Tuesday 28 January 2020

ಗಂಟು ಮೂಟೆ



ಆ ಚಿತ್ರ ಪ್ರಾರಂಭವಾಗುವುದೇ ಹಾಗೆ ಚಲನಚಿತ್ರದ ಮೇಲೆ ಅತೀವ ಹುಚ್ಚನ್ನು ಹಚ್ಚಿಕೊಂಡಿರುವ ಹೆಣ್ಣು ಮಗಳು ಒಂಟಿಯಾಗಿ ಮೂವಿ ನೋಡಲು ಹೋದಾಗ ಅನಿವಾರ್ಯವಾಗಿ ಶೋಷಣೆಗೆ  ಒಳಗಾಗಿ ತತ್ತರಿಸಬೇಕಾಗುತ್ತದೆ . ಹಾಗಂತ ಇದು ಹೆಣ್ಣಿನ ಶೋಷಣೆಗೆ ಸಂಬಂಧ ಪಟ್ಟ  ಕಥೆಯಲ್ಲ. ಜೀವನದ ಪಯಣದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಗಂಟು ಮೂಟೆ ಕಟ್ಟಿಕೊಂಡು ಓಡಾಡುತ್ತಿರುವವರೇ . ನಾವು ಇರುವಷ್ಟು ದಿನ ನಮ್ಮ ಜೊತೆ ಕೆಲವು ಮರೆಯಲಾರದ ನೆನಪುಗಳನ್ನು ಹೊತ್ತು ಸಾಗುವುದು ಅನಿವಾರ್ಯ ಕೂಡ.  ಅಂತಹ ಒಂದು ಪ್ರಯಾಣವನ್ನು ತಿಳಿಸುವ ಚಿತ್ರವೇ ರೂಪ ರಾವ್ ನಿರ್ದೇಶನದ ಗಂಟು ಮೂಟೆ . ಒಂದು ಮುಗ್ದ ವಯಸ್ಸಿನ ಹೆಣ್ಣು ಮಗಳು  ವಯಸ್ಸಿಗೆ ಮೀರಿ ಪ್ರೀತಿಯಲ್ಲಿ ಮುಳುಗಿ ತನ್ನ ಬದುಕನ್ನೇ ಹೇಗೆ ತಿರುಗಿಸಿಕೊಳ್ಳಬಲ್ಲಳು ಎಂಬುದನ್ನು ಈ ಚಿತ್ರ ಮನದಟ್ಟು ಮಾಡುತ್ತದೆ. ಹದಿಹರೆಯದಲ್ಲಿ ಕಾಡುವ ಪ್ರೀತಿ ಹೇಗೆ ಜೀವನ ಪರ್ಯಂತ ಮರೆಯಲಾರದೆ ಬೆನ್ನತ್ತ್ತಿ ಬಂದುಬಿಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಿದೆ .ಚಿತ್ರದಲ್ಲಿ ಕಂಡು ಬರುವ ಕೆಲವು ಘಟನೆಗಳು ಬಹುತೇಕ ಜನರು ಶಾಲಾ ಕಾಲೇಜುಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸಿರುವುದು ನಿಜವಾದ್ದರಿಂದ ನೋಡುಗರನ್ನು ನೆನಪಿನ ಲೋಕಕ್ಕೆ ಕರೆದುಕೊಂಡು ಹೋಗಬಹುದಾದ ಚಿತ್ರವಿದು.

