರೋನ ಸಂಖ್ಯೆ ಅಧಿಕವಿರುವುದರಿಂದ ಆ ಪ್ರಾಂತ್ಯದ ಶಾಲೆಯನ್ನು ತೆರೆದಿರುವುದಿಲ್ಲ .ಆದರೆ ಇಂತಹ ಸಮಯದಲ್ಲೂ ಕೂಡ ಇಲ್ಲಿನ ಶಾಲೆಗಳು ಪ್ರಾರಂಭವಾಗಿದೆ ಮತ್ತು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿವೆ .ಹೌದು ಇಂಗ್ಲೆಂಡ್ ನಲ್ಲಿ ಸಾಕಷ್ಟು ಶಾಲೆಗಳನ್ನು ಜೂನ್ ಒಂದರಿಂದ ತೆರೆಯಲಾಗಿದೆ .ಇಂಗ್ಲೆಂಡ್ ನಲ್ಲಿ ಆರು ವಾರಗಳ ಕಾಲ ಶಾಲಾಕಾಲೇಜುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು .ಹಾಗೆ ಶಾಲೆಗಳು ಪ್ರಾರಂಭವಾಗುತ್ತವೆ ಎಂಬುದು ತಿಳಿಯುತ್ತಿದಂತೆ ಅನೇಕ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಕೂಡ. ಸಾಕಷ್ಟು ಜನರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಲಂಡನ್ ನಂತ ಸಿಟಿಯಲ್ಲಿರುವವರಿಗೆ ಅಲ್ಲಿನ ಕರೋನ ಆರ್ಭಟ ನೋಡಿ ಇತ್ತ ಮನೆಯಲ್ಲಿ ಎಷ್ಟು ದಿನ ಆನ್ಲೈನ್ ಪಾಠ ಮಾಡುವುದು ಎಂಬುದರ ಬಗ್ಗೆ ಗೊಂದಲ ಅತ್ತ ಶಾಲೆಗೆ ಕಳಿಸಲೂ ಭಯ . ಹೀಗಿರುವ ಪರಿಸ್ಥಿತಿಯಲ್ಲಿಯೇ ಇಲ್ಲಿನ ಸರ್ಕಾರ ಪ್ರಿ ಸ್ಕೂಲ್, ರಿಸೆಪ್ಶನ್ (೪-೫ ವರ್ಷದ ಮಕ್ಕಳು ), ಒಂದನೇ ತರಗತಿ ಮತ್ತು ಆರನೇ ತರಗತಿ ಮಕ್ಕಳಿಗೆ ಶಾಲೆಯನ್ನು ಪುನರಾರಂಭಿಸಿದೆ.ಆದರೆ ಪ್ರತಿ ಶಾಲೆಯನ್ನು ತೆರೆಯುವ ಮುನ್ನ ಕರೋನ ಮಕ್ಕಳ ಹತ್ತಿರ ಕೂಡ ಬಾರದಿರಲು ಎಷ್ಟು ಬೇಕೋ ಅಷ್ಟು  ಕಾಳಜಿಯನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ನಿಜಕ್ಕೂ ಮೆಚ್ಚಲೇಬೇಕು. ಇದಕ್ಕೂ ಮೀರಿ ಕರೋನ ಶಾಲೆಯ ಒಳಗೆ ಬರುವ ಸಾಧ್ಯತೆ ಬಹಳ ಕಡಿಮೆ ಎಂಬುದು ಕೂಲಂಕುಷವಾಗಿ ನೋಡಿದ ನನ್ನ ಅಭಿಪ್ರಾಯ.  ಹಾಗಾದರೆ ಕರೋನ ಹರಡದಂತೆ ಶಾಲೆ ತೆಗೆದುಕೊಂಡಿರುವ ವ್ಯಯಸ್ಥೆ ಏನು ಎಂಬುದನ್ನು ನೋಡೋಣ .

ಶಾಲೆ ಪ್ರಾರಂಭವಾಗುವ ಮೊದಲೇ ಪ್ರತಿ ಪೋಷಕರಿಗೆ ಮಕ್ಕಳನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡುವಂತೆ ತಿಳಿಸಲಾಗಿದೆ. ಶಾಲೆಗೆ ಬರುವಾಗ ಕೇವಲ ಅಗತ್ಯವಿರುವ ಬಟ್ಟೆ ಧರಿಸಬೇಕು , ಅಂದರೆ ಟೈ , ಕೋಟ್ ಇವುಗಳ ಅಗತ್ಯವಿಲ್ಲ .ಬುಕ್ ಬ್ಯಾಗ್ ತರುವ ಅವಶ್ಯಕತೆ ಇಲ್ಲ,ಮಕ್ಕಳಿಗೆ ಕಲಿಸಬೇಕಾದ ಮಾಥ್ಸ್ ,ಇಂಗ್ಲಿಷ್ ,ಫೌಂಡೇಶನ್ , ಕ್ರಾಫ್ಟ್ಸ್ ಇವುಗಳಿಗೆ ಅಗತ್ಯ ಸಾಮಗ್ರಿಗಳನ್ನು ಅಲ್ಲಿಯೇ ನೀಡಲಾಗುತ್ತದೆ ಮತ್ತು ಇವುಗಳನ್ನು ಪ್ರಿಂಟೌಟ್ ಮೂಲಕ ಮನೆಗೆ ಕಳಿಸಲಾಗುತ್ತದೆ, ಮತ್ತು ಮಕ್ಕಳಿಗೆ ಒಬ್ಬರನ್ನೊಬ್ಬರು ಮುಟ್ಟದಿರುವಂತೆ , ಅಪ್ಪಿಕೊಳ್ಳದಿರುವಂತೆ ಸಲಹೆಗಳನ್ನು ಆಗಾಗ ಕೈ ತೊಳೆದುಕೊಳ್ಳಬೇಕು ಎಂಬುದರ ಬಗ್ಗೆ ಪೋಷಕರೇ ಮೊದಲು ಮನೆಯಲ್ಲಿಯೇ ಸಾಕಷ್ಟು ಬಾರಿ ತಿಳಿ ಹೇಳಿರಬೇಕು. ಶಾಲೆಗೆ ಹೋಗಲು ಪ್ರತಿ ಮಗುವಿಗೆ ಪ್ರತ್ಯೇಕ ಸಮಯ ಮತ್ತು ಸಂಜೆ ಕರೆದುಕೊಂಡು ಬರಲು ಕೂಡ ಪ್ರತ್ಯೇಕ ಸಮಯ . ಪ್ರತಿಯೊಬ್ಬ ಪೋಷಕರೂ ತಮಗೆ  ನಿಗದಿಪಡಿಸಿದ ಆ ಐದು ನಿಮಿಷದ ಸಮಯದಲ್ಲೇ ಮಗುವನ್ನು ಶಾಲೆಯ ಗೇಟ್ ಒಳಗೆ ಬಿಡಬೇಕು ಮತ್ತು ಪ್ರತಿದಿನ ತಮಗೆ ನೀಡಲಾದ ಪ್ರತ್ಯೇಕ ಸಮಯದಲ್ಲೇ  ಕರೆದುಕೊಂಡು ಬರಬೇಕು.ಶಾಲೆಯ ಪ್ರವೇಶಕ್ಕೆ ಒಂದು ಗೇಟ್ ನಿಗದಿಪಡಿಸಲಾಗಿದೆ ಮತ್ತು ಹೊರಬರಲು ಇನ್ನೊಂದು ಗೇಟ್ .ಹೀಗೆ ಮಾಡಿರುವುದರಿಂದ ಪೋಷಕರು ಕೂಡ ಬೇರೆಯ ಪೋಷಕರನ್ನು ಭೇಟಿಯಾಗುವ ಸಂದರ್ಭವಿಲ್ಲ ಮತ್ತು ಸಾಮಾಜಿಕ ಅಂತರಕ್ಕೆ ತೊಂದರಿಯಾಗುತ್ತಿಲ್ಲ.
ಪ್ರತಿದಿನ ಶಾಲೆಗೆ  ಪ್ರವೇಶಿಸುತ್ತಿದ್ದಂತೆ ಮಗುವಿನ ಟೆಂಪರೇಚರ್ ನೋಡಲಾಗುತ್ತದೆ.ನಂತರ ಕೈಯನ್ನು ಸ್ನಾನಿಟೈಸರ್ ಬಳಸಿ ತೊಳೆದುಕೊಂಡು ಒಳ ಹೋಗಬೇಕು . ಉಳಿದಂತೆ ಮಕ್ಕಳನ್ನು ಸ್ವಾಗತಿಸಲು ಎಂದಿನಂತೆ ಶಿಕ್ಷಕರೊಬ್ಬರು ಹೊರಗೆ ನಿಂತು ಮಕ್ಕಳನ್ನು ಆಹ್ವಾನಿಸಲಾಗುತ್ತದೆ .
ಇನ್ನು ಶಾಲೆಯ ಒಳಭಾಗದ ಬಗ್ಗೆ ಹೇಳುವುದಾದರೆ ಆರು ಅಡಿ ಅಂತರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಡೆಸ್ಕ್ ನೀಡಲಾಗಿದೆ . ಅವರಿಗೆ ಬೇಕಾದ ಕ್ರಾಫ್ಟ್ ಸಲಕರಣೆಗಳನ್ನು , ಪೆನ್ಸಿಲ್ , ನೋಟ್ ಬುಕ್ ಗಳನ್ನೂ ಪ್ರತ್ಯೇಕವಾಗಿ ಆ ಡೆಸ್ಕ್ ನಲ್ಲೇ ಇರಿಸಲಾಗುತ್ತದೆ .ಇಲ್ಲಿ ಈಗ ಬೇಸಿಗೆಯಾದ್ದರಿಂದ ಮಕ್ಕಳನ್ನು ಹೆಚ್ಚಿನ ಸಮಯ ಹೊರಗೆ ಹದವಾದ ಬಿಸಿಲಿನಲ್ಲಿ ಬೇರೆಬೇರೆ ರೀತಿಯ ದೈಹಿಕ ವ್ಯಾಯಾಮ , ಆಟಗಳನ್ನು ಆಡಿಸಲಾಗುತ್ತದೆ . ಹೀಗೆ ಮಾಡುವುದರಿಂದ ಮಕ್ಕಳು ಒಬ್ಬರನ್ನೊಬ್ಬರು ಮುಟ್ಟುವುದಿಲ್ಲ ಮತ್ತು ಒಂದೇ ವಸ್ತುವನ್ನು ಹಂಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ . ಮತ್ತು ಶಾಲೆಯ ಸಾಕಷ್ಟು ಕಡೆಗಳಲ್ಲಿ ಮಕ್ಕಳಿಗೆ ಕೈ ತೊಳೆಯಲು ನೆನಪಿಸುವಂತೆ ಆಕರ್ಷಕ ಚಿತ್ರಗಳನ್ನು ಕೂಡ ಹಾಕಿದ್ದಾರೆ . ಹಾಗೆಯೇ ಪ್ರತಿಯೊಬ್ಬರಿಗೂ  ಹ್ಯಾಂಡ್ ವಾಶ್ ಬಳಸಿ ಕೈಯನ್ನು ಹೇಗೆ ಸ್ವಚ್ಚಗೊಳಿಸಬೇಕು ಎಂಬುದನ್ನು ತಿಳಿಸಲಾಗಿದೆ.

