Wednesday 27 November 2019

ಜ್ಞಾನದ ದೀಪ

ದೀಪ ಹಚ್ಚಬೇಕು
ಕೇವಲ ಬೆಳಕು ಹರಡಲಲ್ಲ
ಕತ್ತಲ ಮೂಲೆಯಲ್ಲಿ ಕುಳಿತು ಅವಿತಿರುವ ನಿನ್ನ
 ಮನದ ಭಯವ ಹೊಡೆದೋಡಿಸಲು

ದೀಪ ಹಚ್ಚಬೇಕು
ಕೇವಲ ಅಜ್ಞಾನ ಹೋಗಲಾಡಿಸಲಲ್ಲ
ಜ್ಞಾನದ ದಾಹವನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಲು

ದೀಪ ಹಚ್ಚಬೇಕು
ಕೇವಲ ಹಬ್ಬ ಆಚರಿಸಲಲ್ಲ
ಮನಸ್ಸಿನ ಖೇದವನ್ನು ತೊರೆದು ಹೊಸತನವನ್ನು ಪಡೆಯಲು

ದೀಪ ಹಚ್ಚಿ ಬೆಳಕು ಹರಿಸಿ
ಮನದ ಆಸೆ ನೀಗಿಸಲು , ಹೊಸತನವ ಪಡೆಯಲು .
ಹಣತೆಗೊಂದು ಹಣತೆ ತಾಗಿ ಸಣ್ಣ ಬೆಳಕು ದೊಡ್ಡದಾಗಿ
ಮನೆಯ ಮಿನುಗಿ  ಮನವ ಬೆಳಗಿ ಹರಿದು ಹರಿದು ಹೊಮ್ಮಿ ಚೆಲ್ಲಿ
ನವೋಲ್ಲಾಸ ನೀಡಲು , ದೀಪ ಬೆಳಗಬೇಕು ಜ್ಯೋತಿ  ಹರಡಬೇಕು . 

Arpitha Rao
Banbury 

ನಂದಿ ಬೆಟ್ಟ ಮತ್ತು ಭೋಗ ನಂದೀಶ್ವರ ದೇವಸ್ಥಾನ.


Published in Vijayakarnataka
ಮಳೆಗಾಲ ಎಂದರೆ ಕರ್ನಾಟಕದ ಎಲ್ಲೆಡೆ ಹಸಿರು  ತುಂಬಿದ ವಾತಾವರಣ . ಪುಟ್ಟ ಮಕ್ಕಳು ಮನೆಯಲ್ಲಿದ್ದರಂತೂ  ಅವಕ್ಕೆ  ಸ್ವಲ್ಪ  ಹೊತ್ತು ಮಳೆಯಲ್ಲಿ ಆಡುವ ತವಕ . ಹಾಗೆಯೇ  ವೀಕೆಂಡ್ ಬಂತೆಂದರೆ ಎಲ್ಲಾದರೂ ಸುತ್ತಾಡುವ ಮಳೆಯಲ್ಲಿ ಹೊರಹೋಗಿ  ಟ್ರಿಪ್ ಜೊತೆಗೆ ಬಿಸಿಬಿಸಿ ಮಸಾಲಾ ದೋಸೆ ಟೀ ಸವಿಯುವ ಮನಸ್ಸು ಎಲ್ಲರಲ್ಲೂ ಇರುತ್ತದೆ . ಬೇಸಿಗೆಯ ಬಿಸಿಲಿಗೆ ಸೋತು ಮನೆಯಲ್ಲಿರುವವರು ಮಳೆಗಾಲ ಬಂತೆಂದರೆ ಎಲ್ಲಾದರೂ ಸಣ್ಣ ಟ್ರಿಪ್ ಗೆ ಹೋಗುವ ಪ್ಲಾನ್ ಮಾಡಬಹುದು .  ಹಾಗೆಯೇ ಬೆಂಗಳೂರಿಗೆ ಹತ್ತಿರ ಸಾಕಷ್ಟು ಡ್ಯಾಮ್ , ಟ್ರೆಕಿಂಗ್ , ಜಲಪಾತ ತಾಣಗಳಿವೆ .  ಈ ಭಾರಿ ನಾವು ನಮ್ಮ ಪುಟಾಣಿ ಮಗನನ್ನು ಸುತ್ತಿಸಿದ್ದು ನಂದಿ ಬೆಟ್ಟ ಮತ್ತು  ಭೋಗ ನಂದೀಶ್ವರ ದೇವಸ್ಥಾನ. 


