Monday 3 August 2020

ರಕ್ಷಾಬಂಧನದಿಂದ ಬಾಂಧವ್ಯ ಹೆಚ್ಚಲಿ




ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು ಬೆನ್ನು ತಟ್ಟುವರು ಸಭೆಯೊಳಗೆ ' ಹೀಗೊಂದು ಜಾನಪದ ಗೀತೆ ಹಿಂದೆ ಮನೆಮನೆಯ ಹೆಣ್ಣು ಮಕ್ಕಳು ಹಾಡುತ್ತಿದ್ದರು . ಬಹುತೇಕ ಕನ್ನಡಿಗರರಿಗೆ ಇದರ ಬಗ್ಗೆ ಅರಿವಿರದೇ ಇಲ್ಲ. ಹಾಗೆ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತನ್ನ ರಕ್ಷೆಗೆ ಸಹೋದರನಿದ್ದಾನೆ ಎಂದು ಹೆಮ್ಮೆ ಪಡುತ್ತಾಳೆ. ಹಾಗೆಯೆ ಗಂಡಿಗೆ ಛೇಡಿಸಲು ,ಜೊತೆಗೆ ಬೆಳೆಯಲು ಪ್ರೀತಿಯ ತಂಗಿ ತಾಯಿಯಂತಹ ಅಕ್ಕನ ಅವಶ್ಯಕತೆ ಇದೆ. ಇಂತಹ ಒಂದು ಅದ್ಬುತ ಸಂಬಂಧವನ್ನು ಬಿಂಬಿಸುವ ಅದಕ್ಕಾಗಿ ಕೃತಜ್ಞತೆ ತೋರಿಸುವ ಹಬ್ಬವೇ ರಾಖಿ ಹಬ್ಬ ಅಥವಾ ರಕ್ಷಾಬಂಧನ ಎಂದೇ ಕರೆಸಿಕೊಳ್ಳುವ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ. ರಕ್ಷಾ ಬಂಧನವನ್ನು ರಾಖಿ ಹಬ್ಬ , ರಾಖಿ ಪೂರ್ಣಿಮಾ ಎಂದು ಕೂಡ ಕರೆಯಲಾಗುತ್ತದೆ .

  ಶ್ರಾವಣ ಮಾಸದ ಮೊದಲ ಹುಣ್ಣಿಮೆಯ  ದಿನ ಹಿಂದೂಗಳು ಆಚರಿಸುವ ಈ ಹಬ್ಬ ಭಾರತ ಮತ್ತು ನೇಪಾಳಗಳಲ್ಲಿ ಆಚರಿಸಲಾಗುತ್ತದೆ. ಕೊಲ್ಕತ್ತಾದಲ್ಲಿ ಇದನ್ನು ಹಿಂದೂ ಮುಸ್ಲಿಂಗಳು ಒಬ್ಬರಿಗೊಬ್ಬರು ರಾಖಿ ಕಟ್ಟುವುದರ ಮೂಲಕ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಆಚರಿಸುತ್ತಾರೆ. ಇಂತಹದ್ದೊಂದು ಆಚರಣೆಯನ್ನು ರವೀಂದ್ರನಾಥ್ ಟ್ಯಾಗೋರ್ ಅವರು 1905 ರಲ್ಲಿ ಕೋಲ್ಕತ್ತಾದಲ್ಲಿ ಪ್ರಾರಂಭಿಸಿದರು ಎಂಬುದು ಈಗ ಇತಿಹಾಸ. ರಾಖಿ ಕೇವಲ ಒಡಹುಟ್ಟಿದ ಅಣ್ಣ ತಂಗಿಯ ಮಧ್ಯೆ ಮಾತ್ರವಲ್ಲದೇ ಸಾಕಷ್ಟು ಜನರು ಮನೆಯ ಹೊರಗೆ ಕೂಡ ಸಾಕಷ್ಟು ಅಣ್ಣ ತಮ್ಮಂದಿರನ್ನು ಹುಡುಕಿಕೊಂಡು ರಾಖಿ ಕಟ್ಟಿ ರಕ್ಷಣೆಯ ಭರವಸೆಯನ್ನು ಕಂಡು ಕೊಂಡಿದ್ದಾರೆ.