ಪ್ರತಿಯೊಂದು ತರಗತಿಯಲ್ಲಿ ಕೇವಲ ಹದಿನೈದು ಮಕ್ಕಳು ಮಾತ್ರ ಮತ್ತು ಯಾವುದೇ ರೀತಿಯ ತಂಡಿ ,ಕೆಮ್ಮು,ಜ್ವರ,ಸುಸ್ತು ಇವುಗಳು ಕಾಣಿಸಿಕೊಂಡರೆ ತಕ್ಷಣ ಶಾಲೆಗೆ ಕಳಿಸುವುದನ್ನು ನಿಲ್ಲಿಸಬೇಕು. ಕೇವಲ ಮಕ್ಕಳಿಗೆ ಮಾತ್ರವಲ್ಲ ಮನೆಯಲ್ಲಿ ಇತರರಿಗೆ ಈ ಲಕ್ಷಣಗಳಿದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವಂತಿಲ್ಲ .
ಇಷ್ಟೆಲ್ಲದರ ನಂತರ ಪೋಷಕರೂ ಕೂಡ ಮನೆಗೆ ಕರೆದುಕೊಂಡು ಬಂದ ತಕ್ಷಣ ಮಕ್ಕಳು ಹಾಕಿಕೊಂಡ ಬಟ್ಟೆ ತೊಳೆಯಲು ಹಾಕಬೇಕು ಮತ್ತು ತಕ್ಷಣ ಸ್ನಾನ ಮಾಡಿಸಿಯೇ ಮನೆ ಒಳಗೆ ಕರೆದುಕೊಂಡು ಬರಬೇಕು .ಇಷ್ಟು ಕಾಳಜಿಯನ್ನು ತೆಗೆದುಕೊಂಡಲ್ಲಿ ಕರೋನ ಬರುವ ಸಾಧ್ಯತೆ ಖಂಡಿತ ಶೇಖಡಾ ೯೦ ರಷ್ಟು ಕಡಿಮೆ ಇರುತ್ತದೆ .
ಇಂತಹದೊಂದು ಸಂಪೂರ್ಣ ಯೋಜನೆಯನ್ನು ಹಾಕಿಕೊಂಡ ನಂತರವೇ ಶಾಲೆಯನ್ನು ತೆರೆಯುವ ನಿರ್ಧಾರವನ್ನು ಮಾಡಿದ ಸರ್ಕಾರ ಮತ್ತು ಅದಕ್ಕೆ ತಕ್ಕದಾಗಿ ಪ್ರತಿ ಶಿಕ್ಷಕರು ಮಕ್ಕಳನ್ನು ಕಾಳಜಿ ತೆಗೆದುಕೊಳ್ಳುವ  ಶ್ರಮ ನೋಡಿದರೆ ನಿಜಕ್ಕೂ ಶ್ಲಾಘನೀಯ . 

Arpitha Rao 
Banbury 

United KIngdom 

ದೇವರ ನಾಡು ಪ್ರಕೃತಿಯ ಬೀಡು

ಕಳೆದ ಬಾರಿ ಯುನೈಟೆಡ್ ಕಿಂಗಡಮ್  ಇಂದ ಭಾರತಕ್ಕೆ ಭೇಟಿ ನೀಡಿದಾಗ ಹೊರದೇಶಗಳನ್ನೆಲ್ಲಾ ಆಗಾಗ ಸುತ್ತುವ ನಾವು ನಮ್ಮ ದೇಶದ ಅಲ್ಲೇ ಹತ್ತಿರದಲ್ಲೇ ಇರುವ ವಿದೇಶಿಗರೆಲ್ಲ ವರ್ಷಪೂರ್ತಿ ಬಂದು ನೋಡುವ ಮತ್ತು ಕೊಂಡಾಡುವ ಕೇರಳಕ್ಕೆ ಹೋಗಬೇಕು ಎಂದು ನಿರ್ಧರಿಸಿ ಅದರಂತೆ ಒಂದು ವಾರದ ಮಟ್ಟಿಗೆ ನಮ್ಮ ಕುಟುಂಬ ಕೇರಳಕ್ಕೆ ಪ್ರಯಾಣ ಬೆಳೆಸಿದ್ದೆವು. ಅದರ ಬಗ್ಗೆ ಹಂಚಿಕೊಳ್ಳದಿದ್ದಲ್ಲಿ ಏನೋ ಒಂದು ರೀತಿಯ ವಿಷಾದತೆ ಕೊನೆಯವರೆಗೂ ಉಳಿದುಬಿಡಬಹುದು ಎಂದು ಇಲ್ಲಿ ನಮ್ಮ ಕೇರಳದ ಪ್ರವಾಸದ ಬಗ್ಗೆ ಹಚ್ಚಿಕೊಳ್ಳಲು ಈ ಬರಹ.  ನಮ್ಮ ಪ್ರವಾಸ ಒಂದು ವಾರದ ಮಟ್ಟಿಗಾದ್ದರಿಂದ ಆದಷ್ಟು ಕೇರಳದ ಉತ್ತರ ಭಾಗದ ಪ್ರಸಿದ್ಧ ಸ್ಥಳಗಳನ್ನು ನೋಡಿ ಬರಬೇಕು ಎಂದು ಮೊದಲೇ ತಯಾರಿ ನಡೆಸಿದ್ದೆವು.
ಅದಕ್ಕಾಗಿ ಏನೆಲ್ಲಾ ಅವಶ್ಯಕತೆ ಇದೆ ಮತ್ತು ಜೊತೆಗೆ ಮೂರು ವರ್ಷದ ಮಗನೂ  ಇರುವುದರಿಂದ ಅವನ ಸಂತೋಷಕ್ಕಾಗಿ ಕೂಡ ಏನೆಲ್ಲಾ ಮಾಡಬಹದು ಎಲ್ಲೆಲ್ಲಾ ಸುತ್ತಬಹುದು ಹೀಗೆ ಎಲ್ಲಾ ರೀತಿಯ ಪಟ್ಟಿ ಬೆಳೆಯುತ್ತಲೇ ಹೋಗಿತ್ತು.








