Tuesday 28 July 2020

ಕರ್ನಾಟಕದಲ್ಲಿ ನಾಗರಪಂಚಮಿ

Published in Omanase Magazine http://www.omanase.com/nagara-panchami-festival/



ಕೋವಿಡ್ ನಿಂದಾಗಿ ಇಂದು ಎಲ್ಲವೂ ಡಿಜಿಟಲ್ ಮಾಯವಾಗಿದೆ.ಮನೆಯಿಂದ ಹೊರಗೆ ಹೋಗುವಂತಿಲ್ಲ ಇನ್ನು ವಿದೇಶದಲ್ಲಿರುವವರು ಕೇವಲ ಫೋನ್ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುವುದು ಮೊದಲಿನಿಂದಲೂ ಅನಿವಾರ್ಯವಾದರೆ ಈಗ ಭಾರತದ ಎಲ್ಲೆಡೆಗಳಲ್ಲಿ ಕೇವಲ ಫೋನ್ ಅನಿವಾರ್ಯವಾಗಿದೆ .ಹಾಗೆ ಅಮ್ಮನಿಗೆ ಫೋನ್ ಮಾಡಿದಾಗ ಶನಿವಾರ ನಾಗಪಂಚಮಿ ಹಬ್ಬ ಎನ್ನುವುದು ತಿಳಿಯಿತು .ನಾಗರಪಂಚಮಿ ಎಂದರೆ ಹಬ್ಬದ ಹಳೆಯ ನೆನಪುಗಳು. ಚಿಕ್ಕವರಿರುವಾಗ ಹಬ್ಬಗಳೆಂದರೆ ಮನೆಯಲ್ಲಿ ಸಡಗರ ಸಂಭ್ರಮ. ವಿದೇಶಗಳಲ್ಲಿ ದೀಪಾವಳಿ ಇನ್ನಿತರ ಹಬ್ಬವನ್ನು ಆಚರಿಸಿದರೂ ನಾಗರ ಪಂಚಮಿ ಆಚರಿಸುವುದು ಕನಸೇ ಸರಿ.