  ರಕ್ಷಾಬಂಧನದ ದಿನ ಸಹೋದರಿಯರು ತಮ್ಮ ಸಹೋದರಿಗೆ ರಾಖಿಯನ್ನು ಕಟ್ಟಿ ಸಿಹಿ ತಿನಿಸಿ ಸಂಭ್ರಮಿಸಿದರೆ ಸಹೋದರರು ರಾಖಿ ಕಟ್ಟಿದ ತಂಗಿ ಅಥವಾ ಅಕ್ಕಂದಿರಿಗೆ ತಮ್ಮ ಕೈಲಾದ ಉಡುಗೊರೆಯನ್ನು ನೀಡುವುದು ಸಾಮನ್ಯವಾಗಿ ಮೊದಲಿನಿಂದ ನಡೆದುಕೊಂಡು ಬಂದಿರುವ ಹಬ್ಬದ ಪದ್ಧತಿಯಾಗಿದೆ.    
  ಈ ರಾಖಿ ಹಬ್ಬ ಈಗಿನದಲ್ಲ ಪುರಾಣದಿಂದಲೂ ನಡೆದುಕೊಂಡು ಬಂದಿದೆ ಎಂಬುದಕ್ಕೆ ದ್ರೌಪದಿ ಮತ್ತು ಕೃಷ್ಣ ರ ಅಣ್ಣ ತಂಗಿಯ ದ್ರೌಪದಿ ವಸ್ತ್ರಾಪಹರಣವೇ ಸಾಕ್ಷಿ  ಎಂಬುದನ್ನು ತಿಳಿಯದವರಿಲ್ಲ. ದ್ರೌಪದಿಯ ವಸ್ತ್ರಾಪಹರಣ ಮಾಡುವ ಸಂದರ್ಭದಲ್ಲಿ ಆಕೆ ಕೃಷ್ಣನನ್ನು ತನ್ನ ರಕ್ಷಿಸುವಂತೆ ಮೊರೆ ಹೋಗುವುದು ಮತ್ತು ಶ್ರೀ ಕೃಷ್ಣ ಆಕೆಯನ್ನು ರಕ್ಷಿಸುವುದನ್ನು ಕೂಡ ರಕ್ಷಾ ಬಂಧನದ ಸಂಕೇತವಾಗಿ ಪರಿಗಣಿಸಲಾಗಿದೆ.
ಹಾಗೆಯೇ ಇನ್ನೊಂದು ಸಂದರ್ಭದಲ್ಲಿ ಶಿಶುಪಾಲನನ್ನು ಕೊಳ್ಳಲು ಕೃಷ್ಣನು ಸುದರ್ಶನ ಚಕ್ರವನ್ನು ಬೀಸುತ್ತಾನೆ ಆಗ ಕೃಷ್ಣನ ಕೈಬೆರಳಿಗೆ ಸ್ವಲ್ಪ ತಾಗಿ ರಕ್ತ ಸುರಿಯಲಾರಂಭಿಸುತ್ತದೆ ಈ ಸಂದರ್ಭದಲ್ಲಿ ದ್ರೌಪದಿಯು ತನ್ನ ಸೀರೆಯ ಅಂಚನ್ನು ಹರಿದು ಕೃಷ್ಣ ಕೈಬೆರಳಿಗೆ ಸುತ್ತಿ ರಕ್ತ ಸುರಿಯುವುದನ್ನು ನಿಲ್ಲಿಸುತ್ತಾಳೆ. ಹೀಗೆ ರಕ್ಷಾ ಬಂಧನ ಎಂದರೆ ಕೇವಲ ಅಣ್ಣ ತಂಗಿಯನ್ನು ರಕ್ಷಿಸುವುದು ಮಾತ್ರವಲ್ಲ ಸಮಯ ಬಂದಲ್ಲಿ ಸಹೋದರಿಯರು ಕೂಡ ಸಹೋದರರ ಜೊತೆಗೂಡಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಲ್ಲುತ್ತದೆ.