ನಂದಿ ಹಿಲ್ಸ್ ಎಂದಾಕ್ಷಣ ನೆನಪಿಗೆ ಬರುವುದು ಇಲ್ಲಿನ ಮುಂಜಾನೆಯ ಸೂರ್ಯೋದಯ .  ಈ ಸೂರ್ಯೋದಯವನ್ನು ನೋಡಲೆಂದೇ ಸಾಕಷ್ಟು ಬೈಕ್ ರೈಡರ್ಸ್ ಮತ್ತು ಟ್ರೆಕಿಂಗ್ ಆಸಕ್ತರು ಬೆಳಗಿನ ಮುಂಜಾನೆ ೫ ಗಂಟೆಗೆಲ್ಲ  ನಂದಿ ಬೆಟ್ಟದ ವ್ಯೂ ಪಾಯಿಂಟ್ ನಲ್ಲಿ ಹೋಗಿ ಕಾಯುತ್ತಾರೆ . ನಂದಿ ದುರ್ಗಾ , ನಂದಿ ಬೆಟ್ಟ ಎಂದೆಲ್ಲ ಕರೆಯಲ್ಪಡುವ ಈ ಹಿಲ್ಸ್ ಬೆಂಗಳೂರು ನಗರದಿಂದ ಸುಮಾರು ೬೫ ಕಿ ಮೀ ಅಂತರದಲ್ಲಿದೆ .  ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರುವ ನಂದಿ ದುರ್ಗಾ ಸಮುದ್ರ ಮಟ್ಟದಿಂದ ೪೮೫೦  ಅಡಿ ಎತ್ತರದಲ್ಲಿದೆ .  ಹಿಂದಿನ ಕಾಲದಲ್ಲಿ ಇದನ್ನು ಆನಂದ ಬೆಟ್ಟ ಎಂದು ಕೂಡ ಕರೆಯುತ್ತಿದ್ದರಂತೆ , ಹೆಸರಿಗೆ ತಕ್ಕಂತೆ ಮುಂಜಾನೆ ಸೂರ್ಯೋದಯದ ವಿಹಂಗಮ ನೋಟ ಸವಿಯಲು ಹೋದವರಿಗೆ ಆನಂದವಾಗುವುದು ಖಂಡಿತ . 
ನಂದಿ ಗ್ರಾಮದಲ್ಲಿರುವ ಈ ನಂದಿ ಬೆಟ್ಟಕ್ಕೆ ಈ ಹೆಸರು ಬರಲು ಬೇರೆಬೇರೆ ಕಾರಣಗಳನ್ನು ಹೇಳಲಾಗುತ್ತದೆ . ದೂರದಿಂದ ನೋಡಿದರೆ ಇದು ನಂದಿಯಂತೆ ಕಾಣುವುದರಿಂದ ಈ ಹೆಸರು ಬಂತು ಎಂದು ಕೂಡ ಹೇಳುತ್ತಾರೆ .  ಅರ್ಕಾವತಿ ನದಿ ಕೂಡ ಇಲ್ಲೇ ಹುಟ್ಟುವುದರಿಂದ ಈ ಬೆಟ್ಟದಲ್ಲಿರುವವ ಅಮೃತ ಸರೋವರ ಎಂಬ ಜಾಗವನ್ನು ನೋಡಲೇಬೇಕು . ಇನ್ನು ರಾಮಕೃಷ್ಣ ಗುರೂಜಿ ಕೂಡ ಇಲ್ಲೇ ಧ್ಯಾನವನ್ನು ಮಾಡುತ್ತಿದ್ದರು ಎನ್ನಲು ಬ್ರಹ್ಮಾಶ್ರಮ ಎಂಬ ಗುಡಿ ಕೂಡ ಇಲ್ಲಿದೆ . ಪಲಾರ್ ನದಿಯ ಮೂಲ ಇಲ್ಲೇ ಆಗಿರುವುದರಿಂದ ಸಣ್ಣದೊಂದು ಕೊಳವನ್ನು ಕೂಡ ನೋಡಬಹುದು . ಇದೆಲ್ಲದಕ್ಕಿಂತ ಮುಖ್ಯವಾಗಿ ಟಿಪ್ಪು ಡ್ರಾಪ್ ಪ್ರವಾಸಿಗರ ಆಕರ್ಷಕ ಜಾಗವಾಗಿದೆ.  ಟಿಪ್ಪು ತನ್ನ ಆಳ್ವಿಕೆಯ ಕಾಲದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷಿಸಲು ಈ ಸ್ಥಳದಿಂದಲೇ ಕೆಳಗೆ ನೂಕುತಿದ್ದ ಎನ್ನಲಾಗುತ್ತದೆ .  ಹಾಗೆಯೇ ಟಿಪ್ಪು ಯುದ್ಧಕಾಲದಲ್ಲಿ ವಿಶ್ರಾಂತಿಗೋಸ್ಕರ ತಂಗುತ್ತಿದ್ದ ತಾಣ ಬೇಸಿಗೆ  ಮನೆಯನ್ನು  ಕೂಡ ಇಲ್ಲಿ ಹೊರಗಿನಿಂದ ನೋಡಬಹುದು. 



