Saturday 6 August 2016

ನಗರ ಕೋಟೆ

Published in Vijayakarnataka July 2016



ಮಾರ್ಚ್ ತಿಂಗಳು ಬಂತೆಂದರೆ ವಿಪರೀತ ಬೇಸಿಗೆ. ಬಿಸಿಲಿನ ಬೇಗೆಯನ್ನು ತಡೆಯುವುದು ಅಸಾಧ್ಯ ಎನಿಸುವುದು ನಿಜ. ಇಂತಹ ಸಮಯದಲ್ಲಿ ಹಸಿರಿನಿಂದ ಕೂಡಿರುವ ತಂಪಾದ ಪ್ರದೇಶಗಳಿಗೆ ಒಂದು ಟ್ರಿಪ್ ಹೋಗಿ ಬಂದರೆ ಅದರ ಮಜವೇ ಬೇರೆ. ಬಿರುಬೇಸಿಗೆಯಲ್ಲಿಯೂ ತಂಗಾಳಿಯನ್ನು ನೀಡುವ ಮನಸ್ಸಿಗೆ ಮುದ ನೀಡುವ ಬೀಚ್ , ಜಲಪಾತ ಇಂತಹ ಪ್ರದೇಶಗಳು ಈ ಸಮಯದಲ್ಲಿ ಆಕರ್ಷಿಸುವುದು ಸಾಮಾನ್ಯ. ಹಾಗೆಯೇ ಮಲೆನಾಡು ಪ್ರದೇಶಗಳಿಗೆ ಹೋದರೆ ಸಾಕಷ್ಟು ಪ್ರವಾಸಿ ಸ್ಥಳಗಳು ಕೈಬೀಸಿ ಕರೆಯುತ್ತವೆ. ಇನ್ನು ಕೋಟೆ , ಕೊಳಗಳನ್ನು ಹೊಂದಿರುವ ಕೆಲವು ಪ್ರವಾಸಿ ಸ್ಥಳಗಳು ನೋಡಲು ಆಕರ್ಷಕವಾಗಿರುವುದಲ್ಲದೇ , ತಣ್ಣನೆಯ ಗಾಳಿ ಬೀಸುವುದರಿಂದ ಎಂಜಾಯ್ ಮಾಡಲು ಬಿಸಿಲು ಅಡ್ಡಬರಲಾರದು. ಅದರಲ್ಲೂ ಅಲ್ಲೇ ಹತ್ತಿರದಲ್ಲಿ ಸಿಗುವ ಸಾಕಷ್ಟು ಹೋಂ ಸ್ಟೇಗಳಲ್ಲಿ ಉಯ್ಯಾಲೆಯಲ್ಲಿ ಕೂತು ಸುತ್ತಲಿನ ಹಸಿರನ್ನು ಸವಿಯುವುದೆಂದರೆ ಪೇಟೆಯ ಜೀವನಕ್ಕೆ ಬೇಸತ್ತ ಜೀವಕ್ಕೊಂದು ಹೊಸ ಹುಮ್ಮಸ್ಸು ಸಿಕ್ಕಂತೆಯೇ ಸರಿ. 
 ಮಲೆನಾಡಿನ ಕಡೆ ಹೋದರೆ ಸ್ವಲ್ಪ ತಂಪು ಎನಿಸುವುದರ ಜೊತೆಗೆ ಅಲ್ಲಿನ ಎಳನೀರು,ಬೆರೆಸಿದ ಮಜ್ಜಿಗೆ ದೇಹಕ್ಕೂ ಮತ್ತು ಸುತ್ತಲಿನ ಹಸಿರು ಕಣ್ಣಿಗೂ ತಂಪು ನೀಡಬಹುದು.