ಪುರಾಣಗಳಲ್ಲಿ ಮಾತ್ರವಲ್ಲ ಇತಿಹಾಸದಲ್ಲೂ ರಕ್ಷಾಬಂಧನವನ್ನು ಉಪಯೋಗಿಸಿಕೊಂಡ ಉದಾಹರಣೆಗಳು ಉಲ್ಲೇಖವಾಗಿವೆ . ವಿಧವೆಯಾದ ಚಿತ್ತೂರಿನ ರಾಣಿ ಕರ್ಣಾವತಿಯು ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ಮೊಘಲರ ರಾಜ ಹುಮಾಯೂನ್ ನಿಗೆ ರಾಖಿಯನ್ನು ಕಳಿಸಿ ರಕ್ಷಣೆಯ ಮೊರೆಹೋಗುತ್ತಾಳೆ ಮತ್ತು ಇದಕ್ಕೆ ಒಪ್ಪಿದ ಹುಮಾಯುನ್ ರಾಣಿ ಕರ್ಣಾವತಿಯ ಬೆಂಬಲಕ್ಕೆ ಬರುತ್ತಾನೆ ಎಂಬುದು ಇತಿಹಾಸದಲ್ಲೂ ದಾಖಲಿಸಲಾಗಿದೆ.   
ಭಾರತದಾದ್ಯಂತ ಸಂಭ್ರಮದಿಂದ ಆಚರಿಸುವ ಈ ಹಬ್ಬ ಹೊರ ದೇಶಗಳಲ್ಲಿ ಕೂಡ ಭಾರತೀಯರು ತಪ್ಪದೆ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಖಿಯನ್ನು ಆನ್ಲೈನ್ ಮೂಲಕ ಸ್ವಂತ ಅಣ್ಣ ತಮ್ಮಂದಿರಿಗೆ ಮನೆಗೇ ಕಳಿಸುವ ಅವಕಾಶವಿದೆ. ಅಷ್ಟೇ ಅಲ್ಲದೆ ರಾಖಿಯನ್ನು ಚಿಕ್ಕ ಮಕ್ಕಳು ಕೂಡ ಆಚರಿಸಿ ನಮ್ಮ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ. 

ಈಗಂತೂ ರಾಖಿ ಹಲವಾರು ಬಗೆಗಳಲ್ಲಿ ಲಭ್ಯ. ಚಿಕ್ಕ ಮಕ್ಕಳು ಒಬ್ಬರಿಗೊಬ್ಬರು ರಾಖಿ ಕಟ್ಟಿ ಸಂತೋಷ ಪಡಲು ಕಾರ್ಟೂನ್ ಗಳನ್ನು ಒಳಗೊಂಡ ರಾಖಿಗಳು , ಹಾಗೆಯೇ  ಪರಿಸರಕ್ಕೆ ಹೊರೆಯಾಗದಂತ ಭೂಮಿಯಲ್ಲಿ ಕರಗುವ ಪರಿಸರಸ್ನೇಹಿ ರಾಖಿಗಳು , ಪೊಂ ಪೊಂ ರಾಖಿ , ವುಲ್ಲನ್ ನಲ್ಲಿ , ಬಟ್ಟೆಯಲ್ಲಿ ಮಾಡಿದ ರಾಖಿಗಳು , ಇನ್ನು ಫೋಟೋ ರಾಖಿಗಳು , ಸಂಗೀತ ಹೊಮ್ಮಿಸುವ ರಾಖಿಗಳು . ಅಷ್ಟೇ ಏಕೆ ಬ್ರೇಸ್ ಲೈಟ್ ನಂತಹ ಬಂಗಾರ ಬೆಳ್ಳಿಗಳ್ಲಲೂ ಕೂಡ ರಾಖಿ ಮಾಡಿಸಿ ಕೊಡಬಹುದು.

ಹೀಗೆ ರಾಖಿ ಪೂರ್ಣಿಮೆಗೆ ತನ್ನದೇ ಆದ ವಿಶೇಷತೆ ಇದೆ . ಇದೇ ಆಗಸ್ಟ್ ಮೂರರಂದು ರಾಖಿ ಹಬ್ಬ . ಕರೋನದಿಂದಾಗಿ ತವರೂರಿಗೆ ಹೋಗಲಾರದಿದ್ದರೇನಂತೆ ಈಗಂತೂ ಆನ್ಲೈನ್ ವ್ಯಯಸ್ಥೆ ಇದೆ . ಇನ್ನೇಕೆ  ತಡ ಈಗಲೇ ನಿಮ್ಮ ಸಹೋದರರಿಗೆ ರಾಖಿ ಕಳಿಸಿ ಸಂಭ್ರಮ ಆಚರಿಸಿ. 


Arpitha Rao 
Banbury 

United kingdom 

No comments:

Post a Comment