ಹಾಗೆ ನಾವು ಒಂದು ವಾರದಲ್ಲಿ ನೋಡಲು ನಿರ್ಧರಿಸಿದ್ದು ಕೊಚ್ಚಿ , ಎರ್ನಾಕುಲಂ ತಾಲೂಕಿನಲ್ಲಿರುವ ಅಲ್ಲೆಪ್ಪಿ , ಅಂಬಾಲಾಪುರ , ಕುಮಾರಕೋಮ್ ಜೊತೆಗೆ ಹಿಂತಿರುಗಿ  ಬರುವಾಗ ಮುನ್ನಾರ್ ಮೂಲಕ ಸೇಲಂ ತಲುಪಿ ಬೆಂಗಳೂರು ಸೇರಿಕೊಳ್ಳುವುದು. 
ಮೊದಲು ನಾವು ಹೊರಟಿದ್ದು ಬೆಂಗಳೂರಿನಿಂದ ಪಾಲಕ್ಕಾಡ್ ಹಾದು ಕೊಚ್ಚಿಯನ್ನು ತಲುಪುವುದು.  ಕಾರಿನಲ್ಲಿ ಸುಮಾರು ಏಳು ತಾಸಿನ ಪ್ರಯಾಣವಾದ್ದರಿಂದ ಬೆಳಗಿನ ಜಾವ ಐದು ಗಂಟೆಗೆಲ್ಲ ಮನೆಯಿಂದ ಹೊರಬಿದ್ದಿದ್ದೆವು.  ಹಾಗೆ ದಾರಿಯಲ್ಲಿ ಹೋಗುವಾಗ ಸಿಗುವ ಶಿವಳ್ಳಿಯಲ್ಲಿ ಬೆಳಗಿನ ರುಚಿಕರವಾದ ತಿಂಡಿಯನ್ನು ಸವಿದು ಪಾಲಕ್ಕಾಡ್ ಕೋಟೆ ತಲುಪುವಷ್ಟರಲ್ಲಿ ಮಟಮಟ ಮಧ್ಯಾನ್ಹ ಒಂದು ಗಂಟೆ . 
  ಪಾಲಕ್ಕಾಡ್ ಕೋಟೆ  
ಡಿಸೆಂಬರ್ ತಿಂಗಳಾದರೂ ಕೂಡ ಕೇರಳದಲ್ಲಿ ಸುಮಾರು ಮೂವತ್ತು ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ಧಗೆ. ಆದರೆ ಅಲ್ಲಿ ಹೋಗಿ ನೋಡಿದರೆ ಕೋಟೆಯ ಸುತ್ತಲೂ ನೀರು ಒಳಗೆ ಹಸಿರು ಜೊತೆಗೆ ಅಲ್ಲಲ್ಲಿ ಕುಳಿತುಕೊಳ್ಳಲು ನೆರಳು ನೀಡುವ ದೊಡ್ಡ ಆಲದ ಮರಗಳು ಪ್ರಯಾಣದ ಆಯಾಸವನ್ನೇ ಮರೆಸಿ ಹೊಸ ಸ್ಥಳವನ್ನು ನೋಡಬೇಕೆಂಬ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿತ್ತು. 
ಸುತ್ತಲೂ ನೀರಿನ ಕೊಳ  ಒಳಗೆ ಹೋದರೆ ಎಲ್ಲೆಡೆ ಹಸಿರು ಜೊತೆಗೆ ಈ ಕೋಟೆಯ ಪ್ರವೇಶ ದ್ವಾರದಲ್ಲಿ ಹನುಮಂತನ ದೇವಾಲಯ ಕೂಡ ಇರುವುದು ವಿಶೇಷ. ಪುರಾತನ ಕಾಲದಿಂದಲೂ ಇದ್ದ ಈ ಕೋಟೆ ಹೈದರಾಲಿಯ ಕಾಲದಲ್ಲಿ ಪುನರ್ನಿರ್ಮಾಣ ಪಡೆಯಿತು ಎನ್ನಲಾಗಿದೆ. ಈ ಕೋಟೆಯ ಒಳಭಾಗದಲ್ಲೇ ಮಕ್ಕಳ ಆಡುವ ಸ್ಥಳ ಮತ್ತು ಪಾರ್ಕ್  , ಕ್ರಿಕೆಟ್ ಮೈದಾನ ಮತ್ತು ರಪ್ಪಾಡಿ ಎಂದು ಕರೆಯಲ್ಪಡುವ ಆಡಿಟೋರಿಯಂ ಕೂಡ ಕಂಡುಬರುತ್ತದೆ. 

ಸುಮಾರು ಒಂದು ಗಂಟೆ ಸಮಯದಲ್ಲಿ ಕೋಟೆಯನ್ನು ನೋಡಿ ಅಲ್ಲಿಂದ ನಮ್ಮ ಪ್ರಯಾಣ ನಾವು ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಿದ್ದ ಹೋಮ್ ಸ್ಟೇ ಗೆ.  ಕೇರಳದ ಹೋಮ್ ಸ್ಟೇ ಒಂದು ವಿಶೇಷ ಅನುಭವ ಅಲ್ಲಿನ ರುಚಿರುಚಿಯಾದ ಖಾದ್ಯಗಳನ್ನು ತಿನ್ನಬೇಕೆಂದರೆ ಹೋಟೆಲ್ ಕ್ಕಿಂತ ಹೋಂ ಸ್ಟೇ ಒಳ್ಳೆಯದು ಜೊತೆಗೆ ಪ್ರಕೃತಿಯ ಮಡಿಲಲ್ಲೇ ಸಮಯ ಕಳೆಯಬಹುದಾದ್ದರಿಂದ ಮನಸ್ಸಿಗೂ ನೆಮ್ಮದಿ ನೀಡುತ್ತದೆ. ನಾವು ಎನ್ರಾಕುಲಂ ತಾಲೂಕಿನ ಕೊಚ್ಚಿ ಯಿಂದ ಸುಮಾರು ಅರ್ಧ ಗಂಟೆ ಪ್ರಯಾಣದಲ್ಲಿರುವ ಕಿತೋ ಸ್ ಹೋಂ ಸ್ಟೇ ನಲ್ಲಿ ಉಳಿದುಕೊಂಡಿದ್ದೆವು, ಒಂದು ಸಣ್ಣ ಕುಟುಂಬ ಉಳಿದುಕೊಳ್ಳಲು ಬೇಕಾಗುವ ಎಲ್ಲಾ ವ್ಯಯಸ್ಥೆಯನ್ನು ಒಂದೇ ಪ್ರತ್ಯೇಕ ಮನೆಯ ರೀತಿಯಲ್ಲಿ ಮಾಡಿಟ್ಟು ಇರುವಷ್ಟು ದಿನವೂ ಬೆಳಗಿನ ಉಪಹಾರ ಮತ್ತು ಊಟದ ವ್ಯವಸ್ಥೆ  ಮಾಡಲಾಗಿತ್ತು. ಆ ದಿನ ರಾತ್ರಿ ಕೇರಳ ಶೈಲಿಯ ಶುದ್ಧ ಸಸ್ಯಾಹಾರಿ ಊಟ ಸವಿದು ಮಲಗಿ ಬೆಳಗ್ಗೆ ಆರು ಗಂಟೆಗೆಲ್ಲ ಏಳುವಾಗ ಪ್ರಯಾಣದ ಸುಸ್ತು ಸ್ವಲ್ಪವೂ ಕಾಣಿಸಿಕೊಳ್ಳದಂತೆ ಮಾಯವಾಗಿತ್ತು. ಬೆಳಗ್ಗಿನ ತಿಂಡಿಗೆ ಕೇರಳದ ಶೈಲಿಯ ಕ್ಯಾರೆಟ್ ಪುಟ್ಟು , ಅದರ ರುಚಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಅಪ್ಪಟ ಮಲೆಯಾಳಿ ಮನೆಯಲ್ಲಿಯೇ ತಿಂದು ನೋಡಬೇಕು ಅಷ್ಟು ಅದ್ಬುತವಾದ ತಿಂಡಿ ಅದು .  ಅದೊಂದೇ ಅಲ್ಲ ಇದ್ದ ಒಂದು ವಾರವೆಲ್ಲ ತಾರಾನುವಾರಿ ಅಡುಗೆ ಕೊಡುತ್ತಿದ್ದರು ಅದರ ಬಗ್ಗೆ ಪ್ರತ್ಯೇಕವಾಗಿ ಒಂದು ಸರಣಿಯನ್ನೇ ಬರೆದುಬಿಡಬಹುದು ಅಷ್ಟು ಅದ್ಬುತ .
ನಂತರ ನಾವು ನಮ್ಮ ಪ್ರಯಾಣವನ್ನು ಆ ದಿನ  ತಯಾರಾಗಿ ಕುಮಾರಕೋಮ್ ನೋಡಲು ಹೊರಟೆವು.