ವಿನಾಯಕ , ಯೋಗಾನಂದೀಶ್ವರ ಹೀಗೆ ಬೇರೆಬೇರೆ ದೇವರ ಗುಡಿಗಳನ್ನು ಹೊಂದಿರುವ ನಂದಿ ಬೆಟ್ಟದ ಕಲ್ಲು ಬಂಡೆಗಳನ್ನು ಹತ್ತಿ ಹೋಗುವುದು ಚಿಕ್ಕ ಮಕ್ಕಳಿಗಂತೂ  ಖುಷಿಯ ವಿಚಾರ . ಜೊತೆಗೆ ಮಕ್ಕಳ ಆಟಕ್ಕೋಸ್ಕರ ಜಾರುಬಂಡಿ , ಉಯ್ಯಾಲೆಗಳನ್ನೂ ಪ್ರವಾಸೋದ್ಯಮ ಒದಗಿಸಿದೆ .  ಮಳೆಗಾಲವಾದ್ದರಿಂದ ಶೂ ಹಾಕಿಕೊಂಡು ಹೋಗುವುದು   ಉತ್ತಮ .  

 ಬೆಂಗಳೂರಿನಿಂದ ಒಂದು ದಿನದ ವೀಕೆಂಡ್ ಪ್ರವಾಸಕ್ಕೆ ಸೂಕ್ತವಾಗಿರುವ ಈ ಸ್ಥಳ ದಿಂದ ೨೦ ನಿಮಿಷ ಡ್ರೈವ್ ಮಾಡಿದರೆ ಇನ್ನೊಂದು ಸುಂದರ ಸ್ಥಳವಿದೆ . ಅದೇ ಭೋಗ ನಂದೀಶ್ವರ ದೇವಸ್ಥಾನ.  ನಂದಿ ಗ್ರಾಮದಲ್ಲಿರುವ ಈ ಹಿಂದೂ ದೇವಾಲಯ ಶಿವನ ದೇವಾಲಯವಾಗಿದ್ದು ಒಂಬತ್ತನೇ ಶತಮಾನದಲ್ಲಿ ಬಾಣ ರಾಣಿ ರತ್ನಾವಳಿ ಕಟ್ಟಲು ಪ್ರಾರಂಭವಾದ ಈ ದೇವಾಲಯ ವಿಜಯನಗರ ರಾಜರ ಕಾಲದವರೆಗೂ ಕಟ್ಟಲಾಯಿತು  ಎನ್ನಲಾಗುತ್ತದೆ . ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯ ನಂತರದ ಕಾಲದಲ್ಲಿ  ಟಿಪ್ಪುವಿನ ಹಿಡಿತದಲ್ಲಿತ್ತು ಎನ್ನಲಾಯಾಗುತ್ತದೆ . ಪಾರ್ವತಿ ಗುಡಿ , ವಸಂತ ಮಂಟಪ , ಮದುವೆಯ ಮಂಟಪ ಹೀಗೆ ವಿವಿಧ ಕೆತ್ತನೆಗಳು ಹೊಯ್ಸಳರ ಕಾಲದಲ್ಲಿ ಮಾಡಲಾಗಿದೆ ಎನ್ನಲಾಗುತ್ತದೆ. ಕಂಬಗಳ ಮೇಲೆ ವಿವಿದ ರೀತಿಯ ಸಣ್ಣ ಕೆತ್ತನೆಗಳನ್ನು ಕಾಣಬಹುದು .  