ಕರ್ನಾಟಕದಲ್ಲಿ ನಾಗರಪಂಚಮಿ ಎಂದರೆ ವಿಶೇಷ .ಅದರಲ್ಲೂ  ಹೆಣ್ಣು ಮಕ್ಕಳೆಲ್ಲ ಸೇರಿ ಹೊಸ ಬಟ್ಟೆ ಹಾಕಿ,ಹೂವು ಮುಡಿದು,ಅಲಂಕಾರ ಮಾಡಿಕೊಂಡು ತಟ್ಟೆಯಲ್ಲಿ ಹಾಲು, ನೀರು ,ಅರಿಶಿನ ಎಲ್ಲವನ್ನು ಹಿಡಿದುಕೊಂಡು ನಾಗಪ್ಪನಿಗೆ ತಣಿ ಎರೆಯಲು ನಾಗರಕಲ್ಲಿಗೆ ಹೋಗುವುದು ಸಾಮಾನ್ಯವಾಗಿ  ಮಲೆನಾಡಿನ ಭಾಗಗಳಲ್ಲಿ ನಾಗಪಂಚಮಿ ದಿನಗಳಲ್ಲಿ ಕಾಣುವ  ದೃಶ್ಯ.
ಮಲೆನಾಡು ಭಾಗಗಳಲ್ಲಿ ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬ ಎಂದೇ ಪರಿಗಣಿಸುತ್ತಾರೆ.ಹೆಣ್ಣು ಮಕ್ಕಳು ಅಲಂಕಾರ ಮಾಡಿಕೊಂಡು ನಾಗರ ಕಲ್ಲಿಗೆ ತಣಿ ಹಾಲು ಎರೆದು  ಪೂಜಿಸುವುದು ಇದರ ವಿಶೇಷತೆ.ನಾಗರ ಪಂಚಮಿ ಹಬ್ಬದಂದು ನಾಗಪ್ಪ ಅಥವಾ ನಾಗರ ಕಲ್ಲುಗಳನ್ನು ಹೆಚ್ಚಾಗಿ ಅರಿಶಿನ ಬಳಿದು, ಹಾಲು ಎರೆದು, ಹೂವಿನ ಹಾರ ಏರಿಸಿ ಪೂಜಿಸುವುದು ರೂಡಿ .ಕೆಲ ಭಾಗಗಳಲ್ಲಿ ಪ್ರತಿ ಹಳ್ಳಿಗೆ ಒಂದು ಅಥವಾ ಕೆಲವೊಮ್ಮೆ ಮನೆಯ ಹಿಂಬಾಗಗಳಲ್ಲಿ,ತೋಟಗಳಲ್ಲಿ ಹೀಗೆ ನಾಗರ ಕಲ್ಲು ಅಥವಾ ಹುತ್ತಗಳು ಸಾಮಾನ್ಯವಾಗಿ ಇರುವುದು ವಿಶೇಷ .ಇನ್ನು ಹಬ್ಬ ಎಂದರೆ ಪೂಜೆಯ ಸಂಭ್ರಮದ ಜೊತೆಗೆ ವಿವಿಧ ಅಡುಗೆಗಳನ್ನು ತಯಾರಿಸುವುದು,ಸಿಹಿ ಖಾದ್ಯಗಳನ್ನು ಮಾಡುವುದು ಭಾರತದ ಎಲ್ಲೆಡೆಗಳಲ್ಲಿ ವಿಶೇಷವಾಗಿ ನಡೆಯುವುದು ಸರ್ವೇ  ಸಾಮಾನ್ಯ .ನಾಗರ ಪಂಚಮಿ ಎಂದರೆ ನಾಗಪ್ಪನಿಗೆ ಪ್ರಿಯವಾದ ಚಪ್ಪೆ ದೋಸೆ ಮತ್ತು ಎಳ್ಳು,ಅರಳು,ಶೇಂಗಾ ಹೀಗೆ ವಿವಿಧ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ.ಮಲೆನಾಡಿನ ಇನ್ನು ಕೆಲವು ಭಾಗಗಳಲ್ಲಿ ನಾಗರ ಪಂಚಮಿ ಹಬ್ಬದ ದಿನದಂದು ಅರಿಶಿನದ ಎಲೆಗಳಲ್ಲಿ ಸುತ್ತಿ ಕಡುಬು ಮಾಡಲಾಗುತ್ತದೆ.


ಅದರ ಜೊತೆಗೆ ನಾಗರ ಪಂಚಮಿ ಹಬ್ಬಕ್ಕೆ ಹೆಣ್ಣು ಮಕ್ಕಳು ತಮ್ಮ ತವರಿಗೆ ಹೋಗುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ನಾಗರ ಪಂಚಮಿ ಹಬ್ಬ ಹತ್ತಿರ ಬರುತ್ತಿದ್ದಂತೆ ಅಣ್ಣ ಅಥವಾ ತಮ್ಮಂದಿರು ಹೋಗಿ ತಮ್ಮ ಸಹೋದರಿಯನ್ನು ಮನೆಗೆ ಬರಲು ಆಹ್ವಾನಿಸುವುದು ಮೊದಲಿನಿಂದ ನಡೆದುಕೊಂಡು ಬಂದಿದೆ. ಆದ್ದರಿಂದಲೇ ಇದನ್ನು ಹೆಣ್ಣು ಮಕ್ಕಳ ಹಬ್ಬ ಎನ್ನಲಾಗುತ್ತದೆ .


ಈ ಬಾರಿ ಕೋವಿಡ್ ನಿಂದಾಗಿ ಎಲ್ಲೆಡೆಗಳಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ.  ಆದಷ್ಟು ಬೇಗ ಕರೋನ ಹಾವಳಿ ಕಡಿಮೆಯಾದಲ್ಲಿ ಮುಂಬರುವ ಹಬ್ಬವನ್ನು ಮೊದಲಿನಂತೆ ಆಚರಿಸಬಹುದು ಎಂಬುದೊಂದೇ ಆಶಯ. 