ಪ್ರವಾಸಿ ಸ್ಥಳಗಳಲ್ಲಿ ಕೋಟೆಗಳ ಸೊಬಗು ಕೂಡ ಒಂದು ರೀತಿಯಲ್ಲಿ ಆಕರ್ಷಣೀಯವಾಗಿರುತ್ತದೆ. ಕರ್ನಾಟಕದಲ್ಲಿ ಸಾಕಷ್ಟು ಹೆಸರು ವಾಸಿಯಾಗಿರುವ ಕೋಟೆಗಳಿವೆ. ಕೆಲವು ಕೋಟೆಗಳನ್ನು ಬೆಟ್ಟದ ಮೇಲೆ ಕಟ್ಟಲಾಗಿದ್ದರೆ ಇನ್ನು ಕೆಲವನ್ನು ನದಿ, ಬೀಚ್ ಗಳು ಆವರಿಸಿಕೊಂಡಿವೆ. ಆದರೆ ಇದೆಲ್ಲಕ್ಕಿಂತ ಭಿನ್ನವಾಗಿಯೂ ರಸ್ತೆಯ ಪಕ್ಕದಲ್ಲೇ ಹೆಚ್ಚು ಎತ್ತರವಲ್ಲದ ಪ್ರದೇಶದಲ್ಲಿ ಕೋಟೆ ನೋಡಬೇಕೆಂದರೆ ಅದು ಕಾಣಸಿಗುವುದು ನಗರ ಕೋಟೆ ಎಂದೇ ಹೆಸರುವಾಗಿಯಾಗಿರುವ ಶಿವಪ್ಪನಾಯಕನ ಕೋಟೆ.  ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಅಲ್ಲೇ ಒಂದು ಸ್ವಲ್ಪ ದೂರ ಮಣ್ಣಿನ ರಸ್ತೆಯಲ್ಲಿ ನಡೆದು ಹೋದರೆ  ಈ ಕೋಟೆ ಆರಂಭ.  ಹಸಿರು ಮೈತುಂಬಿಕೊಂಡಿರುವ ಈ ಕೋಟೆಯನ್ನು ಅಲ್ಲಿ ಹೋಗಿಯೇ ಸವಿಯಬೇಕು. 
 ಅಂತಹ ಕೆಲವು ಸುಂದರ ಪ್ರವಾಸಿ ತಾಣಗಳಲ್ಲಿ ನಗರದ ಕೋಟೆಯೂ ಕೂಡ ಒಂದು. ಕೆಳದಿಯ ಶಿವಪ್ಪ ನಾಯಕನ ಹೆಸರು ಕೇಳದವರಿಲ್ಲ. ಶಿಸ್ತಿನ ಶಿವಪ್ಪ ನಾಯಕ ಎಂದೇ ಹೆಸರು ಪಡೆದಿದ್ದ ಈತ ಸಾಕಷ್ಟು ಪ್ರಸಿದ್ಧ ಕೋಟೆಗಳನ್ನು ಕಟ್ಟಿದ್ದಾನೆ. ಅವುಗಳಲ್ಲಿ ಬೇಕಲ್ ಕೋಟೆ ,ಚಂದ್ರಗಿರಿ ಕೋಟೆ ,ಜೊತೆಗೆ ಬಿದನೂರು ಕೋಟೆ ಎಂದು ಕರೆಯಲ್ಪಡುತ್ತಿದ್ದ ಈಗಿನ ನಗರ ಕೋಟೆಯೂ ಒಂದು. 

ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಈ ಕೋಟೆ ಹೊಸನಗರ ತಾಲೂಕಿನಿಂದ ಸುಮಾರು ೧೭ ಕಿ ಮೀ ಅಂತರದಲ್ಲಿದೆ. ೧೬ ನೇ ಶತಮಾನದಲ್ಲಿ ಮಲೆನಾಡು ಮತ್ತು ಬಯಲುಸೀಮೆ ಜೊತೆಗೆ ಕರಾವಳಿ ಭಾಗಗಳನ್ನು ಆಳಿದ ಶಿವಪ್ಪ ನಾಯಕನ ಕೊನೆಯ ಕೋಟೆ ಈ ನಗರ ಕೋಟೆ ಎನ್ನಲಾಗುತ್ತದೆ.ಕೆಳದಿಯ ಶಿವಪ್ಪನಾಯಕನ ಕಾಲದ ಈ ಕೋಟೆ ನೋಡಲೂ ಕೂಡ ಅಷ್ಟೇ ಸೊಗಸಾಗಿದೆ. ಶಿಸ್ತಿನ ಶಿವಪ್ಪನಾಯಕ ಎಂದೇ ಪ್ರಸಿದ್ಧಿಪಡೆದಿದ್ದ ಶಿವಪ್ಪನಾಯಕ ಈ ಕೋಟೆಯ ಸೊಬಗನ್ನು  ಒಳ ಹೊಕ್ಕು ನೋಡಿದಲ್ಲಿ ತಿಳಿಯುತ್ತದೆ. 