 ಕುಮಾರಕೊಂ :
ಕೇರಳದ ಪ್ರವಾಸ ಕೈಗೊಳ್ಳುವವರಾರೂ ಕುಮಾರಕೋಮ್ ಅನ್ನು ತಪ್ಪಿಸುವುದೇ ಇಲ್ಲ.  ಅಷ್ಟು ಜಗತ್ಪ್ರಸಿದ್ದಿ ಪಡೆದ ಸ್ಥಳವಿದು. ಕೊಚ್ಚಿ ಯಿಂದ ಎರ್ನಾಕುಲಂ ತಲುಪುತ್ತಿದ್ದಂತೆ ಕೇರಳದ ಹಳ್ಳಿಯ ಸೊಗಡನ್ನು ನೋಡಲು ಪ್ರಾರಂಭಿಸಿದ್ದೆವಾದರೂ ಕುಮಾರಕೋಮ್ ಹೋಗಿ ತಲುಪಿದಾಗಲೇ ನಮಗೆ ಹಳ್ಳಿಯ ನಿಜವಾದ ಅಂದ ಗೋಚರಿಸಿದ್ದು,  ದಾರಿಯಲ್ಲಿ ಸಿಗುವ ಎಳನೀರು ಮತ್ತು ಕಬ್ಬಿನ ಹಾಲನ್ನು ಅಲ್ಲಲ್ಲಿ ಸವಿದು ಹೊರೆಟೆವಾದರೂ ಇನ್ನಷ್ಟು ತಂಪಿನ ಅವಶ್ಯಕತೆ ಇತ್ತು /ಡಿಸೆಂಬರ್ ತಿಂಗಳಾದರೂ ಕೂಡ ಕೇರಳದಲ್ಲಿ ಸುಮಾರು ಮೂವತ್ತು ಡಿಗ್ರಿ ಸೆಲ್ಸಿಯಸ್ ಅಷ್ಟು ಉಷ್ಣಾಂಶವಿತ್ತು, ಆದರೆ ಕುಮಾರ ಕೋಮ್ ಹಳ್ಳಿಯಲ್ಲಿರುವ ವೆಂಬನಾಡ್ ಲೇಕ್ ಗೆ ಪ್ರವೇಶಿಸುತ್ತಿದ್ದಂತೆ ತಂಪು ತಂಗಾಳಿ. 
ಇಲ್ಲಿನ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೋಡಿ ಆನಂದಿಸಲು ವಿದೇಶಿಗರೂ ಕೂಡ ಹಾತೊರೆಯುತ್ತಾರೆ.  ನಾವು ಹೋದ ಸಮಯದಲ್ಲಿ ಅಲ್ಲಿ ಕಂಡವರಲ್ಲಿ ಹೆಚ್ಚಿನವರೆಲ್ಲ ವಿದೇಶಿಗರೇ ಆಗಿದ್ದರು, ಸೆಪ್ಟೆಂಬರ್ ತಿಂಗಳಿನಲ್ಲಿ ಬಂದ ನೆರೆಯ ಹಾವಳಿಯಿಂದ  ಈಗಷ್ಟೇ ಚೇತರಿಸಿಕೊಳ್ಳುತ್ತಿರುವುದಾಗಿಯೂ ಪ್ರತಿ ವರ್ಷ ಡಿಸೆಂಬರ್ ಕ್ರಿಸ್ಮಸ್ ರಜಾ ದಿನಗಳಲ್ಲಿ ವಿದೇಶಿಗರು ದಂಡೆದ್ದು ಬಂದು ಹದಿನೈದು ದಿನ ಬೋಟ್ ಹೌಸಿಂಗ್ ನಲ್ಲಿ ಬೀಡು ಬಿಟ್ಟು ಎಂಜಾಯ್ ಮಾಡಿ ಹೋಗುತ್ತಿದ್ದರು ಆದರೆ ಈ ವರ್ಷ ಪ್ರತಿಭಾರಿಯಂತೆ ಪ್ರವಾಸಿಗರು ಇಲ್ಲದಿರುವುದು ಆರ್ಥಿಕವಾಗಿ ಸಾಕಷ್ಟು ಪೆಟ್ಟು ಎಂದು  ನಮ್ಮನ್ನು ಬೋಟಿಂಗ್ ಗೆ ಕರೆದುಕೊಂಡು ಹೋದ ಕೇರಳದ ನಾವಿಕ ಅವಲತ್ತುಕೊಂಡ . ಬೆಳಗಿನ ಸಮಯವಾದ್ದರಿಂದ ಸೂರ್ಯನ ಎಳೆ ಬಿಸಿಲು ಮೈಮೇಲೆ ಬೀಳುತ್ತಿತ್ತು , ಸುತ್ತಾಲೂ ಮೀನುಗಾರರ ಮನೆಗಳು , ಅದರಾಚೆಗೆ ಹಸಿರು ತುಂಬಿ ಕಂಗೊಳುಸವ ಗದ್ದೆ ಅಲ್ಲೇ ಸಾಕಷ್ಟು ತೆಂಗಿನ ಮರಗಳು , ದೋಣಿ ಮುಂದೆ ಮುಂದೆ ಸಾಗುತ್ತಿದ್ದಂತೆ ಇಂತಹ ವಿಸ್ಮಯ ಈ ಪ್ರಕೃತಿ ಎಂಬ ಅಚ್ಚರಿ ನಮ್ಮೆಲ್ಲರ ಕಣ್ಣಲ್ಲಿ. ನನ್ನ ಮೂರು ವರ್ಷದ ಮಗನಂತು ನಾವೆಲ್ಲಿ ಬಂದು ಬಿಟ್ಟಿದೇವೆ ಎಂದು ಕಣ್ಣು ಮುಚ್ಚದೇ ಎಡಬಿಡದೇ ನೋಡುತ್ತಿದ್ದ ಆಗಾಗ ಬರುವ ಬಾತುಕೋಳಿಗಳು ಮತ್ತು ಮೀನುಗಳು ಅವನಿಗೆ ಇನ್ನಷ್ಟು ಸಂತೋಷ ನೀಡುತ್ತಿತ್ತು. ಅವುಗಳನ್ನು ಎಣಿಸುವ ಪ್ರಯತ್ನ ಮಾಡಿ ಮಾಡಿ ಸೋಲುತ್ತಿದ್ದ. ಅವನ ಸಂತೋಷ ನೋಡಿ ನಮಗೂ ಭಾರತದಲ್ಲೇ ಇರುವ ಇಂತಹ ವಿಸ್ಮಯ ಲೋಕವನ್ನು ನೋಡಿದ್ದು ಸಾರ್ಥಕ ಎನಿಸುತ್ತಿತ್ತು. ವೆಂಬನಾಡ್ ಲೇಕ್ ನಲ್ಲಿ ಒಂದು ಸುತ್ತು ಹಾಕಿಕೊಂಡು ಮೊದಲಿರುವ ಸ್ಥಳಕ್ಕೆ ಬರಲು ನಾಲ್ಕು ಗಂಟೆ ಬೇಕಾಯಿತು ಮತ್ತು ಆ ನಾಲ್ಕು ಗಂಟೆ ಎಷ್ಟು ಅದ್ಬುತವಾಗಿತ್ತೆಂದರೆ ಪ್ರಕೃತಿಯ ಮಡಿಲಲ್ಲೇ ಇರುವ ಅಲ್ಲಿನ ಜನರು ಎಷ್ಟು ಅದೃಷ್ಟವಂತರು ಎಂದೆನಿಸಿತು. 
  ವೆಂಬನಾಡ್ ಬ್ಯಾಕ್ ವಾಟರ್ ನ ತಪ್ಪಲಿನಲ್ಲಿ ಪಕ್ಷಿಧಾಮವೂ ಇದ್ದು ಇಲ್ಲಿ ಬೇರೆಬೇರೆ ರೀತಿಯ ಹಕ್ಕಿಗಳು ಬರುತ್ತವೆ ಎನ್ನಲಾಗುತ್ತದೆ ಮತ್ತು ಇದು ಪಕ್ಷಿ ಪ್ರೇಮಿಗಳಿಗೊಂದು ಸದವಕಾಶ ಕೂಡ. ಕೊಟ್ಟಾಯಂ ಜಿಲ್ಲೆಗೆ ಸೇರಿರುವ ಈ ಪಕ್ಷಿಧಾಮದಲ್ಲಿ ಪ್ರತಿವರ್ಷ ಸಾವಿರಾರು ಹಕ್ಕಿಗಳು ವಲಸೆ ಬರುತ್ತವೆ ಎನ್ನಲಾಗುತ್ತದೆ.  