Arpitha Rao
Banbury
United kingdom 

Sunday 12 July 2020

ಕೊರೋನಾ ಲೊಕ್ಡೌನ್ ನಂತರದ ಇಂಗ್ಲೆಂಡ್

Published in OManase Magazine http://www.omanase.com/?p=4052





ನೆಗಡಿ ,ವಿಪರೀತ ಸುಸ್ತು , ಜ್ವರ, ಏದುಸಿರು ತುಂಬಿದ ಸತತ ಕೆಮ್ಮು ಹೀಗೊಂದಿಷ್ಟು ಲಕ್ಷಣಗಳೊಂದಿಗೆ ಕೊರೊನ ಎಂಬ ಹೊಸದಾದ ವೈರಸ್ ಬಂದು ಅರ್ಧದಷ್ಟು ಜನರ ಜೀವವನ್ನೇ ತೆಗೆಯುತ್ತದೆ ಎಂದು ಪ್ರಪಂಚಕ್ಕೆ ತಿಳಿಯುವಷ್ಟರಲ್ಲಿ ಅದೆಷ್ಟೋ ಜನ ಆಗಲೇ ಸತ್ತಾಗಿತ್ತು . ಸ್ವಲ್ಪ ತಡವಾಗಿ ಇದು ಯು , ಕೆ ಗೆ ಬಂದರೂ ಕೂಡ ಇಂಗ್ಲೆಂಡ್ ಜನರಿಗೆ ತಿಳಿದು  ಇದಾಗಲೇ ನಾಲ್ಕು  ತಿಂಗಳುಗಳೇ ಕಳೆದುಹೋಯಿತು . ಫೆಬ್ರವರಿಯ ಕೊನೆಯಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭವಾದ ಈ ವೈರಸ್ ವುಹಾನ್ ಎಂಬಲ್ಲಿ ಸೃಷ್ಟಿಯಾಗಿ ಅದಾಗಲೇ ೩ ತಿಂಗಳ ಮೇಲಾಗಿತ್ತು .ತಕ್ಷಣಕ್ಕೆ ಏನು ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲದ ಸರ್ಕಾರ ಕೊನೆಗೆ ಲಾಕ್ ಡೌನ್ ಮಾಡುವ ವೇಳೆಗಾಗಲೇ ವೈರಸ್ ಹರಡುವಿಕೆ ವ್ಯಾಪಕವಾಗಿ ಯುಕೆ ಯಲ್ಲಿ ಇದರ ಸಂಖ್ಯೆ ಐವತ್ತು ಸಾವಿರವಾಗಿತ್ತು. ಲಕ್ಷವನ್ನು ದಾಟಿ ಸರಿಸುಮಾರು ಮೂರೂವರೆ  ಲಕ್ಷ ಜನರಿಗೆ ಕೊರೋನಾ ಪಾಸಿಟಿವ್ ಬಂದು ಆಸ್ಪತ್ರೆ ಸೇರಿದರೆ ಅದೆಷ್ಟೋ ಮಂದಿ  ಮನೆಮದ್ದಿನಲ್ಲಿಯೇ ಕಡಿಮೆ ಮಾಡಿಕೊಂಡವರೂ ಇದ್ದಾರೆ.ಅಂತವರ ಸಂಖ್ಯೆ ಯಾರಿಗೂ ಲೆಕ್ಕಕ್ಕೇ ಸಿಗಲಿಲ್ಲ .ಇಂತದ್ದೊಂದು ವೈರಸ್ ಬಂದು ಅತಿವೇಗವಾಗಿ ನಡೆಯುತ್ತಿದ್ದ ಪ್ರಪಂಚವನ್ನು ನಿಲ್ಲಿಸಿ ವ್ಯಾಪಕವಾಗಿ ಹರಡಿ ಸುಮಾರು ಆರು ತಿಂಗಳಲ್ಲಿ ಐದು ಲಕ್ಷದಷ್ಟು ಜನರನ್ನು ಸಾಯಿಸಿದೆ ಮತ್ತು ಇನ್ನೂ ಹರಡುತ್ತಲೇ ,ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂಬುದು ನಿಜಕ್ಕೂ ಭಯ ಹುಟ್ಟಿಸುವಂತದ್ದು . ಇದಕ್ಕೆ ಎಂದು ಕೊನೆ ಎಂಬುದಕ್ಕೆ ಬಹುಶಃ ಯಾರಲ್ಲೂ ಇನ್ನೂ ಉತ್ತರವಿಲ್ಲ . ಯುಕೆ ಯಲ್ಲಿ ಆರಂಭದಲ್ಲಿ ಸಣ್ಣ ಪ್ರಮಾಣದ ಕೋವಿಡ್ ಲಕ್ಷಣಗಳಿದ್ದಲ್ಲಿ ಮನೆಯಲ್ಲಿಯೇ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರ ಬರಕೂಡದು ಎಂಬುದನ್ನು ಸರ್ಕಾರವೇ ನಿರ್ಧರಿಸಿ ಜನರಿಗೆ ತಿಳಿಹೇಳಿತ್ತು. ಹಾಗಾಗಿಯೇ ಸಾಕಷ್ಟು ಜನರಿಗೆ ಕಾಣಿಸಿಕೊಂಡ ಸಣ್ಣ ಪ್ರಮಾಣದ ಕೊರೋನಾವನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡುವುದರ ಮೂಲಕ ಕೆಲವು ಮಂದಿ ಗುಣಮುಖರಾಗಿದ್ದಾರೆ.ನಂತರದ ದಿನಗಳಲ್ಲಿ ಟೆಸ್ಟ್ ಮಾಡುವ ಸಂಖ್ಯೆ ಮತ್ತು ವೆಂಟಿಲೇಟರ್ ಎಲ್ಲವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಪ್ರಯತ್ನವನ್ನು ಸರ್ಕಾರ ಮತ್ತು ಇಲ್ಲಿ ನ್ಯಾಷನಲ್ ಹೆಲ್ತ್ ಸರ್ವಿಸ್ ಗಳು ಮಾಡಿವೆ. ಎಂಟು ವಾರಗಳವರೆಗೆ ಲಾಕ್ ಡೌನ್ ಜಾರಿಗೆ ತಂದು ಅಗತ್ಯವಿದ್ದರೆ ಮಾತ್ರ ಹೊರಬರಬೇಕು ಎಂದು ಸರ್ಕಾರ ಜಾರಿ ತಂದ ವಿಷಯ ಈಗ ಹಳೆಯದು.