ದೇವಾಲಯದ ಬಲಭಾಗದಲ್ಲಿರುವ ಪುಷ್ಕರಣಿ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಜಾಗವಾಗಿದ್ದು , ಈ ಕಲ್ಯಾಣಿ ಸಾವಿರ ವರ್ಷಗಳ ಹಿಂದಿನದ್ದು ಎಂಬುದು ವಿಶೇಷ .ಶಿವರಾತ್ರಿ ಸಮಯದಲ್ಲಿ ವಿಶೇಷ ಪೂಜೆ ಇರುವುದರಿಂದ ಸಾಕಷ್ಟು ಭಕ್ತಾದಿಗಳು ಸೇರುತ್ತಾರೆ ಎನ್ನಲಾಗುತ್ತದೆ .  ದಟ್ಟ ಕಾನನದ ನಡುವೆ ಇರುವ ದೊಡ್ಡ ದೇಗುಲದಂತೆ ಕಾಣುವ ಈ ದೇವಾಲಯ ,  ಬೆಂಗಳೂರಿನ ಕಾಂಕ್ರೀಟ್ ನಗರದಿಂದ ಹೆಚ್ಚು ದೂರವಿಲ್ಲದ ಈ ಸುತ್ತಮುತ್ತಲ ಪ್ರದೇಶ  ಇನ್ನೂ  ಹಸಿರಿನಿಂದ  ತುಂಬಿರುವುದು ಇನ್ನಷ್ಟು ತೃಪ್ತಿ ನೀಡುತ್ತದೆ .  

 ಮಳೆಗಾಲವಾದ್ದರಿಂದ ಸ್ವಲ್ಪ  ಬೆಚ್ಚಗಿನ ಸ್ವೇಟರ್  ಕಾಲಿಗೆ ಶೂ , ಜೊತೆಗೆ ಛತ್ರಿ ತೆಗೆದುಕೊಂಡು ಹೋಗುವುದು ಮರೆಯಬೇಡಿ .  ನಂದಿ ಬೆಟ್ಟದಲ್ಲಿ ಮಂಗಗಳ ಹಾವಳಿ ಇರುವುದರಿಂದ ತಿನ್ನುವ ವಸ್ತುವನ್ನು ಕೈಯಲ್ಲಿ ಹಿಡಿದು ಹೋಗಬೇಡಿ.  

ನಂದಿ ಬೆಟ್ಟದ ಪ್ರಕೃತಿಯ ಹಸಿರನ್ನು ಸವಿಯಲು ತೆರಳುವ ಪ್ರವಾಸಿಗರು ಭೋಗ ನಂದೀಶ್ವರ ದೇವಾಲಯವನ್ನು ಮರೆಯದೆ ನೋಡಿ ಬನ್ನಿ . ಇಂತಹ ಅದ್ಭುತವಾದ ದೇವಾಲಯ ಬೆಂಗಳೂರಿನ   ತಪ್ಪಲಲ್ಲೇ ಇರುವುದು ನೋಡಿ  ಬೆರಗಾಗಿ  .

