Friday 10 November 2017

ಕಲಸಿ ಒಂದು ಐತಿಹಾಸಿಕ ಸ್ಥಳ

Published in vijayakarnataka 15/10/2017


ಮಲೆನಾಡಿನ ಯಾವುದೇ ಪ್ರದೇಶಗಳಿಗೆ ಹೋದರೆ ಸುತ್ತಲೂ ಹಸಿರು , ತೆನೆ ತುಂಬಿದ ಗದ್ದೆ , ಅಡಿಕೆ ಮರಗಳು ಹಾಗೆಯೇ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಮಾರಾಟಕ್ಕೆ ಇಟ್ಟ  ಅನಾನಸ್ ಮತ್ತು ಪೇರಳೆ ಹಣ್ಣುಗಳ ಪುಟ್ಟ ಅಂಗಡಿ , ಸಂಜೆ ಆಗುತ್ತಿದ್ದಂತೆ ಈರುಳ್ಳಿ ಬಜ್ಜಿ , ಮಸಾಲೆ ಪೂರಿ ಅಂಗಡಿಗಳು ಕಾಣುವುದು ಸಾಮಾನ್ಯ. ಅದರಲ್ಲು ನೀವು ಮಳೆಗಾಲದಲ್ಲಿ ಹೋದರೆ ಧೋ ಎಂದು ಸುರಿಯುವ ಮಳೆ ಜೊತೆಗೆ ಮಲೆನಾಡಿನ ಫಿಲ್ಟರ್ ಕಾಫಿ  ಎಂದೂ ಮರೆಯಲಾರಿರಿ. ಸುರಿಯುತ್ತಿರುವ ಮಳೆಯಲ್ಲಿ ಗದ್ದೆ ಕೆಲಸ ಮುಗಿಸಿ ಕಂಬಳಿ ಕೊಪ್ಪೆ ಹಾಕಿಕೊಂಡು ಮನೆ ಕಡೆ ಹೊರಡುತ್ತಿರುವವರು ರಸ್ತೆ  ಬದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಹಾಗೆಯೇ ಇಲ್ಲಿ ನೋಡಲೂ ಕೂಡ ಸಾಕಷ್ಟು ಪ್ರವಾಸಿ ಸ್ಥಳಗಳು ಇರುವುದು ಕೂಡ ಅಷ್ಟೇ ಆಕರ್ಷಣೀಯ. 
ನಾವು ಲಂಡನ್ ನಿಂದ ಪ್ರತಿ ಭಾರಿ ಊರಿಗೆ ಹೋದಾಗಲೂ ಎಲ್ಲಾದರೂ ಒಂದೆರಡು ಕಡೆ ಪ್ರವಾಸಕ್ಕೆಂದು ಹೋಗುವುದು ರೂಡಿ . ಹಾಗೆಯೇ ಈ ಭಾರಿ ನಮ್ಮ ಪ್ರಯಾಣ ಹೋಗಿದ್ದು ಸಾಗರದಿಂದ ೧೦ ಕಿ ಮೀ ಅಂತರದಲ್ಲಿರುವ ಕಲಸಿ. ಕಲಸಿ ಊರನ್ನು ನಾಡ ಕಲಸಿ ಎಂದು ಕೂಡ ಕರೆಯುತ್ತಾರೆ.

 ಸಾಗರ ಮತ್ತು ಸೊರಬ (ಉಳವಿ) ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಸಿಗುವ ಕಲಸಿ  ಬೋರ್ಡ್  ಇರುವ ರಸ್ತೆಯಲ್ಲಿ ಒಂದೆರಡು ಕಿ ಮೀ ಒಳಹೋದರೆ ಸಿಗುವುದೇ ಕಲಸಿ ಗ್ರಾಮ. ಇಲ್ಲಿನ  ವಿಶೇಷತೆ ಎಂದರೆ ಇಲ್ಲಿ ಎರಡು ಕಲ್ಲಿನ ದೇವಾಲಯಗಳು ಒಂದೇ ಭಾಗದಲ್ಲಿ ಕಟ್ಟಲಾಗಿದೆ. ಒಂದು ದೊಡ್ಡ ಕಾಂಪೌಂಡ್ ನಲ್ಲಿ ಪುರಾತನ ಕಾಲದ ಕಲ್ಲಿನ ಎರಡು ದೇವಾಲಯಗಳಿವೆ. ಇದೊಂದು ಐಸಿಹಾಸಿಕ ದೇವಾಲಯವಾಗಿದ್ದು ಈಗಲೂ ಪ್ರತಿದಿನ ಪೂಜೆ ನಡೆಯುತ್ತಿದೆ. 

ಈ ದೇವಾಲಯವು ಹನ್ನೆರಡನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಇದನ್ನು ಹೊಯ್ಸಳರ ಕಾಲದಲ್ಲಿ ಕಟ್ಟಲಾದ ದೇವಾಲಯ ಎನ್ನಲಾಗುತ್ತದೆ. ಇಲ್ಲಿ ಹೊಯ್ಸಳರ ಶಿಲ್ಪಕಲೆಯಲ್ಲಿ ದೇವಾಲಯದ ಸುತ್ತಲೂ ಸಾಕಷ್ಟು ಕಲಾಕೃತಿಗಳನ್ನು ಕಾಣಬಹುದಾಗಿದೆ. ೧೨ ನೇ ಶತಮಾನದಲ್ಲಿ ಜಕ್ಕಣ  ಮತ್ತು ಢಕ್ಕಣ ಎಂಬುವವರು ಈ ದೇವಾಲಯವನ್ನು ಕಟ್ಟಿದರು ಎಂಬ 
ಮಾಹಿತಿಯನ್ನು ಇಲ್ಲಿನ ಕಲ್ಲಿನಲ್ಲಿ ಕೆತ್ತಲಾಗಿದೆ. ಇಲ್ಲಿ ಗಾರ್ಡ್ ಕೂಡ ಇರುವುದರಿಂದ ನೀವು ಹೋದಾಗ ಈ ಸ್ಥಳದ ಇತಿಹಾಸದ ಮಾಹಿತಿಯನ್ನು ಕೂಡ ಪಡೆಯಬಹುದು. 