ಈಗಾಗಲೇ ಇಂಗ್ಲೆಂಡ್ ನಲ್ಲಿ ಪ್ರಾಥಮಿಕ ಶಾಲೆಗಳನ್ನು  ಅಂದರೆ ನರ್ಸರಿ , ರೆಸೆಪ್ ಷನ್ ಮತ್ತು ಒಂದು ,ಆರನೇ ತರಗತಿಯನ್ನು ತೆರೆದಿದ್ದು  ಮಕ್ಕಳು ಆಗಲೇ ಆರನೇ ವಾರವನ್ನು ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಮುಗಿಸುತ್ತಿದ್ದಾರೆ .ಆದರೆ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗಬೇಕು ಎಂಬುದನ್ನು ಕಡ್ಡಾಯಗೊಳಿಸದೆ ಪೋಷಕರ ಆಯ್ಕೆಗೆ ಬಿಟ್ಟಿದ್ದಾರೆ . ಇನ್ನೊಂದು ವಾರವನ್ನು ಮುಗಿಸಿದರೆ ಜುಲೈ ಇಪ್ಪತ್ತರಿಂದ  ಆಗಸ್ಟ್ ಕೊನೆಯವರೆಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳಿಗೆ ಮಧ್ಯದಲ್ಲಿ ಬಿಡುವು ಕೂಡ ಸಿಗುತ್ತದೆ. ಈ ಸಮಯದಲ್ಲಿ ಶಾಲೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಹೊಸದಾಗಿ ತಯಾರಿ ನಡೆಸಿ  ಸೆಪ್ಟೆಂಬರ್ ನಿಂದ ಎಲ್ಲಾ ತರಗತಿಗಳನ್ನು ತೆರೆದು ಮೊದಲಿನಂತೆ ಶಾಲೆಗಳನ್ನು ನಡೆಸುವ ಎಲ್ಲಾ ಪ್ರಯತ್ನ ನಡೆಯುತ್ತಿದೆ ಮತ್ತು ಶಾಲೆಗೆ  ಪ್ರತಿಯೊಬ್ಬ ವಿದ್ಯಾರ್ಥಿ ಹಾಜರಿರುವುದು ಖಡ್ಡಾಯ ಒಂದು ವೇಳೆ ಹಾಜರಾಗದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡಲೇಬೇಕು ಎಂದು ಸರ್ಕಾರ ನಿರ್ಧರಿಸಿದೆ. 