ಯೇರ್ಕಾಡ್

ಅಗಲವಾದ ಗುದ್ದುಗಳಿಲ್ಲದ ರಸ್ತೆ , ಅಕ್ಕಪಕ್ಕಗಳಲ್ಲಿ ದಟ್ಟವಾದ ಕಾಡು , ಸಣ್ಣಗೆ  ಆಗೊಮ್ಮೆ ಈಗೊಮ್ಮೆ ಎಂಬಂತೆ ಜಿನುಗುವ ಮಳೆ , ಈಗಷ್ಟೇ ಮಳೆಯಿಂದ ತಂಪಾದ ಇಳೆ , ಒಂಥರಾ  ಚುಮು ಚುಮು ಚಳಿ , ಸಣ್ಣಗೆ ನಮ್ಮ ಕಣ್ಣೆದುರೇ ಹೊಗೆಯಾಡುವ ಇಬ್ಬನಿ . ಅದಕ್ಕೆ ಸಾಥ್ ಕೊಡಲು ಕಾರಿನಲ್ಲಿ ಮನಸ್ಸಿಗೆ ಹಿತವೆನಿಸುವ ಸಂಗೀತ ಇಷ್ಟಿದ್ದರೆ ಸ್ವರ್ಗ ಎಂದೆನಿಸದೇ ಇರುತ್ತದೆಯೇ ?  
ಇಂತದ್ದೊಂದು ಸುಂದರ ಅನುಭವ ನಮಗೆ ದೊರೆತಿದ್ದು ಯೇರ್ಕಾಡ್ ಪ್ರವಾಸಕ್ಕೆ ಹೋದಾಗ .  ಬೆಂಗಳೂರಿನಿಂದ ಕೇವಲ 250 ಕಿ ಮೀ ಅಂತರದಲ್ಲಿರುವ ತಮಿಳುನಾಡಿನ ಯೇರ್ಕಾಡ್ ವೀಕೆಂಡ್ ಪ್ರವಾಸಕ್ಕೆ ಅದ್ಬುತ ಸ್ಥಳ .  ಬ್ಯುಸಿ ಬದುಕನ್ನು ಪಕ್ಕಕ್ಕಿಟ್ಟು ಜಂಜಾಟವನ್ನು ಮರೆತು ಎರೆಡು ದಿನ ಖುಷಿಯಿಂದ ಕಳೆಯಬಹುದಾದ ಜಾಗ ಈ ಯೇರ್ಕಾಡ್ . 
ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯಲ್ಲಿರುವ ಯೇರ್ಕಾಡ್ ಪೂರ್ವ ಘಟ್ಟಗಳ ಸುಂದರ ಸೊಬಗಿನ ತುತ್ತತುದಿ . ಸೇವಾರಯನ್ ದೇವಸ್ಥಾನವನ್ನು ಅತಿ ತುತ್ತ ತುದಿಯಲ್ಲಿ ಹೊಂದಿರುವ ಯೇರ್ಕಾಡ್ 32 ಕಿ ಮೀ ನಷ್ಟು ಒಟ್ಟು  20 ಹೇರ್ಪಿನ್ ಘಾಟಿಯನ್ನು ಹೊಂದಿದೆ . ಸೇಲಂ ಪಟ್ಟಣದಿಂದ ೩೦ ಕಿ ಮೀ ಅಂತರದಲ್ಲಿರುವ ಯೇರ್ಕಾಡ್ ಒಂದು ಪರ್ವತ ಪ್ರದೇಶ . ಈ ಹೇರ್ಪಿನ್ ಘಾಟಿಯಲ್ಲಿ ನೀವು ಮೇಲೆ ಹೋಗುತ್ತಿದ್ದಂತೆ ತಂಪು ಹೆಚ್ಚುತ್ತಾ ಹೋಗುತ್ತದೆ . ಸಾಮಾನ್ಯವಾಗಿ ಕರ್ನಾಟಕದ ಗಡಿ ದಾಟಿ ತಮಿಳುನಾಡು ಪ್ರವೇಶಿಸುತ್ತಿದ್ದಂತೇ  ಬಿಸಿಲಿನ ದಗೆ , ಆದರೆ ಯೇರ್ಕಾಡ್ ಮಾತ್ರ ತಂಪು ತಂಪು . 