ಫೋರ್ಟ್ ಕೊಚ್ಚಿ :
ಅದಾಗಲೇ ಮೂರನೇ ದಿನವಾದ್ದರಿಂದ ಸ್ವಲ್ಪ ತಡವಾಗಿ ತಯಾರಾಗಿ ನಾವು ಹೊರಟಿದ್ದು ಕೊಚ್ಚಿ ಫೋರ್ಟ್ ಭಾಗಕ್ಕೆ.  ಇದು ಒಂದು ನಗರ ಹಿಂದಿನ ದಿನ ನೋಡಿದ ಸಂಪೂರ್ಣ ಪ್ರಕೃತಿಯ ಮಡಿಲಿನಲ್ಲಿರುವ ಹಳ್ಳಿಗಿಂತ ಇದು ಭಿನ್ನವಾಗಿದೆ.  ಅಲ್ಲೇ ಇರುವ ಮಟನ್ ಚರಿ ವಸ್ತು ಸಂಗ್ರಹಾಲಯ ಮತ್ತಿತರ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ಸುಂದರವಾದ ಹೋಟೆಲ್ ಒಂದರಲ್ಲಿ ಊಟ ಮಾಡಿ ದಿನವಿಡೀ ಅರಬ್ಬೀ ಸಮುದ್ರದ ಸೊಬಗನ್ನು ನೋಡಿದೆವು, ಹದಿನಾಲ್ಕನೇ ಶತಮಾನದಲ್ಲಿ ಚೀನಿಗರು ಇಲ್ಲಿ ಬಂದಾಗ ಇದು ಚೀನಾ ದೇಶದಂತೆ ಕಂಡು ಬಂದದ್ದರಿಂದ ಆ ಪ್ರದೇಶಕ್ಕೆ ಕೋ ಚಿನ್ ಎಂಬ ಹೆಸರನ್ನು ಇಡಲಾಗಿದೆ ಎಂದು ಇಲ್ಲಿನ ವಸ್ತು ಸಂಗ್ರಹಾಲಯದ ಹೊರಭಾಗದಲ್ಲಿ ತಿಳಿಸಲಾಗಿದೆ. ಹಾಗೆಯೇ ಈ ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಹೆಸರುವಾಸಿಯಾಗಿದ್ದು ಚೈನೀಸ್ ಫಿಶಿಂಗ್ ನೆಟ್ ಇಲ್ಲಿನ ಪ್ರವಾಸಿ ಪ್ರಸಿದ್ಧಿಗೆ ಕಾರಣವಾಗಿದೆ. 
ಫೋರ್ಟ್ ಕೊಚಿನ್ ಬ್ರಿಟೀಷ್ , ಡಚ್ ಮತ್ತು ಪೋರ್ಚುಗೀಸರು ಬಂದು ನೆಲೆಸಿದ್ದ ಪ್ರದೇಶವಾಗಿದ್ದರಿಂದ ಇಲ್ಲಿ ಇವರ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದು. ಅದಲ್ಲದೆ ಶಾಪಿಂಗ್ ಮಾಡಲು ಇದು ಉತ್ತಮ ಸ್ಥಳವಾದ್ದರಿಂದ ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿ ಕೇರಳ ಶೈಲಿಯ ಬಟ್ಟೆಗಳು ಮತ್ತಿತರ ನೆನಪಿನಲ್ಲಿಟ್ಟುಕೊಳ್ಳಬಹುದಾದ ವಸ್ತುಗಳನ್ನು ಕೊಳ್ಳುತ್ತಾರೆ. 

ಇಲ್ಲಿನ ಸುತ್ತಾಟ ಮತ್ತು ಶಾಪಿಂಗ್ ಮುಗಿಸಿ ನಾವು ಹೋಂ ಸ್ಟೇ ಕಡೆಗೆ ತೆರಳುವಾಗ ರಾತ್ರಿಯಾಗಿತ್ತು. ಅದು ಕ್ರಿಸ್ಮಸ್ ಸಮಯವಾದ್ದರಿಂದ ರಸ್ತೆ ಇಕ್ಕೆಲಗಳಲ್ಲಿ ಸಾಲಾಗಿ ಎಲ್ಲೆಡೆ ವಿವಿಧ ರೀತಿಯ ದೀಪಗಳಿಂದ ಅಲಂಕರಿಸಿದ್ದರು.  ಅದನ್ನು ಕಣ್ಣು ತುಂಬಿಸಿಕೊಳ್ಳುವದೇ ಒಂದು ಸಂತೋಷ. ಹಾಗೆಯೇ ಅಲ್ಲಲ್ಲಿ ಮಕ್ಕಳು ಸಂತಾ ಕ್ಲಾಸನಂತೆ ವೇಷ ಧರಿಸಿ ಮನೆ ಮನೆಗಳಿಗೆ ಹೋಗಿ ನೃತ್ಯ ಮಾಡಿ ಬರುವುದನ್ನು ನೋಡಿದೆವು.  ಇಡೀ ಕೊಚಿನ್ ನಗರ ಕ್ರಿಸ್ಮಸ್ ಸಮಯದಲ್ಲಿ ದೀಪಗಳಿಂದ ಜಗಮಗಿಸುತ್ತಿತ್ತು.  ಆ ಸಮಯದಲ್ಲೇ ಕೇರಳಕ್ಕೆ ಹೋದದ್ದು ನಮ್ಮ ಪ್ರವಾಸದ ಮೆರಗನ್ನು ಇನ್ನಷ್ಟು ಹೆಚ್ಚಿಸಿತು. 

  ಫೋಕ್ಲೋರ್ ಮ್ಯೂಸಿಯಂ  :
ನಮ್ಮ ನಾಲ್ಕನೆಯ ದಿನ ಮೊದಲು ನಾವು ಕೇರಳದ ಫೋಕ್ಲೋರ್ ಮ್ಯೂಸಿಯಂ (ಕೇರಳ ಜಾನಪದ ವಸ್ತುಸಂಗ್ರಹಾಲಯ) ಕ್ಕೆ ಹೋದೆವು.  ಸುಮಾರು ಒಂದು ಗಂಟೆ ಕಳೆಯಬಹುದಾದ ಸ್ಥಳ. ಕೇರಳದ ಜಾನಪದ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಏಕೆ ಪ್ರಪಂಚದಾದ್ಯಂತ ಹೆಸರಿದೆ. ಕೇರಳದ ಸಂಸ್ಕೃತಿಯನ್ನು ವಿಸದೇಶಿಗರು ಕೂಡ ಮೆಚ್ಚಿ ಹೊಗಳುತ್ತಾರೆ. ಎರ್ನಾಕುಲಂ ನಿಂದ ಸ್ವಲ್ಪ ಹೊರಭಾಗದಲ್ಲಿ ಕೊಚ್ಚಿ ಗೆ ತಾಗಿಕೊಂಡಂತೆ ಇರುವ ಈ ವಸ್ತು ಸಂಗ್ರಹಾಲಯದಲ್ಲಿ ಸಾವಿರ ವರ್ಷಗಳ ಹಿಂದಿನಿಂದ ಬಳಸಲಾದ ಕೇರಳ ಮತ್ತು ಕರ್ನಾಟಕದ ಇಂದು ಮರೆಯಾಲಾಗುತ್ತಿರುವ ಕೆಲವು ವಿಶೇಷ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. 