ಇನ್ನು ಕೋವಿಡ್ ಪಾಸಿಟಿವ್ ಸಂಖ್ಯೆ ಸಾಕಷ್ಟು ಕಡಿಮೆಯಾಗಿದ್ದು ದಿನಕ್ಕೆ ಸಾವಿರದ ಆಸುಪಾಸು ಮತ್ತು ಸಾವಿನ ಸಂಖ್ಯೆ ಕೂಡ  ಹೆಚ್ಚು ಕಡಿಮೆ ನೂರರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇನ್ನೂ ದಿನದಿಂದ ದಿನಕ್ಕೆ ಸುಧಾರಿಸುತ್ತಿರುವುದು ಜೊತೆಗೆ ಆಕ್ಸ್ಫರ್ಡ್ ವಿಶ್ವವಿಧ್ಯಾಲಯ ವ್ಯಾಕ್ಸಿನೇಷನ್ ಪ್ರಯೋಗ ಪ್ರಾರಂಭಿಸುವ ಯೋಜನೆಯಲ್ಲಿರುವುದು ಒಂದು ರೀತಿ ಜನರಲ್ಲಿ ಭರವಸೆಯನ್ನು ತಂದಿದೆ.

ಮನೆಯಿಂದ ಕೆಲಸ ಮಾಡಲು ಅವಕಾಶವಿಲ್ಲದ ಎಲ್ಲಾ ಕಂಪನಿಗಳು ಕೂಡ ಮೊದಲಿನಂತೆ ಕೆಲಸಕ್ಕೆ ಸಜ್ಜಾಗಿವೆ . ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಾಕಷ್ಟು ಜನರು ಕೆಲಸಕ್ಕೆ ಹಿಂದಿರುಗಿದ್ದಾರೆ. ಹಾಗೆಯೇ ಜುಲೈ ನಾಲ್ಕರಿಂದ ಪಬ್ , ಮಾಲ್ ಮತ್ತು ಹೇರ್ ಸಲೂನ್ ,ಬ್ಯೂಟಿ ಪಾರ್ಲರ್ ಮತ್ತು ಥೀಮ್ ಪಾರ್ಕ್,ರೆಸ್ಟೋರೆಂಟ್  ಗಳನ್ನೂ ಯುನೈಟೆಡ್ ಕಿಂಗ್ಡಮ್ ನ ಎಲ್ಲೆಡೆಗಳಲ್ಲಿ ತೆರೆಯಲಾಗಿದೆ. ಪಬ್ ಗಳಲ್ಲಿ ಮೊದಲಿನಂತೆ ಜನ ದಟ್ಟಣೆ ಇಲ್ಲದಿದ್ದರೂ ಕೂಡ ಸಾಕಷ್ಟು ಜನರು ಈಗಾಗಲೇ ಮೊದಲಿನಂತೆ ಪಬ್ ಗಳಿಗೆ ಪುನರಾರಂಭಿಸಿದ್ದಾರೆ. ಅಲ್ಲಿಯೂ ಕೂಡ ಕ್ಯೂನಲ್ಲಿ ನಿಂತು ತೆಗೆದುಕೊಳ್ಳುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಒದಗಿಸುವುದು ಜೊತೆಗೆ ಗ್ರಾಹಕರ ಸಂಪೂರ್ಣ ವಿಳಾಸವನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ. ಅವಶ್ಯಕತೆ ಬಂದರೆ ಅಂದರೆ ಯಾವುದಾದರೂ  ಪಾಸಿಟಿವ್  ಕೇಸ್ ಬಂದಲ್ಲಿ ಟ್ರೇಸ್ ಮಾಡಲು ಅನುಕೂಲವಾಗಲು ಈ ವಿಧಾನವನ್ನು ಕಡ್ಡಾಯ ಮಾಡಲಾಗಿದೆ. ಇನ್ನು ಥೀಮ್ ಪಾರ್ಕ್ ಗಳಲ್ಲಿ ಪ್ರತಿ ರೈಡ್ ನಲ್ಲಿ ಕೇವಲ ಒಂದು ಕುಟುಂಬದವರು ಅಥವಾ ಒಂದು ಎರಡು ಜನರನ್ನು ಮಾತ್ರ ಕೂರಿಸಲಾಗುತ್ತಿದೆ . ಪ್ರತಿಭಾರಿ ರೈಡ್ ಮುಗಿಯುತ್ತಿದ್ದಂತೆ ಅಗತ್ಯಕ್ಕೆ ತಕ್ಕಂತೆ ಸೀಟ್ ಗಳನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಿಯೇ ಮುಂದಿನ ಆಟ , ಜೊತೆಗೆ ಪ್ರತಿಯೊಬ್ಬರೂ ಮಾಸ್ಕ ಧರಿಸುವುದು ಕಡ್ಡಾಯ ಮಾಡಲಾಗಿದೆ .ಸಾರ್ವಜನಿಕ ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸುವವರು ಕೂಡ ಮಾಸ್ಕ ಧರಿಸುವುದು ಮತ್ತು ತಮ್ಮ ಕಾಳಜಿಯಲ್ಲಿ ತಾವಿರುವುದು ಕಡ್ಡಾಯ . ಹೀಗೆ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಂಡ ನಂತರ ಜನಜೀವನ ಸಂಪೂರ್ಣ ಅಲ್ಲದಿದ್ದರೂ ಕೂಡ ಶೇಖಡಾ 8೦ ರಷ್ಟು ಮೊದಲಿನಂತೆಯೇ ನಡೆಯುತ್ತಿದೆ.ಸಾವಿನ ಸಂಖ್ಯೆ ಮತ್ತು ಪಾಸಿಟಿವ್ ನ ಸಂಖ್ಯೆ ಬಹಳಷ್ಟು ಇಳಿಮುಖವಾಗಿರುವುದರಿಂದ ಜನರೂ ಕೂಡ ನಾಲ್ಕು ತಿಂಗಳ ನಂತರ ಹೊರಹೊರಟಿದ್ದಾರೆ. ಹಾಗಾಗಿ ಪಾರ್ಕ್ ಗಳಲ್ಲಿ , ಸಲೂನ್ , ಸೂಪರ್ ಮಾರ್ಕೆಟ್ ಹೀಗೆ ಎಲ್ಲೆಡೆ ಜನರನ್ನು ಕಾಣಬಹುದು .ಹೊರಗೆ ಹೋಗುವ ಅನಿವಾರ್ಯತೆ ಇಲ್ಲದವರು ಆದಷ್ಟು ಮನೆಯಲ್ಲಿಯೇ ಇರಬೇಕಾಗಿ ಕೂಡ ಕೇಳಿಕೊಳ್ಳಲಾಗಿದೆ.

ಅರ್ಪಿತಾ ರಾವ್
ಬ್ಯಾನ್ಬರಿ
ಯುನೈಟೆಡ್ ಕಿಂಗ್ಡಮ್