ನಮ್ಮ ಪಕ್ಕದ ರಾಜ್ಯ ತಮಿಳುನಾಡಿನ ಯೇರ್ಕಾಡ್ ಬೆಂಗಳೂರಿನಿಂದ ಕೇವಲ ೨೩೦ ಕಿ ಮೀ . ಬಸ್ ,ಟ್ರೈನ್ ಅಥವಾ ವಿಮಾನ ಪ್ರಯಾಣಕ್ಕಿಂತ ಕಾರಿನಲ್ಲಿ ಸ್ನೇಹಿತರು ಅಥವಾ ಕುಟುಂಬದವರೊಡನೆ ಹೋದರೆ ಕೇವಲ ನಾಲ್ಕೂವರೆ ಗಂಟೆ ಪ್ರಯಾಣ . ವೀಕೆಂಡ್ ಟ್ರಿಪ್ ಗೆ ಇದೊಂದು ಬೆಸ್ಟ್ ತಾಣ ಎಂದೇ ಹೇಳಬಹುದು .  ಒಂದು ದಿನ ಹತ್ತಿರದ ರೆಸಾರ್ಟ್ , ಹೋಂ ಸ್ಟೇ ಅಥವಾ ಫಾರ್ಮ್ ಹೌಸ್ ಗಳಲ್ಲಿ ಉಳಿದುಕೊಂಡು ಎರೆಡು ದಿನ ಆರಾಮವಾಗಿ ಬದುಕಿನ ಜಂಜಾಟವನ್ನು ಮರೆತು ಸುತ್ತಾಡಿಕೊಂಡು ಬರಬಹುದು.  ನೋಡಲು ಕೂಡ ಕಣ್ಣು ತಂಪಾಗುವಷ್ಟು ಆಕರ್ಷಣೀಯ ಸ್ಥಳಗಳು ಇಲ್ಲಿವೆ .  

ಈಗಾಗಲೇ ಸುಮಾರು ಎಂಟು ಹೊರ ದೇಶಗಳನ್ನು ಸುತ್ತಿರುವ ನಮಗೆ ನಮ್ಮ ದೇಶವನ್ನು ಸುತ್ತುವ ಆಸೆ . ಹಾಗೆ ಪ್ರತಿ ಭಾರಿ ಸುತ್ತುವಾಗಲು ನಮ್ಮ ದೇಶ ಎಷ್ಟು ಸಂಪದ್ಭರಿತವಾಗಿದೆ ಮತ್ತು ಎಷ್ಟು ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳಿವೆ ಆದರೆ ಅವುಗಳ ಬಳಕೆ ಮತ್ತು ಪ್ರಚಾರ ಮಾತ್ರ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂದೆನಿಸುತ್ತದೆ . 
ತಮಿಳುನಾಡಿನ ಯೇರ್ಕಾಡ್ ಯಾವುದೇ ವಿದೇಶಿ ಸ್ಥಳಗಳಿಗೆ ಕೂಡ ಕಡಿಮೆ ಇಲ್ಲ ಎಂದೆನಿಸಿದ್ದು ಅಲ್ಲಿ ಹೋಗಿ ಲೇಕ್ ಬೋಟಿಂಗ್ ನ ಅನುಭವನನ್ನು ಪಡೆದಾಗ ಅಲ್ಲಿ ಕಾಣುವ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ನೋಡಿದಾಗ. ಡೀರ್ ಪಾರ್ಕ್ ,ಅಣ್ಣ ಪಾರ್ಕ್ ಯೇರ್ಕಾಡ್ ನ ಪ್ರಮುಖ ಆಕರ್ಷಣೆ , ಕೇವಲ ಐದು ರೂಪಾಯಿ ಇಲ್ಲಿನ ಪ್ರವೇಶ ಶುಲ್ಕ ಮತ್ತು ಇವೆಲ್ಲ ಕೇವಲ ಅರ್ಧ ಕಿ ಮೀ ಅಂತರದಲ್ಲೇ ಇರುವುದರಿಂದ ಒಂದು ದಿನಪೂರ್ತಿ ಪ್ರವಾಸಕ್ಕೆ ಈ ಸ್ಥಳ ಸೂಕ್ತವಾಗಿದೆ. 