ಕೇರಳದ ವಾಸ್ತುಶಿಲ್ಪಗಳು ಕಲ್ಲು ಮತ್ತು ಮರದ ಕಲಾಕೃತಿಗಳು, ನಶಿಸಿ ಹೋಗುತ್ತಿರುವ ಕೆಲವು ಸಂಸ್ಕೃತಿಯನ್ನು ಬಿಂಬಿಸುವ ವಸ್ತುಗಳು, ಕಲಾಚಿತ್ರಗಳು, ಆಭರಣ ಮತ್ತು ಮರದ ಪಾತ್ರೆಗಳು ಹೀಗೆ ವಿಭಿನ್ನ ರೀತಿಯ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಸಂಗ್ರಹಿಸಿ ಇಟ್ಟಿರುವುದು ವಿಶೇಷ.  ಸಂಶೋಧಕರು , ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯ ಸಂಸ್ಕೃತಿಯ ಬಗ್ಗೆ ಒಲವಿರುವ ಪ್ರವಾಸಿಗರು ಖಂಡಿತ ಇಲ್ಲಿ ಭೇಟಿ ನೀಡಲೇ ಬೇಕು. 

ಮ್ಯೂಸಿಯಂ ಅನ್ನು ಮುಗಿಸಿ ಅಲ್ಲೇ ಹತ್ತಿರದಲ್ಲಿರುವ ಸಂಪ್ರದಾಯ ಶೈಲಿಯ ಹೋಟೆಲ್ ಒಂದರಲ್ಲಿ ಬಾಳೆ ಎಲೆಯ ಊಟ ಮಾಡಿ ನಂತರ ನಾವು ಬೀಚ್  ಕಡೆಗೆ ಹೊರಟೆವು. ಸಮುದ್ರದ ತಟದಲ್ಲೇ ಇರುವ ಕೇರಳಕ್ಕೆ ಹೋಗಿ ಬೀಚಿಗೆ ಹೋಗದಿದ್ದರೆ ಆದೀತೆ ? ಇಡೀ ಎರನಾಕುಲಮ್ ತಾಲೂಕಿನಲ್ಲಿ ಸಾಕಷ್ಟು ಬೀಚುಗಳಿವೆ ಆದರೆ ಸ್ವಲ್ಪ ಜನಸಂದಣಿ ಇಲ್ಲದ ಬೀಚ್ ಗೆ ಭೇಟಿ ನೀಡಿದರೆ ಸ್ವಚ್ಛವಾಗಿಯೂ ಇರುತ್ತದೆ ಮತ್ತು ಮನಬಂದಂತೆ ಸಮಯ ಕಳೆಯಬಹುದು , ಹಾಗಾಗಿಯೇ ನಾವು ನಮ್ಮ ಹೋಮ್ ಸ್ಟೇ ಗೆ ಸಮೀಪವಿದ್ದ ಕುಂಬಲಂಗಿ ಬೀಚ್ ಗೆ ಹೋದೆವು. ನಮ್ಮ ಮೂರು ವರ್ಷದ ಮಗನಿಗೆ ಅದೇ ಮೊದಲ ಬಾರಿ ಬೀಚ್ ನೋಡಿದ್ದರಿಂದ ಅಲ್ಲಿನ ಸೂರ್ಯಾಸ್ತವನ್ನು ನೋಡಿ ಸಂತೋಷಕ್ಕೆ ಎಲ್ಲೆ ಇಲ್ಲದಂತೆ ಆಡುತ್ತಿದ್ದ. ನಮ್ಮ ಜೀವನದ ಮರೆಯಲಾರದ ದಿನಕ್ಕೆ ಮತ್ತೊಂದು ಪುಟ ಸೇರಿಕೊಂಡಿತ್ತು. 
ಅಲೆಪ್ಪಿ ಅಥವಾ ಅಲಪುರ  :
ಕೇರಳ ಪ್ರವಾಸಿಗರ ಪ್ರಾಮುಖ ಸ್ಥಳ ಅಲೆಪ್ಪಿ, ಪ್ರವಾಸಿಗರ ದಂಡು ಯಾವಾಗಲೂ ನೆರೆಯುವ ಬ್ಯುಸಿ ಸ್ಥಳವಿದು. ಅಲ್ಲೆಪ್ಪಿ ಬ್ಯಾಕ್ ವಾಟರ್ ಮತ್ತು ಬೋಟ್ ಸ್ಟೇ ಗೆ ಹೆಸರುವಾಸಿ. ಬೇಕಿದ್ದಲ್ಲಿ ಇಡೀ ರಾತ್ರಿ ಬೋಟ್ ನಲ್ಲೇ ಉಳಿದುಕೊಂಡು ಪ್ರಕೃತಿಯ ಸೊಗಡನ್ನು ಅನುಭವಿಸುವ ಅವಕಾಶವಿಲ್ಲಿದೆ.  ಅದಲ್ಲದೆ ಗಂಟೆ ಗೆ ನಿಗಧಿಪಡಿಸಿದ ದರ ಪಾವತಿಸಿ ಕೂಡ ಬೋಟ್ ನಲ್ಲಿ ಸಮಯ ಕಳೆಯಬಹುದು,  ಇಲ್ಲಿ ಶಿಖಾರ ಬೋಟ್ ಬಹಳ ಬೇಡಿಕೆಯಲ್ಲಿರುತ್ತದೆ.  ನಾವು ಸುಮಾರು ನಾಲ್ಕು ಗಂಟೆಗಳ ಕಾಲ ಶಿಖಾರ ಬೋಟ್ ನಲ್ಲಿ ಪ್ರಯಾಣ ಮಾಡಿ ಹಸಿರು , ಹಕ್ಕಿಗಳ ಚಿಲಿಪಿಲಿ, ತೆಂಗಿನ ಮರಗಳ ಸಾಲು , ಕಣ್ಣು ಕೋರೈಸುವ ಗದ್ದೆ , ಇವುಗಳ ಮಧ್ಯದಲ್ಲೇ ಇರುವ ಮೀನುಗಾರರ ಮನೆ ಅಲ್ಲಲ್ಲಿ ಎದುರಲ್ಲೇ ಮೀನು ಬೇಯಿಸಿಕೊಡುವ ವರ್ತಕರು, ಸೂರ್ಯನ ಹಳದಿ , ಕೆಂಪು ಕಿರಣಗಳು , ಬಾತು ಕೋಳಿ ಗಳು ಮತ್ತು ಆಗಾಗ ಬಂದು ಹೋಗುವ ಮೀನುಗಳು , ವಿದೇಶಿ ಪ್ರವಾಸಿಗರು , ಮಗನ ಮುಗಿಯದ ಪ್ರಶ್ನೆಗಳು ಹೇಗೆ ನಾಲ್ಕು ಗಂಟೆಯಲ್ಲಿ ಮರೆಯಲಾಗದ ಅನುಭವ ಪಡೆದೆವು. 
ಅಲಪ್ಪಿಯ ಸಮೀಪದಲ್ಲಿರುವ ಪುನ್ನಮಾಡ ಕೆರೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಬೋಟ್ ರೇಸ್ ಪ್ರಸಿದ್ಧಿ ಪಡೆದಿದೆ. 

ಕೇರಳದ ಸಂಸ್ಕೃತಿಯನ್ನು ನೋಡಬೇಕೆಂದರೆ ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಲೇ ಬೇಕು ಆದ್ದರಿಂದ ನಾವು ಅಲೆಪ್ಪಿಯಿಂದ ಅಂಬಲಾಪುರದ ಶ್ರೀ ಕೃಷ್ಣ ದೇವಾಲಯಕ್ಕೆ ಹೋದೆವು , ಇಲ್ಲಿನ ಕೃಷ್ಣ ಮಠದ ಹಾಲು ಪಾಯಸ ಜನ ಮೆಚ್ಚುಗೆ ಪಡೆದಿದ್ದು ಇದನ್ನು ಪಡೆಯಲು ನೂರಾರು ಜನರು ಸರತಿಯಲ್ಲಿ ನಿಂತು ಕಾಯುತ್ತಾರೆ. ದೇವಸ್ಥಾನದ ಹೊರಭಾಗದಲ್ಲಿ ಆನೆ ಕೂಡ ಇದೆ ಜೊತೆಗೆ ಕೊಳ. ಉಡುಪಿಯ ಶ್ರೀ ಕೃಷ್ಣ ಮಠ ಕ್ಕೆ ಸ್ವಲ್ಪ ಹೋಲಿಕೆಯಲ್ಲಿರುವ ಹಂಚಿನ ಮನೆ ಮತ್ತು ಮರದಿಂದ ಮಾಡಿದ ಕೇರಳ ಮಾದರಿಯ ದೇವಸ್ಥಾನ ಇದಾಗಿದ್ದು ಸಾವಿರಾರು ಭಕ್ತರು ಪ್ರತಿದಿನ ಇಲ್ಲಿ ಬಂದು ಭಕ್ತಿ ಸಲ್ಲಿಸಿ ಹೋಗುತ್ತಾರೆ. 
ಸಂಜೆ ನಾವು ನಮ್ಮ ಹೋಂ ಸ್ಟೇ ಗೆ ಹಿಂತಿರುಗುವಾಗ ರಸ್ತೆಯ ಬದಿಯಲ್ಲಿಯೇ ಇರುವ ಮುಳ್ಳಕ್ಕಲ್ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದೆವು. ನಗಾರಿ , ಚಂಡೆ ಗಳ ವಾಧ್ಯಗಳಿಂದ ಜೊತೆಗೆ ಹೆಂಗಳೆಯರ ಭಜನೆಗಳಿಂದ ದೇವಸ್ಥಾನದ ಪೂಜೆಗೊಂದು ವಿಶೇಷ ಕಳೆ ಬಂದಿತ್ತು. ಕೇರಳದ ದೇವಸ್ಥಾನದಲ್ಲಿ ನಡೆಯುವ ಪೂಜೆಯನ್ನು ನೋಡಿದರೆ ಮೈ ರೋಮಾಂಚಗೊಳ್ಳುತ್ತದೆ. ಇಡೀ ದೇವಸ್ಥಾನವನ್ನು ಹೂವು ಮತ್ತು ಹಣತೆಯಲ್ಲಿ ಹಚ್ಚಿದ ಎಣ್ಣೆಯ ದೀಪದಿಂದ ಕೇರಳ ಶೈಲಿಯಲ್ಲಿ ಅಲಂಕರಿಸಿದ್ದರು.  ಸುಮಾರು ಒಂದು ಗಂಟೆ ನಡೆದ ಪೂಜೆಗೆ ನೂರಾರು ಜನರು ಆಗಮಿಸಿದ್ದರು. ಕೇರಳದ ಕ್ರಿಸ್ಮಸ್ ಅಲಂಕಾರವನ್ನು ನೋಡಿದ ನಮಗೆ ಹಿಂದೂಗಳ ದೇವಾಲಯದ ಅಲಂಕಾರ ಮತ್ತು ಪೂಜೆ ಕೂಡ ನೋಡುವ ಅವಕಾಶ ಸಿಕ್ಕಿದ್ದು ಸಂತೋಷವನ್ನು ನೀಡಿತ್ತು.  ಕೇರಳಕ್ಕೆ ಹೋದ ಪ್ರತಿಯೊಬ್ಬ ಪ್ರವಾಸಿಗನೂ ಕೂಡ ಇಲ್ಲಿಯ ದೇವಾಲಯಗಳಲ್ಲಿ ನಡೆಯುವ ಸಂಸ್ಕೃತಿಯ ಶೀಮಂತಿಕೆಯನ್ನು ಎತ್ತಿ ಸಾರುವ ಪೂಜೆಯನ್ನು, ಅಲಂಕಾರವನ್ನು ನೋಡಲೇಬೇಕು. 

ಎಡಪಳ್ಳಿ ಚರ್ಚ್ :

ಸೈನ್ಟ್ ಜಾರ್ಜ್ ಚರ್ಚ್ ಏಷ್ಯಾದ ಮೊದಲ ಸ್ಥಾನದಲ್ಲಿರುವ ಅತಿ ದೊಡ್ಡ ಚರ್ಚ್ ಆಗಿದ್ದು ಇದು ಎಡಪಳ್ಳಿ  ಚರ್ಚ್ ಎಂದೇ ಪ್ರಸಿದ್ಧವಾಗಿದೆ. ಈ ಚರ್ಚಿಗೆ ಹದಿನಾಲ್ಕನೇ ಶತಮಾನದ ಇತಿಹಾಸವಿದ್ದು ಇಂದು ಇದು ಅತಿ ಹೆಚ್ಚು ಪ್ರವಾಸಿಗರನ್ನು ಹೊಂದಿದ ಕ್ರೈಸ್ತ ಯಾತ್ರಾ ಸ್ಥಳವಾಗಿದೆ.  ಎಡಪಲ್ಲಿಯಲ್ಲಿ  ಎರಡು ವಿಶೇಷವಾದ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಿವೆ ಅದರಲ್ಲಿ ಎಡಪಳ್ಳಿ  ಚರ್ಚ್ ಒಂದಾದರೆ ಇನ್ನೊಂದು ಲುಲು ಇಂಟರ್ನ್ಯಾಷನಲ್ ಮಾಲ್ .  ಲುಲು ಮಾಲ್ ಭಾರತದ ಅತಿ ದೊಡ್ಡ ಮಾಲ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ.  ಇಲ್ಲಿ ಬರುವ ಪ್ರವಾಸಿಗರು ಈ ಮಾಲ್ ನಲ್ಲಿ ಶಾಪಿಂಗ್ ಮಾಡದೆ ಹಿಂತಿರುಗುವುದೇ ಇಲ್ಲ.  ಕೇರಳಕ್ಕೆ ಹೋದವರು ಈ ಚರ್ಚ್ ಮತ್ತು ಮಾಲ್ ಇವೆರಡನ್ನೂ ಭೇಟಿ ನೀಡಲೇಬೇಕು. ಲುಲು ಮಾಲ್ ನಿಂದ ಈ ಚರ್ಚ್  ಕಾರಿನಲ್ಲಿ ಕೇವಲ ಐದು ನಿಮಿಷ.  ನಾವು ಬೆಳಗ್ಗಿನಿಂದ ಶಾಪಿಂಗ್ , ಊಟ ಎಲ್ಲವನ್ನೂ ಮುಗಿಸಿ ಎಡಪಳ್ಳಿ ಚರ್ಚ್ ಗೆ ಹೋದಾಗ ಮುಸ್ಸಂಜೆ ಹೊತ್ತು. ಆ ದಿನ ಡಿಸೆಂಬರ್ ೨೪ , ಮಾರನೆಯ ದಿನವೇ ಕ್ರಿಸ್ಮಸ್ . ಸಂಜೆಯಾಗುತ್ತಿದ್ದಂತೆ ಜಗ ಬೆಳಗುವಷ್ಟು ಡೀಪದ ಅಲಂಕಾರ ಒಮ್ಮೆಲೇ ಹೊತ್ತಿಕೊಂಡಿತು. ಅದನ್ನು ನೋಡಲು ಕಣ್ಣುಗಳೆರಡೂ ಸಾಲದು , ನಿಮಿಷಕ್ಕೊಂದು ಬಣ್ಣಕ್ಕೆ ಬದ ಲಾಗುತ್ತಿದ್ದ  ಲೈಟಿಂಗ್ಸ್ ನ ಅಲಂಕಾರವನ್ನು ಇಂಗ್ಲೆಂಡ್ ನಲ್ಲಿ  ಕಳೆದ ಏಳು ವರ್ಷವಿದ್ದರೂ ಎಲ್ಲೂ ಕಂಡಿರಲಿಲ್ಲ. ಸಾವಿರಾರು ಜನರು ಆ ದಿನ ಚರ್ಚಿನಲ್ಲಿ ಬಂದು ಪೂಜೆ ನಡೆಸಿಕೊಂಡು ಹೋಗುತ್ತಿದ್ದರು.  ಪ್ರತಿ ವರ್ಷ ಇಲ್ಲಿ ಕ್ರಿಸ್ಮಸ್ ದಿನಂದ ಹಿಂದಿನ ದಿನ ಪಾದ್ರಿಗಳ ಪ್ರವಚನವಿರುತ್ತದೆ.  ಆ ಪ್ರವಚನದ ಸರಿಯಾದ ಸಮಯಕ್ಕೆ ನಾವು ಚರ್ಚ್ ನ ಒಳಭಾಗಕ್ಕೆ ಹೋದೆವು . ಪ್ರವಚನ ಮಲೆಯಾಳಿ ಭಾಷೆಯಾದ್ದರಿಂದ ಏನೂ ಅರ್ಥವಾಗದಿದ್ದರೂ ಚರ್ಚಿನಲ್ಲೊಂದು ಗಾಂಭೀರ್ಯತೆ, ಭಕ್ತಿ, ಶಾಂತ ವಾತಾವರಣವಿತ್ತು. ಅಲ್ಲಿ ಕುಳಿತಷ್ಟು ಸಮಯ ಮನಸ್ಸಿಗೆ ನೆಮ್ಮದಿ ಇಲ್ಲಿ ಬಂದದ್ದು ಸಾರ್ಥಕ ಎನ್ನಿಸುವಷ್ಟು ಆನಂದವಾಗಿತ್ತು. ಅದೆಲ್ಲಕ್ಕಿಂತ ಡಿಸೆಂಬರ್ ನ ಕ್ರಿಸ್ಮಸ್ ಸಮಯದಲ್ಲಿ ಕೇರಳಕ್ಕೆ ಬರುವ ನಮ್ಮ ಯೋಜನೆ ಸರಿಯಾಗಿತ್ತು ಇಲ್ಲದಿದ್ದಲ್ಲಿ ಇವೆಲ್ಲವನ್ನೂ ನೋಡಲಾಗುತ್ತಿರಲಿಲ್ಲ ಎನಿಸಿತು. 
ಆ ದಿನ ಹೋಂ ಸ್ಟೇ ಯಲ್ಲಿ ಕೊನೆಯ ದಿನ ಮರುದಿನ ನಾವು ಮುನ್ನಾರ್ ಮಾರ್ಗವಾಗಿ ಬೆಂಗಳೂರಿಗೆ ತೆರಳುವವರಿದ್ದೆವು ಆದ್ದರಿಂದ ಬೇಗ ತಲುಪಿ ವಿಶ್ರಮಿಸಿದೆವು. ಮರುದಿನ ಬೆಳಗ್ಗೆ ನಾಲ್ಕು ಗಂಟೆಗೆಲ್ಲ ಮುನ್ನಾರ್ ಗೆ ಹೋರಾಟ ನಮಗೆ ಕಣ್ಣಮಾಳಿ ಸುತ್ತಮುತ್ತಲಿರುವ ಬೆಳಗಿನ ಚುಮುಚುಮು ಚಳಿಯಲ್ಲಿಯ ಪ್ರಕೃತಿಯ ಅದ್ಭುತವನ್ನು ನೋಡುವ ಅವಕಾಶ ಸಿಕ್ಕಿತ್ತು. ಕೇರಳದ ಬಹುತೇಕ ಭಾಗಗಳಲ್ಲಿ ರಸ್ತೆಯ ಅಕ್ಕ ಪಕ್ಕ ಸಂಪೂರ್ಣ ನೀರಿನಿಂದ ತುಂಬಿದ್ದು ಮಧ್ಯ ರಸ್ತೆ ಇದೆ. ಇಕ್ಕೆಲಗಳಲ್ಲಿ ರಸ್ತೆಯ ಮಟ್ಟಕ್ಕೆ ಬರುವ ನೀರು ಜೊತೆಗೆ ತೆಂಗಿನ ಮರಗಳು , ಮೀನುಗಾರರು ಹಾಸಿರುವ ಮೀನಿನ ಬಲೆ . 