 ಶಿವಮೊಗ್ಗದಿಂದ ೮೪ ಕಿ ಮೀ ಅಂತರದಲ್ಲಿರುವ ಈ ನಗರ ಕೋಟೆ ಉಳಿದ ಕೋಟೆಗಳಂತೆ ಬೆಟ್ಟದ ಮೇಲಿಲ್ಲ , ರಸ್ತೆಯ ಪಕ್ಕದಲ್ಲೇ ಇರುವ ಈ ಕೋಟೆ ದೂರದಿಂದಲೇ ನೋಡುಗರನ್ನು ಆಕರ್ಷಿಸುತ್ತದೆ. ಕೋಟೆಯನ್ನು ಸ್ವಲ್ಪ ಎತ್ತರದಲ್ಲಿ ಕಟ್ಟಲಾಗಿದೆಯಾದ್ದರಿಂದ ಇದನ್ನು ಏರಿ ನೋಡಿದರೆ  ಸುತ್ತಲೂ ಉಸಿರು ಬಿಗಿ ಹಿಡಿದು ನೋಡಬಹುದಾದಂತಹ ಸುಂದರ ಹಸಿರು ವನಸಿರಿ ಕಣ್ಣಿಗೆ ರಾಚುತ್ತದೆ. ಉರಿಬಿಸಿಲಿನಲ್ಲೂ ಕೂಡ ತಂಪು ಗಾಳಿಯನ್ನು ಸೂಸುವ ಈ ನಗರ ಕೋಟೆ ನೋಡುವುದೇ ಒಂದು ಸಂತೋಷ ಎನ್ನಬಹುದು. 

ಈ ಕೋಟೆಯನ್ನು ಶಿವಪ್ಪ ನಾಯಕನು ೧೬ನೇ ಶತಮಾನದಲ್ಲಿ ಕಟ್ಟಿದ್ದು ಇದನ್ನು ಬಿದನೂರು ಕೋಟೆ , ಶಿವಪ್ಪನಾಯಕನ ಕೋಟೆ ಎಂದು ಕರೆಯುತ್ತಿದ್ದರಲ್ಲದೇ ಈ ನಗರ ಪ್ರದೇಶವು ಕೆಳದಿಯ ಶಿವಪ್ಪನಾಯಕನ ಆಡಳಿತದ ಕೊನೆಯ ರಾಜಧಾನಿಯಾಗಿತ್ತು ಎನ್ನಲಾಗಿದೆ. ಕೋಟೆಯ ಕೆಲವು ಭಾಗಗಳು ಅಲ್ಲಲ್ಲಿ ನಾಶವಾಗಿದ್ದರೂ ಕೂಡ  ಹಸಿರಿನಿಂದ ಕಂಗೊಳಿಸುತ್ತದೆ. ಕೋಟೆಯ ಒಳಗೆ ಶಿವಪ್ಪನಾಯಕನ ದರ್ಬಾರ್ ಹಾಲ್  ಮತ್ತು ಎರಡು ಕೊಳಗಳನ್ನು ಕೂಡ ಕಾಣಬಹುದು. ಶಿವಪ್ಪನಾಯಕನ ಕಾಲದಲ್ಲಿ ಹೈದರಾಲಿಯು ಈ
ನಗರ ಭಾಗವನ್ನು ವಶಪಡಿಸಿಕೊಂಡುಈ ಪ್ರದೇಶ  ಹೈದರನಗರ ಎಂದು ಕೂಡ ಕರೆಯಲ್ಪಟ್ಟಿತ್ತು. ಈಗ ಈ  ಕೋಟೆ ನಗರ ಕೋಟೆ ಎಂದೇ ಪ್ರಸಿದ್ಧಿಯಾಗಿದ್ದು ಈ ಭಾಗವನ್ನು ನಗರ ಎಂದು ಕರೆಯುತ್ತಾರೆ. 