ಚಲನಚಿತ್ರ ನೋಡಿ , ಪ್ರೀತಿಯ ಬರಹಗಳನ್ನು ಬರೆದು , ಚಲನಚಿತ್ರದ ಹೀರೋ ಗಳ ಮೇಲೆ ಬೆಳೆಯುವ ಪ್ರೀತಿ ಕೊನೆಗೆ ತನಗೂ ಅಂತಹದೇ ಒಂದು  ಹುಡುಗನನ್ನು ಹುಡುಕುವಲ್ಲಿ ತಲ್ಲಣಿಸುತ್ತದೆ ಎಂದು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರಬುದ್ಧವಾಗಿ ಬೆಳೆಯುವ ಮೊದಲೇ ಇಂತಹ ಆಸೆಗಳಿಗೆ ಒಳಗಾಗುವ ಹೆಣ್ಣು ಮುಂದೇನಿಲ್ಲ ಅನುಭವಿಸಬೇಕಾಗಬಹುದು ಎಂಬುದನ್ನು ತೋರಿಸುವ ಪ್ರಯತ್ನ ರೂಪ ರಾವ್ ಮಾಡಿದ್ದಾರೆ .   ಚಲನ ಚಿತ್ರ ಸಂಪೂರ್ಣವಾಗಿ ೯೦ ರ ದಶಕದಲ್ಲಿ ನಡೆದಿರಬಹುದಾದ ಘಟನೆಗಳಂತೆ ಪತ್ರ ಮತ್ತು ಲ್ಯಾಂಡ್ಲೈನ್ ಫೋನ್ ಇಂತವನ್ನೆಲ್ಲ ತೋರಿಸಿದರೂ ಕೂಡ ಹೆಚ್ಚಿನ ಕಡೆ ಇದು ಇಂದಿಗೂ ಕೂಡ ಅನ್ವಯಿಸುತ್ತದೆ ಎಂದು ನನ್ನ ಅಭಿಪ್ರಾಯ. ಇಂದು ಕೂಡ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ಇಂತಹ ಆಸೆ ಆಕಾಂಕ್ಷೆಗಳು ಸಹಜ ಮತ್ತು ಅದು ಕೂಡ ಇಂತಹದೇ ಪರಿಣಾಮವನ್ನು ಬೀರಿದ ಉದಾಹರಣೆಗಳನ್ನು ನಮ್ಮ ಸುತ್ತಮುತ್ತಲೇ ಕಾಣಬಹುದು. ಈಗಿನ ಹೈಸ್ಕೂಲ್ ಮತ್ತು ಕಾಲೇಜಿನ ಮಕ್ಕಳು ಈ ಚಿತ್ರವನ್ನು ನೋಡಿ ತಾವೂ ಹೀಗಾಗಬಾರದು ಎಂಬುದನ್ನು ಮನಗೊಳ್ಳಬೇಕು ಎಂಬ ಸಂದೇಶವನ್ನು ಸಾರ ಹೊರಟಿರುವ ಚಿತ್ರವಿದು . ಆದರೆ ಅಲ್ಲಲ್ಲಿ ಕಂಡು ಬರುವ ಅಗತ್ಯಕ್ಕಿಂತ ಹೆಚ್ಚೆನಿಸುವ ಪ್ರೇಮಕ್ಕಿಂತ ಆ ಸಮಯದಲ್ಲಿ ಕಂಡುಬರುವ ಬಯಕೆಯನ್ನು ತೋರಿಸುವ ಕಿಸ್ಸಿಂಗ್ ಸೀನ್ ಗಳು ಮುಜುಗರ ಉಂಟು ಮಾಡುವಂತೆಯೂ ಅದರ ಅವಶ್ಯಕತೆ ಇರಲಿಲ್ಲ ಎಂದು ಕೂಡ ಅನ್ನಿಸುತ್ತದೆ.  ಹದಿಹರೆಯದ ಪ್ರೀತಿ ಹೇಗೆ ಮಕ್ಕಳ ಜೀವನವನ್ನೇ ಹಾಳುಮಾಡಿಬಿಡಬಲ್ಲದು ಎಂಬುದನ್ನು ಇಲ್ಲಿ ತೋರಿಸಲಾಗಿದೆ.  ಹದಿಹರೆಯದ ಸಮಯದಲ್ಲಿ ಹುಟ್ಟುವ ಮೊದಲ ಪ್ರೀತಿ ಕೊನೆಯವರೆಗೂ ಇರುತ್ತದೆಯೋ ಇಲ್ಲವೋ ಆದರೆ ಅದರ ನೆನಪು ಮಾತ್ರ ಕಾಡುವುದು ಖಂಡಿತ ಎಂಬುದು ಈ ಚಲನಚಿತ್ರದ ಪೂರ್ಣ ಸಂದೇಶ. ಅಂತಹ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರ ಇಡೀ ಇಬ್ಬರ ಜೀವನವನ್ನೇ ಹಾಳುಮಾಡಿಬಿಡಬಹುದು ಅಥವಾ ಒಂದು ವ್ಯಕ್ತಿತ್ವವನ್ನು ರೂಪಿಸಲು ಬುನಾದಿ ಆಗಿಬಿಡಬಹುದು ಎಂಬುದನ್ನು ತೋರಿಸಿರುವ ಚಿತ್ರವಿದು. ಕಥಾನಾಯಕಿಯನ್ನೇ ಮುಖ್ಯವಾಗಿ ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ತೇಜು ಬೆಳವಾಡಿಯವರ ಪಾತ್ರ ಸಹಜ ಸುಂದರವಾಗಿ ಮೂಡಿ ಬಂದಿದೆ.
ಚಿತ್ರದಲ್ಲಿ ಬರುವ ಹಾಡುಗಳು ಒಳ್ಳೆಯ ಸಾಹಿತ್ಯವನ್ನು ಹೊಂದಿದ್ದು , ಕಾಲೇಜಿನ ಮಕ್ಕಳ ಮನಸ್ಥಿತಿ ಸಾರುತ್ತದೆ. ಕಥೆಗೆ ತಕ್ಕ ಪಾತ್ರವನ್ನು ಮಾಡುವಲ್ಲಿ ನಿಶ್ಚಿತ್ ಮತ್ತು ತೇಜು ಬೆಳವಾಡಿ ಇಬ್ಬರೂ ಯಶಸ್ವಿಯಾಗಿದ್ದಾರೆ. ಕಥಾ ನಾಯಕನಾದ ನಿಶ್ಚಿತ್ ಕೂಡ ಚಲನಚಿತ್ರ ಮುಗಿದ ನಂತರವೂ ಮನಸ್ಸಿನಲ್ಲಿ ಉಳಿಯುತ್ತಾರೆ . ನೀವೂ ಒಮ್ಮೆ ಈ ಚಲನಚಿತ್ರ ವೀಕ್ಷಿಸಿ ಮತ್ತು ಹಳೆಯ ದಿನಗಳ ಮೆಲುಕುಹಾಕಿ.

Arpitha Rao
Banbury 

No comments:

Post a Comment