ಬೆಳಗಿನ  ಎಲೆ ಬಿಸಿಲು , ಸೂರ್ಯನ ಕಿರಣಗಳು , ಹಕ್ಕಿರಗಳ ಕಲರವ ಬಹಳ ಪ್ರಶಾಂತವಾತಾವರಣ ಅದಾಗಿತ್ತು. ಕೊಚ್ಚಿಯಿಂದ ಮುನ್ನಾರ್ ಅನ್ನು ತಲುಪಲು ಕನಿಷ್ಠ ನಾಲ್ಕರಿಂದ ಐದು ಗಂಟೆಗಳು ಬೇಕು. ದಾರಿ ಮಧ್ಯದಲ್ಲಿ ಅತಿರಪಲ್ಲಿ ವಾಟರ್ ಫಾಲ್ಸ್ , ಚೀಯಪ್ಪರ ಜಲಪಾತ , ವಾಲಾರ ಜಲಪಾತವನ್ನು ನೋಡಿದೆವು , ಇವೆಲ್ಲ ರಸ್ತೆ ಬದಿಯ ಜಲಪಾತಗಳಾದ್ದರಿಂದ ಎಲ್ಲ ಕಡೆಗಳಲ್ಲಿಯೂ ಕಾರಿನಿಂದ ಇಳಿಯಲೇ ಬೇಕು ಎನ್ನುವುದಿರಲಿಲ್ಲ ಕುಳಿತಲ್ಲಿಯೇ ನೋಡಬಹುದಾದ ಜಲಪಾತಗಳು.  ಸುಮಾರು ಹನ್ನೆರಡು ಗಂಟೆಗೆಲ್ಲ ಮುನ್ನಾರ್ ತಲುಪಿ ಹೋಟೆಲ್ ಒಂದರಲ್ಲಿ ಮದ್ಯಾನ್ಹದ ಊಟ ಮಾಡಿ ಎರವಿಕುಲಂ ನ್ಯಾಷನಲ್ ಪಾರ್ಕ್  ತಲುಪಿದೆವು ಸಂಪೂರ್ಣ ಹಚ್ಚ ಹಸಿರು ಬಣ್ಣದ ಟೀ ಪ್ಲಾಂಟೇಷನ್ ಗಳು ಕಣ್ಣು ಕೋರೈಸುತ್ತಿತ್ತು . ಸುಂದರವಾದ ಭಾವಚಿತ್ರ ತೆಗೆಸಿಕೊಳ್ಳಲು  ಇದು ಸರಿಯಾದ ಸ್ಥಳ. ಸ್ವಲ್ಪ ಚಳಿ ಇರುತ್ತದಾದ್ದರಿಂದ ಸ್ವೇಟರ್ ಅಥವಾ ಬೆಚ್ಚಗಿನ ಶಾಲನ್ನು  ಹೋಗುವುದು ಉತ್ತಮ. ಮುನ್ನಾರ್ ಟೀ ಪ್ಲಾಂಟೇಷನ್ ಆದ್ದರಿಂದ ಕಾರಿನಲ್ಲಿ ಪ್ರಯಾಣಿಸುವಾಗ ಮುನ್ನಾರಿನಿಂದ ಬಂಡೀಪುರ  ಅಲ್ಲಿಂದ ಅಣ್ಣ ಮುಡಿ  ಮಾರ್ಗವಾಗಿ ಮರುದಿನ ಬೆಳಗ್ಗಿನ ಜಾವ ಐದು ಗಂಟೆಗೆ ಬೆಂಗಳೂರನ್ನು ತಲುಪಿದೆವು. 

ಒಂದು ವಾರದ ಪ್ರವಾಸ ಮುಗಿಸಿ ಮನೆ ತಲುಪಿದಾಗ ಕೇರಳವನ್ನು ದೇವರ ನಾಡು ಎಂದು ಕರೆಯುವುದರಲ್ಲಿ ಅತಿಶಯೋಕ್ತಿ ಇಲ್ಲ ಎಂಬ ಭಾವನೆ. ಅದೆಷ್ಟು ಸುಂದರ ಮತ್ತು ವಿಸ್ಮಯವಾದ ಪ್ರಕೃತಿ ನಮ್ಮ ದೇಶದಲ್ಲಿ ಹೇರಳವಾಗಿದೆ ಎಂಬುದಕ್ಕೆ ಹೆಮ್ಮೆ. ಇಂಗ್ಲೆಂಡ್ ಗೆ ಹಿಂತಿರುಗಿದ ನಂತರವೂ ಆಫೀಸಿನಲ್ಲಿ ವಿದೇಶಿಗರಿಗೆ ಭಾರತದ ಕೇರಳಕ್ಕೆ ಒಮ್ಮೆ ಭೇಟಿ ನೀಡಿ ಎಂದು ಹೆಮ್ಮೆಯಿಂದ ಸಲಹೆ ಕೊಡುತ್ತಿರುತ್ತೇನೆ.
Arpitha Rao
Banbury 
United kingdom 
x