ಅಲ್ಲಿಂದ ಸುಮಾರು ೬ ಕಿ ಮೀ ಅಂತರದಲ್ಲಿ ದೇವಗಂಗಾ ಎಂಬ ಕೊಳವಿದ್ದು ಇದರ ಸುತ್ತಲೂ ಹಸಿರು ಜೊತೆಗೆ ಇಲ್ಲೊಂದು ದೇವಸ್ಥಾನವೂ ಕೂಡ ಇದೆ. ಈ ಕೊಳವು ದೇವಗಂಗಾ ಕೊಳ ಎಂದೇ ಪ್ರಸಿದ್ಧಿ ಪಡೆದಿದ್ದು, ಕಮಲದ ಹೂವಿನ ಆಕಾರದಲ್ಲಿ ಈ ಕೊಳವನ್ನು ಕಟ್ಟಲಾಗಿದೆ. ಶಿವಪ್ಪನಾಯಕನ ರಾಣಿಯರು ಈ ಕೊಳದಲ್ಲಿ ಸ್ನಾನ ಮಾಡುತ್ತಿದ್ದರು ಅದಕ್ಕಾಗಿ ಈ ದೇವಗಂಗೆ ಕೊಳವು ಇಷ್ಟು ಸುಂದರವಾಗಿ ಕಟ್ಟಲ್ಪಟ್ಟಿದೆ ಎನ್ನಲಾಗುತ್ತದೆ. ಸದಾ ನೀರಿನಿಂದ ಮತ್ತು ಸಣ್ಣ ಮೀನುಗಳಿಂದ  ತುಂಬಿರುವ ಈ ಕೊಳವನ್ನು ನಗರ ಕೋಟೆ ನೋಡಿದ ಪ್ರವಾಸಿಗರು ನೋಡಲೇಬೇಕು. 

ಪ್ರವಾಸಕ್ಕೆ ಸರಿಯಾದ ಸಮಯ : ವರ್ಷದ ಯಾವ ಸಮಯದಲ್ಲಾದರೂ ಮಲೆನಾಡಿನ ಪ್ರದೇಶಗಳಲ್ಲಿ ಪ್ರವಾಸ ಹೋಗಬಹುದಾದರೂ ಡಿಸೆಂಬರ್ ನಿಂದ ಮೇ ಸಮಯದಲ್ಲಿ ಈ ಪ್ರದೇಶ ಹೆಚ್ಚು ತಂಪಾಗಿ ಸೊಗಸಾಗಿರುತ್ತದೆ.  ಜೂನ್ ತಿಂಗಳಿನಿಂದ ಧಾರಾಕಾರವಾಗಿ ಬೋರ್ಗರೆಯುವ ಮಳೆ ಪ್ರವಾಸಕ್ಕೆ ಅಡ್ಡಿ ಉಂಟುಮಾಡಬಹುದು.ಮಳೆಗಾಲದಲ್ಲಿ ಉಂಬಳಗಳು ಈ ಮಲೆನಾಡು ಪ್ರದೇಶಗಳಲ್ಲಿ ಅತಿಯಾಗಿ ಇರುವುದರಿಂದ ಶೂ ಬಳಸುವುದರ ಜೊತೆಗೆ ರೈನ್ ಕೋಟ್  ಕೂಡ ಅತ್ಯಗತ್ಯ.  

ಹತ್ತಿರದ ಪ್ರವಾಸಿ ಸ್ಥಳಗಳು :- ಕೊಡಚಾದ್ರಿ ಮತ್ತು ಕೊಲ್ಲೂರು, ಕೆಳದಿ , ಇಕ್ಕೇರಿ  ಇವುಗಳು ಇಲ್ಲಿಗೆ ಹತ್ತಿರದ ಪ್ರವಾಸಿ ಸ್ಥಳಗಳು. 

ಮಾರ್ಗ : ಬೆಂಗಳೂರಿನಿಂದ ಸುಮಾರು ೩೦೦ ಕಿ ಮೀ ಅಂತರವಿರುವ ನಗರಕ್ಕೆ ಬಸ್ಸು , ಕಾರು , ಮತ್ತು ಟ್ರೈನ್ ಮೂಲಕವೂ ತಲುಪಬಹುದು. ಸುಮಾರು ೮ ಗಂಟೆ ಪ್ರಯಾಣವಿರುವ ಈ ಪ್ರದೇಶಕ್ಕೆ ಬೆಂಗಳೂರಿನಿಂದ ಶಿವಮೊಗ್ಗ ಅಥವಾ ಸಾಗರಕ್ಕೆ ನೇರ ಬಸ್ಸಿನ ಸೌಲಭ್ಯವಿದೆ. ಬೆಂಗಳೂರು - ಸಾಗರ ಟ್ರೈನ್ ಮೂಲಕವೂ ಪ್ರಯಾಣಿಸಬಹುದು.

No comments:

Post a Comment