ಇಲ್ಲಿರುವ ಎರಡು ದೇವಾಲಯಗಳು ಮಲ್ಲಿಕಾರ್ಜುನ ಮತ್ತು ನೀಲಕಂಠೇಶ್ವರ ದೇವಾಲಯವಾಗಿದ್ದು ,ಸಂಪೂರ್ಣ ಕಲ್ಲಿನಿಂದ ಕೆತ್ತಲಾದ ಈ ದೇವಾಲಯದ ಶಿಲೆಯನ್ನು ಸೋಮನಾಥ ಶಿಲೆ ಎಂದೇ ಕರೆಯಲಾಗುತ್ತದೆ ಎಂಬುದು ಇಲ್ಲಿ ಸಿಗುವ ಮಾಹಿತಿ.  ದೇವಾಲಯದ ನೆಲದಲ್ಲಿ ಈಗಲೂ ಕಾಣಸಿಗುವ ಪಗಡೆ ಆಟದ ಚಿನ್ಹೆ ,ಆನೆ,ಸಿಂಹ  ಮತ್ತಿತರ ಪ್ರಾಣಿಗಳ ನೀಲನಕ್ಷೆ ಇವುಗಳು ಯಾವುದೋ ಕಾಲದಲ್ಲಿ ಇಲ್ಲಿ ರಾಜರು ವಾಸಿಸುತ್ತಿದ್ದರು ಮತ್ತು ಇದನ್ನೆಲ್ಲಾ ಆಡಲು ಬಳಸುತ್ತಿದ್ದರು ಎಂಬುದನ್ನು ತೋರಿಸುತ್ತದೆ. ದೇವಾಲಯದ ಹೊರಭಾಗದಲ್ಲೂ ಕೂಡ ಆನೆ ಮತ್ತು ಸಿಂಹದ ಕೆತ್ತನೆಗಳನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ  ಈ ಜಾಗವನ್ನು ಕೆಳದಿ ಅರಸ ಚೌಡಪ್ಪ ನಾಯಕನಿಗೆ ನೀಡಲಾಯಿತು ಎಂಬುದನ್ನು ಕೂಡ ಹೇಳಲಾಗುತ್ತದೆ.  
ಸಂಪೂರ್ಣ ಸೋಮನಾಥ ಶಿಲೆಯಲ್ಲಿರುವ ಈ ದೇವಾಲಯವನ್ನು ಕೆಳದಿ , ಇಕ್ಕೇರಿ ದೇವಾಲಯವನ್ನು ನೋಡಲು ಹೋಗುವಾಗ ನೋಡಲು ಮರೆಯದಿರಿ. ಹತ್ತಿರದಲ್ಲೇ ಜಗತ್ಪ್ರಸಿದ್ಧ ಜೋಗ ಜಲಪಾತ ಇರುವುದರಿಂದ ಮಳೆಗಾಲದಲ್ಲಿ ಈ ಸ್ಥಳಕ್ಕೆ ಹೋದವರು ಕಲಸಿ ದೇವಾಲಯವನ್ನು ಅಲ್ಲಿನ ಸುತ್ತಲಿನ ಹಸಿರಿನ ಸೊಬಗನ್ನು ನೋಡಿ ಆನಂದಿಸಿ ಬರಬಹುದು. ಒಟ್ಟಾರೆಯಾಗಿ ಪಟ್ಟಣದ ನೂಕು ನುಗ್ಗಲಿಕೆ ಬೇಸತ್ತ ಜನರಿಗೆ ಮಲೆನಾಡಿನ ಹಳ್ಳಿ , ತಂಪುಗಾಳಿ , ಅಲ್ಲಿನ ಸುಂದರ ವಾತಾವರಣ ಮುದ ಕೊಡುವುದು ಖಂಡಿತ .

ತಲುಪುವ ಮಾರ್ಗ :- ಬೆಂಗಳೂರಿನಿಂದ ಸಾಗರಕ್ಕೆ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ರೈಲು ಮಾರ್ಗವಾಗಿ ತಲುಪಿ ಸಾಗರದಿಂದ ದೊರೆಯುವ ಬಾಡಿಗೆ ಕಾರಿನಲ್ಲಿ ಕೂಡ ತಲುಪಬಹುದು. 
ಸ್ವಂತ ಕಾರಿನಲ್ಲಿ ಬೆಂಗಳೂರಿನಿಂದ ಬರುವವರಿಗೆ ಇದು ಸುಮಾರು ೩೬೦ ಕಿ ಮೀ ಅಂತರವಾಗುತ್ತದೆ. 
ಬೆಂಗಳೂರಿನಿಂದ ಸಾಕಷ್ಟು ರಾತ್ರಿ ಮತ್ತು ಹಗಲು ಬಸ್ಸುಗಳು ನೇರವಾಗಿ ಸಾಗರಕ್ಕೆ ಇದೆ. 

ಹತ್ತಿರದ ಪ್ರವಾಸಿ ಸ್ಥಳಗಳು : ಜೋಗ ಜಲಪಾತ , ಕೆಳದಿ , ಇಕ್ಕೇರಿ 

Arpitha Harsha 

No comments:

Post a Comment