ಕಿಳಿಯೂರ್ ಜಲಪಾತ :
ಯೇರ್ಕಾಡ್ ಗೆ ಪ್ರವಾಸಕ್ಕೆ ಹೋದವರು ಕಿಳಿಯೂರ್ ಜಲಪಾತವನ್ನು ನೋಡಲೇಬೇಕು.  ಭೋರ್ಗರೆದು ದುಮ್ಮಿಕ್ಕುವ ನೀರು ಮೈ ಸೋಕಿದರೆ ಮಂಜಿನಂತೆ ಕರಗಿಹೋಗಬಹುದಾದಷ್ಟು  ತಣ್ಣೀರು. ಈ ಜಲಪಾತವನ್ನು ತಲುಪಲು ಕನಿಷ್ಠ 200 ಮೆಟ್ಟಿಲುಗಳನ್ನು  ಇಳಿದು ಸುಮಾರು ಒಂದು ಕಿ ಮೀ ನಷ್ಟು ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ ಕೆಳಕ್ಕೆ . ಈ ಜಲಪಾತದ ನೀರು ಬಂಡೆಯ ಮೇಲೆ ಬೀಳುವುದರಿಂದ ಮತ್ತು ಅಲ್ಲಿ ಸಾಕಷ್ಟು ದೊಡ್ಡ ಬಂಡೆಗಳಿರುವುದರಿಂದ ಅಲ್ಲಿ ನೀರಾಡಲು ಮತ್ತು ಸ್ನಾನ ಮಾಡಲು ಅವಕಾಶವಿದೆ. ವಾರಾಂತ್ಯದಲ್ಲಿ ಮಾತ್ರ ಸ್ವಲ್ಪ ಜನರಿರುವುದರಿಂದ ವಾರದ ಮಧ್ಯದಲ್ಲಿ ಹೋದರೆ ನೀರಿನ ಭೋರ್ಗರೆತ ಬಿಟ್ಟರೆ  ನೀರವ ಮೌನ. ಇಲ್ಲಿ ಹೋಗುವಾಗ ಜೊತೆಯಲ್ಲಿ ಕುಟುಂಬದವರೋ ಅಥವಾ ಸ್ನೇಹಿತರೋ ಇದ್ದರೆ  ಹೆಚ್ಚು ಸೂಕ್ತ , ಒಂಟಿಯಾಗಿ ಹೋಗುವುದು ಸೂಕ್ತವಲ್ಲ. ಹೋಗುವಾಗ  ಇಳಿಜಾರಾದ್ದರಿಂದ ಸುಲಭ. ಅಲ್ಲಿ ನೀರಾಡಿ ಪುನಃ ಬರುವಾಗ ಹತ್ತಿ ಮೆಟ್ಟಿಲುಗಳನ್ನು ಹತ್ತಿ ಮೇಲೇರುವುದೇ ಒಂದು ವಿಸ್ಮಯ ಮತ್ತು ಸಾಹಸ. ಒಟ್ಟಾರೆಯಾಗಿ ಈ ಜಲಪಾತವನ್ನು ನೋಡಿ ಆನಂದಿಸದಿದ್ದರೆ ಯೇರ್ಕಾಡ್ ಪ್ರವಾಸ ಸಂಪೂರ್ಣವಾಗುವುದೇ ಇಲ್ಲ. 

ಎಲ್ಲಕ್ಕಿಂತ ಮುಖ್ಯವಾಗಿ ಯೇರ್ಕಾಡ್  ಹೇರ್ಪಿನ್ ಘಾಟ್ ಭಾಗದಲ್ಲಿ ಕಾರಿನಲ್ಲಿ ಡ್ರೈವ್ ಮಾಡುವುದೇ ಒಂದು ಅದ್ಬುತ ಅನುಭವವನ್ನು ನೀಡುತ್ತದೆ. ಬೇಕಾದಲ್ಲಿ ಅಲ್ಲಲ್ಲಿ ನಿಲ್ಲಿಸಿ ಸಣ್ಣಗೆ ಅಲ್ಲಲ್ಲಿ ಬೆಟ್ಟದಿಂದ  ಹರಿಯುವ ಜಲಪಾತವನ್ನು ನೋಡಿ ಆನಂದಿಸಬಹುದು. ಎರೆಡು ದಿನವನ್ನು ಇಲ್ಲಿಯ ಪ್ರಕೃತಿಯ ಮಡಿಲಲ್ಲಿ ಕಳೆದರೆ ಮನಸ್ಸು ಉಲ್ಲಸಿತಗೊಳ್ಳುವುದು ಖಂಡಿತ. 





ಅರ್ಪಿತಾ ಹರ್ಷ